ನಾಗರಹಾವನ್ನು ಕಂಡು ಚಿಟ್ಟನೆ ಚೀರಿದ ಯಾಸಿನ್!
ಬೆಂಗಳೂರು, ಜ. 21 : ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಅಹಮದಾಬಾದ್ ಮುಂತಾದ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಿ ದುಷ್ಕೃತ್ಯ ನಡೆಸಿರುವ ಮತ್ತು ನರೇಂದ್ರ ಮೋದಿಯನ್ನು ಮುಗಿಸಿಹಾಕುವ ಷಡ್ಯಂತ್ಯ ನಡೆಸಿದ್ದಾಗಿ ಒಪ್ಪಿಕೊಂಡಿರುವ ಕುಖ್ಯಾತ ಉಗ್ರ ಯಾಸಿನ್ ಭಟ್ಕಳ್ ಇದ್ದ ಕೊಠಡಿಗೆ ನಾಗರಹಾವೊಂದು ಆಗಮಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಭಾನುವಾರ ರಾತ್ರಿ ಸುಮಾರು 9 ಗಂಟೆ ಹೊತ್ತು, 7 ಅಡಿ ಉದ್ದ ನಾಗರಹಾವೊಂದು ಮಡಿವಾಳದ ವಿಶೇಷ ತನಿಖಾ ಕೊಠಡಿಯ ಮುಂದೆ ಕಾಣಿಸಿಕೊಂಡಿದೆ. ಕಿಟಕಿಯ ಮೂಲಕ ಹಾವನ್ನು ಕಂಡ ಭಟ್ಕಳ್ ಒಮ್ಮೆ ಚೀರಿದ್ದಾನೆ. ಇದರಿಂದ ಗಾಬರಿಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾವಾಡಿಗನೊಬ್ಬನನ್ನು ಕರೆಸಿ ಹಾವನ್ನು ಹಿಡಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿ, ಭಟ್ಳಳ್ ಇರಿಸಿದ್ದ ಕೊಠಡಿ ಮತ್ತು ಸ್ಥಳ ಬದಲಾಯಿಸಲಾಯಿತು ಎನ್ನಲಾಗಿದೆ. [ಯಾಸಿನ್ ಭಟ್ಕಳ್ ಯಾರು?]

ಕೂಡಲೆ ಸ್ಥಳಕ್ಕೆ ಧಾವಿಸಿದ ಹಾವಾಡಿಗರು ನಾಗರಹಾವನ್ನು ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ಇಷ್ಟಕ್ಕೂ ಯಾಸಿನ್ ಇದ್ದ ಕೋಣೆಯೊಳಗೆ ಹಾವು ಬಿಟ್ಟವರಾದರೂ ಯಾರು? ಮತ್ತಿನ್ನೇನು ಬಾಯಿಬಿಟ್ಟಾನೆಂದು ಆತನನ್ನು ಮುಗಿಸಲು ವಿಷಪೂರಿತ ಹಾವನ್ನು ಬೇಕಂತಲೇ ಬಿಡಲಾಯಿತೆ? ಅಥವಾ ತನಿಖೆಯ ದಾರಿ ತಪ್ಪಿಸಲೆಂದೇ ಹಾವನ್ನು ಬಿಡಲಾಯಿತೆ? ಯಾವುದಕ್ಕೂ ಒಂದು ಉನ್ನತಮಟ್ಟದ ತನಿಖೆ ನಡೆಸಿದರೆ ಉತ್ತಮ.
ಬೇಕೆಂದಲ್ಲಿ ಬಾಂಬ್ ಗಳನ್ನು ಇಟ್ಟು ಮನಸೋಇಚ್ಛೆ ಜನರನ್ನು ಉಡಾಯಿಸುವಾಗ ಇಂಡಿಯನ್ ಮುಜಾಹಿದ್ದಿನ್ ನಾಯಕ ಯಾಸಿನ್ ಭಟ್ಕಳ್ಗೆ ಆಗದ ಭಯ ಒಂದು ಸಣ್ಣ ನಾಗರಹಾವನ್ನು ನೋಡಿದಾಗ ಆಯಿತೆ? ಭಯೋತ್ಪಾದನೆ ಕೃತ್ಯಕ್ಕಿಳಿದು ದೇಶದ್ರೋಹಿ ಕೆಲಸ ಮಾಡುತ್ತಿರುವ ಭಟ್ಕಳದ ಮುಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್ ತನ್ನ ಕಾಲಲ್ಲಿ ತಾನೇ ಹಾವು ಬಿಟ್ಟುಕೊಂಡಿದ್ದಾನೆ. ಇನ್ನು ಹಾವಿಗೆ ಹೆದರಿದರೆ ಹೇಗೆ? [ಅರವಿಂದ್, ವಿಮಾನ ಹೈಜಾಕ್ ಗೆ ಸ್ಕೆಚ್]
ರಾಷ್ಟ್ರೀಯ ತನಿಖಾ ದಳದ ವಶದಲ್ಲಿದ್ದ ಯಾಸಿನ್ ಭಟ್ಕಳನನ್ನು, ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಜ.28ರವರೆಗೆ ಯಾಸಿನ್ ಬೆಂಗಳೂರು ಪೊಲೀಸರ ವಶದಲ್ಲಿದ್ದು ವಿಚಾರಣೆಗೆ ಗುರಿಪಡಲಿದ್ದಾನೆ. [ಭಟ್ಕಳನ ಬಾಯಿಂದ ಬಂದ ಭಯಾನಕ ಸತ್ಯ]












Click it and Unblock the Notifications