ಆಸ್ತಿಗಾಗಿ ಅತ್ತಿಗೆಯನ್ನು ಕೊಲೆ ಮಾಡಿದ ನಾದಿನಿಯರು

ವಿಶ್ವಪ್ರಿಯಾ ಬಡಾವಣೆ ನಿವಾಸಿಗಳಾದ ಮೋಹಿನ್ ಕೌಸರ್(29) ಹಾಗೂ ನಿಜಾರಾ ಸುಲ್ತಾನಾ (27) ಬಂಧಿತರು. ಮೇ 30ರಂದು ಅಣ್ಣ ಹಯಾತ್ ಪಾಷಾ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಇವರು ಅಣ್ಣನ ಪತ್ನಿಯಾದ ಹಜೀರಾ ಭಾನು ಅವರ ಕತ್ತು ಸೀಳಿ ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಘಟನೆ: ತಮಿಳುನಾಡು ಮೂಲದ ಹಯಾತ್ ಕುಟುಂಬ ಸದಸ್ಯರ ಜತೆ 15 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಸರಕು ಸಾಗಣೆ ವಾಹನ ಚಾಲಕರಾದ ಅವರು, ನಾಲ್ಕು ವರ್ಷಗಳ ಹಿಂದೆ ಹಜೀರಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಆರೋಪಿ ಕೌಸರ್ಳಿಗೆ ವಿವಾಹವಾಗಿದ್ದು, ಪತಿ ಜತೆ ಪ್ರತ್ಯೇಕವಾಗಿ ವಾಸವಾಗಿದ್ದಳು. ನಿಜಾರಾ ಅಣ್ಣನ ಮನೆಯಲ್ಲೇ ಇದ್ದಳು. ಅಣ್ಣನ ಮನೆಯಲ್ಲಿದ್ದ ನಿಜಾರಾ ಮತ್ತು ಅತ್ತಿಗೆ ಹಜೀರಾ ಭಾನು ನಡುವೆ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಜಗಳವಾಗುತಿತ್ತು. ಈ ಹಿನ್ನಲೆಯಲ್ಲಿ ಅಣ್ಣ, ನಿಜಾರಾಳನ್ನು ಕೌಸರ್ ಮನೆಗೆ ಕಳುಹಿಸಿದ್ದರು.
ಮದುವೆಯಾಗುವ ಮೊದಲು ಅಣ್ಣನಿಗೆ ನಮ್ಮ ಮೇಲೆ ಪ್ರೀತಿಯಿತ್ತು. ಮದುವೆಯಾದ ಬಳಿಕ ನಮ್ಮನ್ನು ಮನೆಯಿಂದ ಹೊರಹಾಕಲು ಅತ್ತಿಗೆ ಕಾರಣವೆಂದು ಸಹೋದರಿಯರು ಹಜೀರಾ ಭಾನು ವಿರುದ್ಧ ಕೋಪಗೊಂಡಿದ್ದರು.
ಆಸ್ತಿಗಾಗಿ ಕೊಲೆ: ಇತ್ತಿಚೆಗೆ ಹಯಾತ್ ಅವರು ನಗರದಲ್ಲಿ ಎರಡು ನಿವೇಶನ ಖರೀದಿಸಿದ್ದರು. ಈ ವಿಚಾರವನ್ನು ತಿಳಿದ ಸಹೋದರಿಯರು ಒಂದು ನಿವೇಶನವನ್ನು ತಮಗೆ ನೀಡುವಂತೆ ಅಣ್ಣನನ್ನು ಒತ್ತಾಯ ಮಾಡುತ್ತಿದ್ದರು. ನಾದಿನಿಯರ ಬೇಡಿಕೆಗೆ ಅತ್ತಿಗೆ ವಿರೋಧ ವ್ಯಕ್ತಪಡಿಸಿದ್ದಳು. ತಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಿರುವ ಅತ್ತಿಗೆಯನ್ನು ಕೊಲೆ ಮಾಡಿದರೆ ತಮ್ಮ ಬೇಡಿಕೆ ಪೂರ್ಣವಾಗುತ್ತದೆ ಎಂದು ತಿಳಿದು ಕೊಲೆ ಮಾಡಲು ಸ್ಕೆಚ್ ರೂಪಿಸಿದ್ದರು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.
