ಕೈಲಾಸ ಮಾನಸ ಸರೋವರ ಯಾತ್ರೆ 2026: ನೋಂದಣಿ ಆರಂಭ, ಭಕ್ತರಿಗೆ ಸುವರ್ಣಾವಕಾಶ
ಪ್ರತಿ ಭಕ್ತರಿಗೆ ಕನಸಾದ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ (KMY) ಇದೀಗ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಹಿಮಾಲಯದ ಮಡಿಲಲ್ಲಿರುವ ಭಗವಾನ್ ಶಿವನ ನಿವಾಸವೆಂದು ನಂಬಲಾಗುವ ಈ ಪವಿತ್ರ ತಾಣಕ್ಕೆ ಭೇಟಿ ನೀಡಲು ಸಾವಿರಾರು ಭಕ್ತರು ಪ್ರತಿ ವರ್ಷ ಕಾತುರದಿಂದ ಕಾಯುತ್ತಿರುತ್ತಾರೆ. ಹಿಂದೂ, ಜೈನ ಮತ್ತು ಬೌದ್ಧ ಪರಂಪರೆಯಲ್ಲಿ ಮಹತ್ವ ಪಡೆದಿರುವ ಈ ಯಾತ್ರೆಯನ್ನು ಪ್ರತಿವರ್ಷ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತದೆ.
ಈ ವರ್ಷ ಪವಿತ್ರ ಯಾತ್ರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 19, 2026 ಎಂದು ತಿಳಿಸಲಾಗಿದೆ. ಆಸಕ್ತರು ಅಧಿಕೃತ ವೆಬ್ಸೈಟ್ (https://kmy.gov.in/)ಮೂಲಕ ಆನ್ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಯಾತ್ರೆಯ ಮಾರ್ಗ ಮತ್ತು ವೆಚ್ಚಗಳು
ಕೈಲಾಸ ಮಾನಸ ಸರೋವರ ಯಾತ್ರೆ ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ನಿಂದ ಸೆಪ್ಟೆಂಬರ್ವರೆಗೆ ನಡೆಯುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಯಾತ್ರೆಗಾಗಿ ಎರಡು ಪ್ರಮುಖ ಮಾರ್ಗಗಳನ್ನು ನಿಗದಿಪಡಿಸಿದೆ:
ಲಿಪುಲೆಖ್ ಪಾಸ್ (ಉತ್ತರಾಖಂಡ ಮಾರ್ಗ)
ಈ ಮಾರ್ಗವು ಅದ್ಬುತವಾದ ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು, ಟ್ರೆಕ್ಕಿಂಗ್ ಹೆಚ್ಚು ಇರುವುದರಿಂದ ಇದು ಸ್ವಲ್ಪ ಸವಾಲಿನದ್ದಾಗಿರುತ್ತದೆ.
ಅವಧಿ: ಸುಮಾರು 22 ದಿನಗಳು
ಬ್ಯಾಚ್ಗಳು: ಒಟ್ಟು 10 ಬ್ಯಾಚ್ಗಳಿಗೆ ಅವಕಾಶ
ಅಂದಾಜು ವೆಚ್ಚ: ಪ್ರತಿ ವ್ಯಕ್ತಿಗೆ 2.09 ಲಕ್ಷ
ನಾಥು ಲಾ ಪಾಸ್ (ಸಿಕ್ಕಿಂ ಮಾರ್ಗ)
ಈ ಮಾರ್ಗದಲ್ಲಿ ಟ್ರೆಕ್ಕಿಂಗ್ ಕಡಿಮೆ ಇರುವುದರಿಂದ, ಆರಾಮದಾಯಕ ಯಾತ್ರೆಯನ್ನು ಬಯಸುವವರಿಗೆ ಇದು ಅತ್ಯಂತ ಸೂಕ್ತವಾಗಿದೆ.
