ಗಾಯಕಿ ಸುಶ್ಮಿತಾ ಆತ್ಮಹತ್ಯೆ ಕೇಸ್: ಪತಿ ಸೇರಿ ಮೂವರ ಬಂಧನ
ಬೆಂಗಳೂರು, ಫೆಬ್ರವರಿ 29: ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.
ನನ್ನ ಪತಿಯನ್ನು ಸುಮ್ಮನೆ ಬಿಡಬೇಡ ಎಂದು ತಾಯಿಗೆ ವಾಟ್ಸಪ್ ಮೆಸೇಜ್ ಕಳುಹಿಸಿ ಬೆಂಗಳೂರಿನಲ್ಲಿ ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುಶ್ಮಿತಾ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಶರತ್ ಕುಮಾರ್ ಅವರನ್ನು ಮದುವೆ ಆಗಿದ್ದರು. ಸುಶ್ಮಿತಾ ತನ್ನ ತಾಯಿ ಹಾಗೂ ತಮ್ಮನಿಗೆ ವಾಟ್ಸಪ್ ಮೂಲಕ ಸಂದೇಶ ರವಾನಿಸಿ ನಾಗರಬಾವಿಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸುಶ್ಮಿತಾ ಪತಿ ಶರತ್ ಕುಮಾರ್, ದೊಡ್ಡಮ್ಮ ವೈದೇಹಿ ಹಾಗೂ ಸಹೋದರಿ ಗೀತಾ ಎಂಬುವರನ್ನು ಬಂಧಿಸಲಾಗಿದೆ. ಫೆ.16ರ ರಾತ್ರಿ ಮಾಳಗಾಳದಲ್ಲಿರುವ ತಾಯಿಯ ಮನೆಯಲ್ಲಿ ಸುಶ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದರು.
ಸಾವಿಗೂ ಮೊದಲು ತನ್ನ ಸಹೋದರ ಹಾಗೂ ತಾಯಿಗೆ ಸುಶ್ಮಿತಾ ಸಂದೇಶ ರವಾನಿಸಿದ್ದರು. ತನ್ನ ಸಾವಿಗೆ ಪತಿ, ಆತನ ದೊಡ್ಡಮ್ಮ ಹಾಗೂ ಸಹೋದರಿಯೇ ಕಾರಣ. ಮೂವರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು.
ಸುಗಮ ಸಂಗೀತ ಗಾಯಕಿಯಾದ ಸುಶ್ಮಿತಾ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿಯೂ ಹಾಡಿದ್ದರು. ಶರತ್ ಎಂಬುವವರನ್ನು ಪ್ರೀತಿಸಿ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಸೋಮವಾರ ಮಾಳಗಾದಲ್ಲಿರುವ ತಾಯಿ ಮನೆಯಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಪಾಂಡವಪುರದ ಸಂಬಂಧಿಕರ ಮನೆಯಲ್ಲಿ ಅವಿತಿದ್ದ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.
ವಾಟ್ಸಪ್ ಸಂದೇಶ: ಅಮ್ಮ ನನ್ನನ್ನು ಕ್ಷಮಿಸು. ನಾನು ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ನನ್ನ ಪತಿ ತನ್ನ ದೊಡ್ಡಮ್ಮನ ಮಾತು ಕೇಳಿ ನನಗೆ ಚಿತ್ರಹಿಂಸೆ ಕೊಡುತ್ತಿದ್ದರು.
ನಾನು ಏನೇ ಮಾತನಾಡಿದ್ರೂ ನನಗೆ ಮನೆ ಬಿಟ್ಟು ಹೋಗು ಎಂದು ಹೇಳುತ್ತಿದ್ದರು. ನನಗೆ ಮಾನಸಿಕವಾಗಿ ತುಂಬಾ ಕಿರುಕುಳ ನೀಡುತ್ತಿದ್ದರು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣ. ನಾನು ಎಷ್ಟು ಬೇಡಿಕೊಂಡರೂ ಕಾಲು ಹಿಡಿದರೂ ಅವನ ಮನಸ್ಸು ಕರಗಲಿಲ್ಲ ಎಂದು ಹೇಳಿದ್ದಳು.












Click it and Unblock the Notifications