ಮೇ.30ರಂದು ಇಬ್ಬರು ಸಹೋದರಿಯರು ಅಣ್ಣನ ಮನೆಗೆ ಬಂದಿದ್ದಾರೆ. ಹಯಾತ್ ಅವರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಟಿವಿ ಶಬ್ದವನ್ನು ಹೆಚ್ಚಿಸಿ ಅತ್ತಿಗೆಯನ್ನು ಕೊಲೆ ಮಡಿದ್ದಾರೆ. ಮಗು ಅಳುತ್ತಿರುವುದನ್ನು ಕಂಡು ಸ್ಥಳೀಯರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹಯಾತ್ ಮತ್ತು ಹಜೀರಾ ಭಾನು ಅವರಿಗೆ ಯಾವುದೇ ಶತ್ರುಗಳು ಇರಲಿಲ್ಲ. ಅಷ್ಟೇ ಅಲ್ಲದೇ ಮನೆಯಿಂದ ಯಾವುದೇ ವಸ್ತುವನ್ನು ಕಳವು ಮಾಡದೇ ಕೊಲೆ ಮಾಡಿರುವುದು ಪೊಲೀಸ್ ತನಿಖೆಗೆ ಸವಾಲಾಗಿತ್ತು.
ಪತ್ತೆ ಆಗಿದ್ದು ಹೇಗೆ?
ಕೊಲೆಯಾದ ದಿನ ಬೆಳಿಗ್ಗೆ ಇಬ್ಬರು ಬುರ್ಕಾ ಧರಿಸಿದ್ದ ಯುವತಿಯರು ಹಜೀರಾ ಮನೆಗೆ ಬಂದು ಹೋದ ವಿವರವನ್ನು ಅಂಗಡಿಯೊಂದರ ಸಿಬ್ಬಂದಿಯೊಬ್ಬ ಪೊಲೀಸರಿಗೆ ತಿಳಿಸಿದ್ದ. ಪೊಲೀಸರು ಮೊಬೈಲ್ ಫೋನ್ ಜಾಗವನ್ನು ಪರಿಶೀಲಿಸಿದಾಗ ಎರಡು ಫೋನ್ ನಂಬರ್ಗಳು ಒಂದೇ ಕಡೆ ಇದ್ದದ್ದು ತಿಳಿದಿದೆ. ಈ ಎರಡು ಫೋನ್ ನಂಬರ್ಗಳನ್ನು ಮತ್ತಷ್ಟು ಪರಿಶೀಲಿಸಿದಾಗ ಹಯಾತ್ ಅವರ ಸಹೋದರಿಯವರಿಗೆ ಸೇರಿದ ನಂಬರ್ಗಳು ಎನ್ನುವುದು ಪೊಲೀಸರಿಗೆ ಸ್ಪಷ್ಟವಾಯಿತು.
ಬಳಿಕ ನಿಜಾರಾಳ ವಶಕ್ಕೆ ಪಡೆದು ವಿಚಾರಣೆಯನ್ನು ಪೊಲೀಸರು ಆರಂಭಿಸಿದ್ದಾರೆ. ಆರಂಭದಲ್ಲಿ ಆಕೆ ಒಪ್ಪಿಕೊಂಡಿರಲಿಲ್ಲ. ಪೊಲೀಸರು ಪ್ರತಿ ದಿನ ವಿಚಾರಣೆಗೆ ಬರುವಂತೆ ತಿಳಿಸಿದಾಗ 18 ದಿನದ ಬಳಿಕ ತಾನು ಮತ್ತು ಸಹೋದರಿ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ನೇಯ ವಿಭಾಗದ ಡಿಸಿಪಿ ಟಿ.ಡಿ.ಪವಾರ್, ಎಸಿಪಿ ಬಿ.ಎನ್ ಓಬಳೇಶ್, ಮೈಕೊಲೇಔಟ್ ಠಾಣೆ ಇನ್ಸ್ಪೆಕ್ಟರ್ ಬಿ.ಎಸ್.ಮಂಜುನಾಥ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications