ಐಎಂಎ ಹಗರಣ: ಎಸ್ಐಟಿಯಿಂದ ಜಿಲ್ಲಾಧಿಕಾರಿ ವಿಜಯ್ ಶಂಕರ್ ವಿಚಾರಣೆ
ಬೆಂಗಳೂರು, ಜುಲೈ 8: ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ವಿಶೇಷ ತನಿಖಾ ದಳ (ಎಸ್ಐಟಿ) ವಿಚಾರಣೆಗೆ ಒಳಪಡಿಸಿದೆ.
ಬೆಂಗಳೂರು ನಗರ ಡಿಸಿ ಬಿಎಂ ವಿಜಯ್ ಶಂಕರ್ ಅವರನ್ನು ಸೋಮವಾರ ವಶಕ್ಕೆ ತೆಗೆದುಕೊಂಡ ಎಸ್ಐಟಿ, ಬಳಿಕ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಮಹತ್ವದ ಸುಳಿವು ದೊರೆತರೆ ವಿಜಯ್ ಶಂಕರ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಐಎಂಎ ವಂಚನೆ ಹಗರಣ ಮತ್ತು ಅದರ ಕುರಿತು ಈ ಹಿಂದೆ ನಡೆಸಲಾಗಿದ್ದ ತನಿಖೆಯಲ್ಲಿ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಐಎಂಎ ಪರವಾಗಿ ವರದಿ ನೀಡಲು 4.5 ಕೋಟಿ ಲಂಚ ಪಡೆದ ಆರೋಪದಲ್ಲಿ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್ ಅವರನ್ನು ಶುಕ್ರವಾರ ಎಸ್ಐಟಿ ಪೊಲೀಸರು ಬಂಧಿಸಿದ್ದರು.
ಆಂಬಿಡೆಂಟ್ ವಂಚನೆ ಪ್ರಕರಣ ಬಯಲಾದ ನಂತರ ಈ ರೀತಿಯ ಕಂಪೆನಿಗಳ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರವು 2018ರಲ್ಲಿ ಎಲ್ ಸಿ ನಾಗರಾಜ್ ನೇತೃತ್ವದಲ್ಲಿ ದೂರು ಪ್ರಾಧಿಕಾರ ರಚಿಸಿತ್ತು. ಆದರೆ, ಐಎಂಎ ವಿರುದ್ಧದ ದೂರುಗಳ ಕುರಿತು ಸರಿಯಾಗಿ ವಿಚಾರಣೆ ನಡೆಸದೆ ಕಂಪೆನಿಗೆ ಅನುಕೂಲವಾಗುವಂತೆ ವರದಿ ನೀಡಿದ್ದರು ಎನ್ನಲಾಗಿದೆ.












Click it and Unblock the Notifications