"ರೈತ ನಾಯಕ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಮತ್ತೊಂದು ಮುಖವಿದು"
ಬೆಂಗಳೂರು, ಮಾರ್ಚ್ 26: ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ, ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ಪ್ರಕರಣ ದಾಖಲಿಸಿರುವುದು ಸಿಎಂ ಯಡಿಯೂರಪ್ಪ ಅವರ ರಹಸ್ಯ ಕಾರ್ಯಾಚರಣೆಯನ್ನು ಬಯಲಿಗೆಳೆದಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ನಾನು ಖಂಡಿಸುತ್ತೇನೆ. ಇದು ತಮ್ಮನ್ನು ತಾವೇ ರೈತ ನಾಯಕ ಎಂದು ಕರೆದುಕೊಳ್ಳುವ ಯಡಿಯೂರಪ್ಪ ಅವರ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ" ಎಂದು ಹೇಳಿದ್ದಾರೆ.
"ಕೃಷಿ ಕಾಯ್ದೆ ವಿರೋಧಿಸುವ ರೈತರನ್ನು ಅಪರಾಧಿಗಳಂತೆ ಪರಿಗಣಿಸುವುದು ಬಿಜೆಪಿಗೆ ರೂಢಿಯಾಗಿಬಿಟ್ಟಿದೆ. ಆದರೆ ಜನರಿಗೆ ನಿಜವಾದ ಅಪರಾಧಿಗಳು ಯಾರೆಂಬುದು ತಿಳಿದಿದೆ. ಪೊಲೀಸ್ ಪಡೆ ಬಳಸಿಕೊಂಡು ರೈತರನ್ನು ನಿಯಂತ್ರಿಸುತ್ತೇವೆ ಎಂಬ ಬಿಜೆಪಿ ನಾಯಕರ ಆಲೋಚನೆ ಮೂರ್ಖತನ" ಎಂದಿದ್ದಾರೆ.

ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ಟಿಕಾಯತ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಶಿವಮೊಗ್ಗದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ್ದ ರಾಕೇಶ್ ಟಿಕಾಯತ್, ಕರ್ನಾಟಕದಲ್ಲಿಯೂ ರೈತರು ದೆಹಲಿಯಂತೆ ಒಟ್ಟುಗೂಡಿ ಪ್ರತಿಭಟನೆ ನಡೆಸಬೇಕು ಎಂದು ಹೇಳಿದ್ದರು.
"ಬೆಂಗಳೂರನ್ನು ದೆಹಲಿಯಂತೆ ಮಾಡಬೇಕು. ಎಲ್ಲಾ ದಿಕ್ಕಿನಿಂದಲೂ ಬೆಂಗಳೂರನ್ನು ಸುತ್ತುವರೆದು ಪ್ರತಿಭಟನೆ ನಡೆಸಬೇಕು" ಎಂದು ಕರೆ ನೀಡಿದ್ದರು. ಈ ಕಾರಣಕ್ಕೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications