ದೇಶದ ಭದ್ರತೆಗೆ ಗಂಡಾಂತರ ತಂದಿಟ್ಟಿದ್ದ ಸಿಮ್ ಕಿಟ್ ಕ್ರಿಮಿನಲ್ ಎಟಿಸಿ ಬಲೆಗೆ
ಬೆಂಗಳೂರು, ಜೂ. 09: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ನಷ್ಟ ಮಾಡುವ ಜತೆಗೆ ದೇಶದ ಭದ್ರತೆಗೆ ಗಂಡಾಂತರ ತಂದಿಟ್ಟಿದ್ದ ಇಬ್ಬರು ಕೇರಳ ಮೂಲದ ಕಿರಾತಕರನ್ನು ಸಿಸಿಬಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 960 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಿಲಟರಿ ಅಧಿಕಾರಿಗಳು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರದ ಭಯೋತ್ಪಾದನಾ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ.
ಕೇರಳದ ಮಲ್ಲಪುರ ಮೂಲದ ಇಬ್ರಾಹಿಂ ಪುಲ್ಲಟ್ಟಿ ಹಾಗೂ ತಮಿಳುನಾಡಿನ ತಿರುಪ್ಪೂರ್ ಮೂಲದ ಗೌತಮ್ ಬಂಧಿತರು. ಇಬ್ಬರೂ ಎಚ್.ಎಸ್.ಆರ್. ಬಡಾವಣೆ ಹಾಗೂ ಬಿಟಿಎಂ ಬಡಾವಣೆ ಆರು ಟೆಲಿಫೋನ್ ಎಕ್ಸ್ ಚೇಂಜ್ ಕೇಂದ್ರಗಳ ಮೇಲೆ ದಾಳಿ ನಡೆಸಿದ ಎಟಿಎಸ್ ಅಧಿಕಾರಿಗಳು 960 ಸಿಮ್ ಕಾರ್ಡ್ ವಶಪಡಿಸಿಕೊಳ್ಳುವ ಮೂಲಕ ಸಿಮ್ ಕಿಟ್ ಅಕ್ರಮ ಬಯಲಿಗೆ ಎಳೆದಿದ್ದಾರೆ.
ಮಿಲಟರಿಯಿಂದ ಮಾಹಿತಿ: ಬಿಟಿಎಂ ಬಡಾವಣೆ ಹಾಗೂ ಎಚ್ಎಸ್ ಆರ್ ಬಡಾವಣೆಯ ಆರು ಅನಧಿಕೃತ ಟೆಲಿಪೋನ್ ಎಕ್ಸ್ ಚೇಂಜ್ ಕೇಂದ್ರಗಳು ಕಾರ್ಯ ನಿರ್ವಹಣೆ ಮಾಡುತ್ತಿರುವ ಬಗ್ಗೆ ಮಿಲಿಟರಿ ಅಧಿಕಾರಿಗಳು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಸಿಸಿಬಿಯ ಪೊಲೀಸರ ಎಟಿಎಸ್ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಇಬ್ಬರೂ ಸಿಮ್ ಕಾರ್ಡ್ ಗಳನ್ನು ಬಳಸಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದರು.
ಹತ್ತು ರೂಪಾಯಿ ಬೆಲೆಯ ಒಂದು ಕರೆಗೆ ಕೇವಲ ಹತ್ತು ಪೈಸೆಗೆ ಕನ್ವರ್ಟ್ ಮಾಡುತ್ತಿದ್ದರು. ಇದಕ್ಕಾಗಿ ಸುಮಾರು ಒಂದು ಸಾವಿರ ಸಿಮ್ ಕಾರ್ಡ್ ಗಳನ್ನು ಬಳಿಸಿದ್ದರು. ಖಚಿತ ಮಾಹಿತಿ ಮೇರೆಗೆ ಆರು ಅನಧಿಕೃತ ಟೆಲಿಪೋನ್ ಎಕ್ಸ್ ಚೇಂಜ್ ಕೇಂದ್ರಗಳ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಮ್ ಕಿಟ್ ಅಕ್ರಮದಿಂದ ದೇಶಕ್ಕೆ ಭಾರೀ ಗಂಡಾಂತರ ಎದುರಾಗುತ್ತಿತ್ತು. ಆರೋಪಿಗಳನ್ನು ಬಂಧಿಸುವ ಮೂಲಕ ಬಹುದೊಡ್ಡ ಅನಾಹುತ ತಪ್ಪಿಸಿದಂತಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Recommended Video
ಭಯೋತ್ಪಾದನೆಗೆ ಕುಮ್ಮಕ್ಕು: ಇನ್ನು ಅನಧಿಕೃತ ಟೆಲಿಪೋನ್ ಎಕ್ಸ್ ಚೇಂಜ್ ಮೂಲಕ ಆರೋಪಿಗಳು ಭಯೋತ್ಪಾದನಾ ಕೃತ್ಯಗಳಿಗೆ ನೆರವು ಮಾಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಿಲಟರಿ ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರು ಪೊಲೀಸರಿಗೆ ಮಾಹಿತಿ ಹಂಚಿಕೊಂಡಿದ್ದುಮ ಇದೀಗ ಬಂಧಿತರ ಕನ್ವರ್ಟ್ ಮಾಡಿದ್ದ ಅಂತಾರಾಷ್ಟ್ರೀಯ ಕರೆಗಳ ಮಾಹಿತಿ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಕೆಲವರಿಗಾಗಿ ಸಿಸಿಬಿ ಎಟಿಎಸ್ ಪಡೆ ಕಾರ್ಯ ಪ್ರವೃತ್ತವಾಗಿದೆ.
ಭಾರತದಲ್ಲಿ ಅನುಮತಿ ಇಲ್ಲ: ಅಂತಾರಾಷ್ಟ್ರೀಯ ಕರೆಗಳನ್ನು ಕಡಿಮೆ ದರದಲ್ಲಿ ಮಾತನಾಡಲು ಸಿಮ್ ಕಿಟ್ ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಕಂಪನಿಗಳ ನಡುವಿನ ಮಾತುಕತೆಗೆ ಸಹಕಾರಿಯಾಗಿ ಇದನ್ನು ಬಳಸಲಾಗುತ್ತದೆ. ಈ ಸಿಮ್ ಕಿಟ್ ಗಳನ್ನು ವಿದೇಶಿ ಕಂಪನಿಗಳು ಬೇರೆ ದೇಶದ ತಮ್ಮ ಕಂಪನಿಗಳಿಗೆ ನೀಡುತ್ತವೆ. ಆದರೆ, ಸಿಮ್ ಕಿಟ್ ಬಳಸಲು ಭಾರತದಲ್ಲಿ ಅನುಮತಿ ನೀಡಿಲ್ಲ. ತೆರಿಗೆ, ಆಂತರಿಕ ಭದ್ರತೆ, ಭಯೋತ್ಪಾದನೆ ಕೃತ್ಯಗಳ ಭೀತಿ ಹಿನ್ನೆಲೆಯಲ್ಲಿ ಇದಕ್ಕೆ ಅನುಮತಿ ನೀಡಿಲ್ಲ. ದೇಶದ ಟ್ರಾಯ್ ಸಂಸ್ಥೆಯೂ ಸಹ ಸಿಮ್ ಕಿಟ್ ಬಳಕೆಗೆ ಅನುಮತಿ ನೀಡಿಲ್ಲ. ಆದರೆ, ಬಂಧಿತ ಆರೋಪಿಗಳಿಬ್ಬರು ಅನಧಿಕೃತ ಸಿಮ್ ಕಿಟ್ ಬಳಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಸಿಮ್ ಕಿಟ್ ಬಳಸಿ ಕರೆ ಮಾಡಿದರೆ, ಅದರ ಡಾಟಾ, ಸಿಡಿಆರ್ ಪಡೆಯಲು ಅಸಾಧ್ಯ. ಇದನ್ನೇ ಬಳಸಿಕೊಂಡು ಭಯೋತ್ಪಾದಕರು ಇಂತಹ ಸಿಮ್ ಕಿಟ್ ನೆರವಿನಿಂದ ಭಯೋತ್ಪಾದನೆ ಕೃತ್ಯಗಳನ್ನು ಎಸಗುವ ಸಾಧ್ಯತೆ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.