ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ಬರಲಿ: ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 5: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿ, ತೆರಿಗೆ ಕುರಿತು ಸಿದ್ದರಾಮಯ್ಯ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ರಾಜ್ಯದ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿನ ಉಪ ಚುನಾವಣೆ ಪ್ರಚಾರದ ವೇಳೆ ಟ್ವಿಟ್ಟರ್ ಮತ್ತು ಫೇಸ್ಬುಕ್ಗಳಲ್ಲಿ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದ ಸಿದ್ದರಾಮಯ್ಯ, ಈಗ ಚಿತ್ತ ಬೇರೆಡೆ ಹರಿಸಿದ್ದಾರೆ. ಆರ್ಥಿಕ ಬೆಳವಣಿಗೆಗೆ ತಮ್ಮ ಕೊಡುಗೆ, ತಾವು ನೀಡಿದ ಯೋಜನೆಗಳ ಕುರಿತು ಅವರು ಹೇಳಿಕೊಂಡಿದ್ದಾರೆ.
ಆರ್ಥಿಕ ಬೆಳವಣಿಗೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಜನರಿಂದ ತೆರಿಗೆ ಬರದೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಅವರು ಆರ್ಥಿಕತೆ ಮತ್ತು ತೆರಿಗೆ ಹಾಗೂ ತಮ್ಮ ಸರ್ಕಾರದ ಸಾಧನೆಗಳ ಕುರಿತು ಮಾಡಿರುವ ಸರಣಿ ಟ್ವೀಟ್ಗಳು ಇಲ್ಲಿವೆ...
|
ತೆರಿಗೆ ಬಾರದೆ ಅಭಿವೃದ್ಧಿ ಅಸಾಧ್ಯ
ಜನರಿಂದ ತೆರಿಗೆ ಬರದೇ ಅಭಿವೃದ್ಧಿ ಕೆಲಸ ಮಾಡಲಾಗದು. ಹಾಗೆಂದು ಸಾಮಾನ್ಯ ಜನ ತೆರಿಗೆ ಕಟ್ಟಲಾಗದ ಸನ್ನಿವೇಶ ನಿರ್ಮಾಣ ಮಾಡಬಾರದು. ಸರ್ಕಾರ ಏನೇ ಕಾನೂನು ಮಾಡಿದರೂ ಜನ ಅದನ್ನು ಸುಲಭವಾಗಿ ಪಾಲನೆ ಮಾಡುವಂತಿರಬೇಕು. ಅಂತಹ ಕಾರ್ಯವನ್ನು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದೇನೆ. ನಮ್ಮ ನೆಲ, ಜಲ, ಭಾಷೆಯನ್ನು ಪ್ರೀತಿಸುವುದು ಪ್ರತಿಯೊಬ್ಬನ ಕರ್ತವ್ಯ.
|
ಹೊಗಳಿಕೆಗಾಗಿ ಕೆಲಸ ಮಾಡಿಲ್ಲ
ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಆತ್ಮಸಾಕ್ಷಿ, ಮನಃಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆಯೇ ಹೊರತು ಹೊಗಳಿಕೆಗಾಗಿ ಎಂದೂ ಕಾರ್ಯ ನಿರ್ವಹಿಸಿಲ್ಲ. ನಮ್ಮ ಸರ್ಕಾರ ಜಾರಿಗೊಳಿಸುವ ಪ್ರತಿ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕೆಂಬುದು ನನ್ನ ಮುಖ್ಯ ಗುರಿಯಾಗಿತ್ತು, ಅದಕ್ಕೆ ಬದ್ಧನಾಗಿ ಆಡಳಿತ ನಡೆಸಿದ್ದೇನೆ.
|
ಆರ್ಥಿಕತೆಯಿಂದ ಅಭಿವೃದ್ಧಿ
ರಾಜ್ಯದ ಆರ್ಥಿಕ ಬೆಳವಣಿಗೆ ಹೆಚ್ಚಾದಾಗ ಮಾತ್ರ ಬಡತನ, ನಿರುದ್ಯೋಗ, ಅಸಮಾನತೆ ಹೋಗಲಾಡಿಸಲು ಸಾಧ್ಯ. ಸಮಾಜದಲ್ಲಿ ಅವಕಾಶಗಳಿಂದ ವಂಚಿತರಾದವರಿಗೆ ಆದ್ಯತೆ ನೀಡುವ ಕೆಲಸವನ್ನು ನಾನು ಮಂಡಿಸಿದ ಎಲ್ಲ ಮುಂಗಡ ಪತ್ರಗಳಲ್ಲಿ ಮಾಡಿದ್ದೇನೆ.
|
ಜಿಎಸ್ಟಿ ವ್ಯಾಪ್ತಿಗೆ ಬರಲಿ
ಇಡೀ ದೇಶದಲ್ಲೇ ಮೊದಲ ಬಾರಿಗೆ ಮೌಲ್ಯ ವರ್ಧಿತ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ದೇಶದಲ್ಲಿ ಈಗ ಜಿಎಸ್ಟಿ ಹೊರೆ ಸ್ವಲ್ಪ ಹೆಚ್ಚಾಗಿದೆ. ಪೆಟ್ರೋಲ್ ಡೀಸೆಲ್ ಸಹ ಜಿಎಸ್ಟಿ ವ್ಯಾಪ್ತಿಗೆ ಬರಬೇಕೆಂಬುದು ನನ್ನ ಅಭಿಪ್ರಾಯ.












Click it and Unblock the Notifications