ಕೆಂಪೇಗೌಡ: ಸಂಗ್ರಹಿಸಿದ ಮಣ್ಣು ಸಾಂಕೇತಿಕವಾಗಿ ಪ್ರತಿಮೆಗೆ ಅರ್ಪಣೆ
ಬೆಂಗಳೂರು, ನವೆಂಬರ್ 09: ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಮಣ್ಣು ಸಂಗ್ರಹಿಸಿದ ರಥಗಳನ್ನು (ವಾಹನ) ಬುಧವಾರ ಬೆಂಗಳೂರಿನಲ್ಲಿ ಬರಮಾಡಿಕೊಳ್ಳಲಾಯಿತು. ಪ್ರತಿಮೆಯ ನಾಲ್ಕು ಗೋಪುರಗಳ ಪೈಕಿ ಒಂದಕ್ಕೆ ಮಣ್ಣನ್ನು ಸಾಂಕೇತಿಕವಾಗಿ ಸಮರ್ಪಿಸಲಾಯಿತು.
ರಾಜ್ಯಾದ್ಯಂತ 15 ದಿನಗಳ ಕಾಲ ನಡೆದ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನವು ಸಂಪನ್ನಗೊಂಡಿದೆ. ಬುಧವಾರ 11 ಗಂಟೆಗೆ ಸುಮುಹೂರ್ತದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಮೃತ್ತಿಕೆ ಸ್ವೀಕಾರ ಕಾರ್ಯಕ್ರಮ ನಡೆಯಿತು. 31 ಜಿಲ್ಲೆಗಳಿಂದ ಮೃತ್ತಿಕೆ ಸಹಿತ ಆಗಮಿಸಿದ್ದ ವಿಶೇಷ ರಥಗಳನ್ನು ವಿಧಿಬದ್ಧವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಮಣ್ಣಿಗೆ ಪೂಜೆ ಸಲ್ಲಿಸಿ ನಂತರ ಕಾರ್ಯಗಳನ್ನು ನೆರವೇರಿಸಲಾಯಿತು.
ಸಂಸತ್ತಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವಂತೆ ಮೋದಿಗೆ ದೇವೇಗೌಡ ಪತ್ರ
ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಹಾಗೂ ಕೆಂಪೇಗೌಡರ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಡಾ.ಸಿ.ಎನ್. ಅಶ್ವಥ್ ನಾರಾಯಣ್, ಕೆಂಪೇಗೌಡರ ಹೆಸರು ಕರ್ನಾಟಕದಲ್ಲಿ ಅಖಂಡತೆಯ ಭಾವನೆಯನ್ನು ಮೂಡಿಸಲು 15 ದಿನಗಳ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ರಾಜ್ಯಾದ್ಯಂತ 21 ವಿಶೇಷ ವಾಹನಗಳು 22 ಸಾವಿರ ಸ್ಥಳಗಳಿಗೆ ಭೇಟಿ ಕೊಟ್ಟಿವೆ.
ಈ ರಥಗಳು 3.61 ಕೋಟಿಗೂ ಹೆಚ್ಚು ಜನರನ್ನು ಸಂಪರ್ಕಿಸಿದ್ದು, 20 ಸಾವಿರ ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಿವೆ. ಅಭಿಯಾನದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಂಡ ಪ್ರಚಾರ ಮೂಲಕ 64 ಲಕ್ಷ ಜನರನ್ನು ತಲುಪಲಾಗಿದೆ ಎಂದರು.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪ್ರತಿಮೆ
ಪ್ರಪಂಚದ ಯಾವ ನಗರದಲ್ಲೂ ಅಲ್ಲಿಯ ಸಂಸ್ಥಾಪಕರ ಇಷ್ಟು ಎತ್ತರದ ಪ್ರತಿಮೆ ಇಲ್ಲ. ಈ ಮೂಲಕ ಕೆಂಪೇಗೌಡರ ಪ್ರತಿಮೆಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದೆ. ಪ್ರತಿಮೆ ಮತ್ತು 23 ಎಕರೆ ಥೀಮ್ ಪಾರ್ಕ್ಗೆ ಒಟ್ಟು 84 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದು ಅಶ್ವಥ್ ನಾರಾಯಣ್ ವಿವರಿಸಿದರು.
ನವೆಂಬರ್ 11 ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಅಂದು ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ.
ಮಣ್ಣು ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ, ಎಂ.ಟಿ.ಬಿ. ನಾಗರಾಜ್ ಸಂಸದರಾದ ಡಿ.ವಿ.ಸದಾನಂದಗೌಡ ಮತ್ತು ಬಿ.ಎನ್.ಬಚ್ಚೇಗೌಡ, ನಟ ಜಗ್ಗೇಶ್, ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲತಾ ಉಪಸ್ಥಿತರಿದ್ದರು.