Mysuru-Bengaluru Expressway: ಅಪಘಾತ ತಡೆಯಲು ಎನ್ಹೆಚ್ಎಐ ಹೊಸ ಪ್ಲಾನ್
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇಯಲ್ಲಿ ಸಂಚಾರ ಆರಂಭವಾದ ದಿನದಿಂದಲೂ ಅಪಘಾತ ವರದಿಯಾಗುತ್ತಿವೆ. ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜನರ ಆಕ್ರೋಶ ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇಯಲ್ಲಿ ಪ್ರತಿ ಹಳ್ಳಿಗಳಿರುವ ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಯೋಜಿಸಿದೆ.

119 ಕಿಲೋ ಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಇದಾಗಿದ್ದು, ದಕ್ಷಿಣ ಭಾರತದ ಮೊದಲ ನಿಯಂತ್ರಿತ ಪ್ರವೇಶ ರಸ್ತೆಯಾಗಿದೆ. ಹೆದ್ದಾರಿಯ ಉದ್ದಕ್ಕೂ ಜನ ರಸ್ತೆಗಳನ್ನು ದಾಟದಂತೆ, ದ್ವಿಚಕ್ರ ವಾಹನಗಳು ಪ್ರವೇಶಿಸದಂತೆ ಜಾಲರಿ ಬೇಲಿಯನ್ನು ಅಳವಡಿಸಲಾಗಿದೆ. ಆದರೆ, ಸ್ಥಳೀಯರು ರಸ್ತೆಗಳನ್ನು ದಾಟಲು ಬೇಲಿಯನ್ನು ಹಲವು ಕಡೆ ಕತ್ತರಿಸಿದ್ದಾರೆ. ಅಪಘಾತಗಳು ಹೆಚ್ಚಲು ಜನ ರಸ್ತೆ ದಾಟುತ್ತಿರುವುದು ಒಂದು ಕಾರಣ ಎಂದು ಹೇಳಲಾಗಿದೆ.
5 ತಿಂಗಳಲ್ಲಿ 571 ಕ್ಕೂ ಹೆಚ್ಚು ಅಪಘಾತ 58 ಮಂದಿ ಸಾವು
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಾವಿನ ರಸ್ತೆಯಾಗಿ ಮಾರ್ಪಡುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಅದಕ್ಕೆ ಸಾಕ್ಷಿಯಾಗಿ ರಸ್ತೆ ಸಂಚಾರಕ್ಕೆ ಮುಕ್ತವಾದ 5 ತಿಂಗಳ ಅವಧಿಯಲ್ಲೇ 571ಕ್ಕೂ ಹೆಚ್ಚು ಅಪಘಾತ ಸಂಭವಿಸಿದ್ದು 58 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅತಿಯಾದ ವೇಗದ ಚಾಲನೆ, ಅವೈಜ್ಞಾನಿಕವಾಗಿ ವಾಹನಗಳ ಪಾರ್ಕಿಂಗ್ ಕೂಡ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. 8,480 ಕೋಟಿ ರುಪಾಯಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ಮಾಡಿದ್ದರೂ, ಅಪಘಾತ ಕಡಿಮೆ ಮಾಡಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಜನರ ಗೋಳು ಕೇಳೊದ್ಯಾರು?
ಹೆದ್ದಾರಿ ಅಕ್ಕ ಪಕ್ಕ ಇರುವ ಗ್ರಾಮಗಳ ಜನತೆ ಬೇಲಿಗಳನ್ನು ಮುರಿದು ರಸ್ತೆ ದಾಟುತ್ತಿದ್ದಾರೆ ಆದರೆ ಇದಕ್ಕೆ ಕಾರಣವೇನು ಎನ್ನುವುದು ಕೂಡ ಮುಖ್ಯವಾಗುತ್ತದೆ. ಹಲವು ಹಳ್ಳಿಗಳ ಸಮೀಪ ಅಂಡರ್ ಪಾಸ್ಗಳನ್ನು ನಿರ್ಮಾಣ ಮಾಡಿದ್ದರೂ, ಅವರು ಅದನ್ನು ಬಳಸಲು ಎರಡು ಮೂರು ಕಿಲೋ ಮೀಟರ್ ಸುತ್ತಿ ಬಳಸಿ ಬರಬೇಕಾಗುತ್ತದೆ. ಇದೇ ಕಾರಣಕ್ಕೆ ಹಲವು ಗ್ರಾಮಸ್ಥರು ಬೇಲಿಯನ್ನು ಮುರಿದು ರಸ್ತೆಗಳನ್ನು ದಾಟುವ ಸಾಹಸ ಮಾಡುತ್ತಿದ್ದಾರೆ.
ಅಪಘಾತಗಳು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಪೊಲೀಸರಿಗೆ ದೂರು ಕೊಟ್ಟರೂ ಜನರನ್ನು ಎಲ್ಲಾ ಸಮಯದಲ್ಲೂ ಕಾಯಲು ಸಾಧ್ಯವಿಲ್ಲ. ಈಗ ಜನರ ಸುರಕ್ಷತೆ ಮತ್ತು ಅಪಘಾತಗಳ ತಡೆಗಟ್ಟುವಿಕೆ ಉದ್ದೇಶದಿಂದ ಸ್ಕೈವಾಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 55 ಕಿಲೋ ಮೀಟರ್ ಉದ್ದದ ಹೆದ್ದಾರಿಯಲ್ಲಿ 18 ಸ್ಕೈವಾಕ್ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮೈಸೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 21 ಸ್ಕೈವಾಕ್ಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಸ್ಕೈವಾಕ್ಗಳ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಲಾಗಿದ್ದು, ಕೆಲವು ಕಡೆಗಳಲ್ಲಿ ಭೂಸ್ವಾಧೀನದ ಅಗತ್ಯವಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
1000 ಕೋಟಿ ರೂಪಾಯಿ ವೆಚ್ಚ
ಮೈಸೂರಿನ ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಎನ್ಎಚ್ಎಐ ಎಕ್ಸ್ಪ್ರೆಸ್ವೇಯಲ್ಲಿ ಟ್ರಾಫಿಕ್ ಅನ್ನು ಸುಗಮಗೊಳಿಸಲು ಜಂಕ್ಷನ್ ನಿರ್ಮಿಸಲು ಯೋಜಿಸಿದೆ. ಭೂಸ್ವಾಧೀನ, ಸ್ಕೈವಾಕ್, ಜಂಕ್ಷನ್ ಮತ್ತಿತರ ಕಾಮಗಾರಿಗಳಿಗೆ 1000 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications