ರವೀಂದ್ರನಾಥ್ ಫೋಟೋ ಶಾಪ್: ಎಚ್ಡಿಕೆ ಏನನ್ತಾರೆ?
ಬೆಂಗಳೂರು, ಜೂ. 4: ಕಳೆದೊಂದು ವಾರದಿಂದ ರಂಪಾರಾಮಾಯಣವಾಗಿರುವ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಡಾ. ಪಿ ರವೀಂದ್ರನಾಥ್ ಅವರ ಕಾಫಿ ಫೋಟೋ ಶಾಪ್ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಾಣದೆ, ಮತ್ತೆ ಹಗ್ಗಜಗ್ಗಾಟದಲ್ಲಿ ನಡೆದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಸದರಿ ಐಪಿಎಸ್ ಅಧಿಕಾರಿಯ ಮೊಬೈಲಿನಲ್ಲಿ ಯುವತಿಯರ ಫೋಟೋ ಪತ್ತೆಯಾಗಿದೆಯೆಂದೂ ಅದನ್ನು ಖಚಿತಪಡಿಸಿಕೊಳ್ಳಲು ಅಹಮದಾಬಾದ್ ಪ್ರಯೋಗಾಲಯಕ್ಕೆ ಕಳಿಸಿದ್ದಾರೆಂದೂ ವರದಿಯಾಗಿದೆ.

ಪ್ರಕರಣವನ್ನು ಮುಂದಿಟ್ಟುಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ಪರಸ್ಪರ ಕೆಸರೆರಚಾಟ ಜೋರಾಗಿಯೇ ನಡೆದಿದೆ. ಈ ಮಧ್ಯೆ, ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಕೆಫೆಯಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸಿದ ಎಡಿಜಿಪಿ)
ಡಾ ರವೀಂದ್ರನಾಥ್ ಹಾಗೂ ರಾಘವೇಂದ್ರ ಔರಾದ್ಕರ್ ನಡುವಿನ ಜಗಳವನ್ನು ಐದ್ಹತ್ತು ನಿಮಿಷದಲ್ಲಿ ಬಗೆಹರಿಸಬಹುದಿತ್ತು. ಸಿಐಡಿ ತನಿಖೆವರೆಗೆ ಹೋಗಿರುವುದರ ಹಿಂದೆ ಏನೇನು ಒಳಮರ್ಮ ಇದೆಯೋ ದೇವರೇ ಬಲ್ಲ! ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ಜಾಣ್ಮೆ ವಹಿಸಿ, ಕನಿಷ್ಟ ವಿವೇಕ ತೋರಬೇಕಿತ್ತು. ಕೆಲವೇ ನಿಮಿಷಗಳಲ್ಲಿ ಮುಗಿಸಬಹುದಾದ ಪ್ರಕರಣ ಇದಾಗಿದೆ ಎಂದೂ ಎಚ್ಡಿಕೆ ಹೇಳಿದ್ದಾರೆ.

ಮೈಸೂರಿನಲ್ಲಿ ಮಗನ ವಿಚಾರಕ್ಕೆ ಸಂಬಂಧಪಟ್ಟಂತೆ ಪಿಎಸ್ಸೈ ಅವರನ್ನು ಸಿದ್ದರಾಮಯ್ಯ ಅವರು ಅಮಾನತ್ತು ಮಾಡಿದ್ದಾರೆ. ಇಲ್ಲಿಯವರೆಗೂ ಅವರಿಗೆ ಪೋಸ್ಟಿಂಗ್ ಕೊಟ್ಟಿಲ್ಲ. ರವೀಂದ್ರನಾಥ್ ಮೈಸೂರಿನಲ್ಲಿ ಕೆಲಕಾಲ ಕಮೀಷನರ್ ಆಗಿ ಕೆಲಸ ಮಾಡಿದ್ದರು. ಹೀಗಾಗಿ ರವೀಂದ್ರನಾಥ್ ಮತ್ತು ಸಿದ್ದರಾಮಯ್ಯ ಮಧ್ಯೆ ಏನಾದರೂ ಹಳೆಯ ದ್ವೇಷ ಇದೆಯಾ? ಇಲ್ಲದೆ ಹೋದರೆ ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಏಕೆ ಬೇಕಿತ್ತು ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ. (ಎಡಿಜಿಪಿ ರವೀಂದ್ರನಾಥ್ ಮೊಬೈಲ್ನಲ್ಲಿ ಫೋಟೋ ಪತ್ತೆ)
'ನನ್ನ ಬಳಿ ಬಂದರೆ ಸಮಸ್ಯೆಯನ್ನು ಬಗೆಹರಿಸುತ್ತೇನೆ' ಎಂದು ಗೃಹ ಸಚಿವರು ಹೇಳಿದ್ದಾರೆ. ಇದು ಅಸಹಾಯಕತನ ಅಲ್ಲವೆ? ವಿಚಾರಣೆಗೆ ಬನ್ನಿ ಎಂದು ಆದೇಶ ಮಾಡುವಷ್ಟು ತಾಕತ್ತು ಗೃಹ ಸಚಿವರಿಗೆ ಇಲ್ಲವೇ. ಈ ಪ್ರಹಸನ ಧಾರಾವಾಹಿಯಂತೆ ಸಾಗುತ್ತಿರುವುದನ್ನು ನೋಡಿದರೆ ಇದರ ಹಿಂದೆ ಏನೋ ಒಳಮರ್ಮ ಅಡಗಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications