ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಕಾರು ಪೊಲೀಸರ ವಶಕ್ಕೆ
ಬೆಂಗಳೂರು, ಜೂನ್ 13: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಹಸ್ತಾಂತರ ಮಾಡಿದ ಬೆನ್ನಲ್ಲೆ, ಇಂದು ಐಎಂಎ ಕೇಂದ್ರ ಕಚೇರಿಗೆ ಬೀಗ ಜಡಿದು, ಸೀಲ್ ಮಾಡಲಾಗಿದೆ.
ಕಮರ್ಶಿಯಲ್ ಠಾಣೆ ಪೊಲೀಸರು ಶಿವಾಜಿನಗರದಲ್ಲಿರುವ ಐಎಂಎಗೆ ಕಚೇರಿಗೆ ಇಂದು ಬೀಗ ಜಡಿದಿದ್ದು, ಸೀಲ್ ಮಾಡಿದ್ದಾರೆ. ಐಎಂಎಯ ಹಲವು ನಿರ್ದೇಶಕರನ್ನು ಎಸ್ಐಟಿಯು ಈಗಾಗಲೇ ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ.
2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?
ವಿಮಾನ ನಿಲ್ದಾಣದಲ್ಲಿ ಐಎಂಎ ಸಂಸ್ಥೆ ಸಂಸ್ಥಾಪಕ ಮನ್ಸೂರ್ ಖಾನ್ ಅವರಿಗೆ ಸೇರಿಸಿದ್ದ ಕಾರುಗಳು ಸೀಜ್ ಆಗಿದೆ. ಒಟ್ಟು ಐದು ಕಾರುಗಳು ಸೀಜ್ ಆಗಿವೆ ಎನ್ನಲಾಗಿದೆ. ಕಾರನ್ನು ನಾಲ್ಕು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ದಾಖಲೆಗಳು ಹೇಳುತ್ತಿವೆ.
ಇಂದೂ ಸಹ ಕಮರ್ಶಿಯಲ್ ಸ್ಟ್ರೀಟ್ ಪೊಲೀಸರು ದೂರು ಸ್ವೀಕಾರ ಮುಂದುವರೆಸಿದ್ದು, ಇಂದೂ ಸಹ ನೂರಾರು ಮಂದಿ ಬಂದು ಐಎಂಎ ಸಂಸ್ಥೆ ವಿರುದ್ಧ ದೂರು ದಾಖಲಿಸಿದರು.
ಬೆಂಗಳೂರಿನ ಜನ ಮಾತ್ರವಲ್ಲದೆ, ದುಬೈ, ಹೈದರಾಬಾದ್, ಮೈಸೂರು ಇನ್ನೂ ಹಲವು ನಗರಗಳ ಜನ ಐಎಂಎ ನಲ್ಲಿ ಹೂಡಿಕೆ ಮಾಡಿದ್ದರು. ಜಮೀನು ಮಾರಾಟ ಮಾಡಿ ಹೂಡಿಕೆ ಮಾಡಿದವರೂ ಇದ್ದರು.
ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ: ಏಳು ಜನರ ಬಂಧನ
ಪ್ರಸ್ತುತ 25 ಸಾವಿರಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಸ್ವೀಕರಿಸಿದ ದೂರುಗಳನ್ನು ಎಸ್ಐಟಿಗೆ ಕಳುಹಿಸಲಾಗುತ್ತದೆ.