ಅವಧಿ: ಸುಮಾರು 21 ದಿನಗಳು
ಬ್ಯಾಚ್ಗಳು: ಒಟ್ಟು 10 ಬ್ಯಾಚ್ಗಳಿಗೆ ಅವಕಾಶ
ಅಂದಾಜು ವೆಚ್ಚ: ಪ್ರತಿ ವ್ಯಕ್ತಿಗೆ 3.31 ಲಕ್ಷ
ಅರ್ಹತಾ ಮಾನದಂಡಗಳು
ಕೈಲಾಸ ಮಾನಸ ಸರೋವರ ಯಾತ್ರೆಯು ದೈಹಿಕವಾಗಿ ಅತ್ಯಂತ ಕಠಿಣವಾಗಿರುವುದರಿಂದ, ಅರ್ಜಿ ಸಲ್ಲಿಸುವವರು ಈ ಕೆಳಗಿನ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ:
ಭಾರತೀಯ ನಾಗರಿಕರಾಗಿರಬೇಕು ಮತ್ತು ಮಾನ್ಯ ಪಾಸ್ಪೋರ್ಟ್ ಹೊಂದಿರಬೇಕು
ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು (ಜನವರಿ 1, 2026ರ ಪ್ರಕಾರ) BMI 25 ಕ್ಕಿಂತ ಕಡಿಮೆ ಇರಬೇಕು
ದೈಹಿಕ ಮತ್ತು ಮಾನಸಿಕವಾಗಿ ಸಂಪೂರ್ಣ ಆರೋಗ್ಯವಾಗಿರಬೇಕು
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಆಸಕ್ತರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು.
ಇರಬೇಕಾದ ದಾಖಲೆಗಳು
ಭಾವಚಿತ್ರ: ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ (JPG ರೂಪದಲ್ಲಿರಲಿ).
ಪಾಸ್ಪೋರ್ಟ್ ಪ್ರತಿ: ಪಾಸ್ಪೋರ್ಟ್ನ ಮೊದಲ ಮತ್ತು ಕೊನೆಯ ಪುಟಗಳ ಸ್ಪಷ್ಟವಾದ ಸ್ಕ್ಯಾನ್ ಪ್ರತಿಗಳು (PDF ರೂಪದಲ್ಲಿರಲಿ).
ಮಾರ್ಗದ ಆಯ್ಕೆ: ಅರ್ಜಿಯಲ್ಲಿ ನಿಮ್ಮ ಆದ್ಯತೆಯ ಮಾರ್ಗವನ್ನು (ಲಿಪುಲೆಖ್ ಪಾಸ್ ಅಥವಾ ನಾಥು ಲಾ ಪಾಸ್) ಸ್ಪಷ್ಟವಾಗಿ ನಮೂದಿಸಬೇಕು.
ನೋಂದಣಿ ಯಶಸ್ವಿಯಾದ ನಂತರ SMS ಮತ್ತು ಇಮೇಲ್ ಮೂಲಕ ಮಾಹಿತಿ ಕಳುಹಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಭಾಗವಹಿಸುವವರ ಆಯ್ಕೆ "ಡ್ರಾ ಆಫ್ ಲಾಟ್ಸ್" (Draw of Lots) ವಿಧಾನದಲ್ಲಿ (ಲಕ್ಕಿ ಡ್ರಾ) ನಡೆಯುತ್ತದೆ. ವಿಶೇಷ ಸಾಫ್ಟ್ವೇರ್ ಮೂಲಕ ಬಳಸಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಆಯ್ಕೆಯಾದವರಿಗೆ ಇಮೇಲ್ ಮತ್ತು ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತದೆ.
ಯಾತ್ರೆಗೆ ಆಯ್ಕೆಯಾದ ನಂತರ, ಯಾತ್ರಿಕರು ಈ ಕೆಳಗಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ:
ದೃಢೀಕರಣ ಶುಲ್ಕವನ್ನು KMVN (ಉತ್ತರಾಖಂಡ) ಅಥವಾ STDC (ಸಿಕ್ಕಿಂ) ಖಾತೆಗೆ ಪಾವತಿಸಬೇಕು (ಮರುಪಾವತಿ ಇಲ್ಲ)
ದೆಹಲಿಯ ಹಾರ್ಟ್ ಮತ್ತು ಲಂಗ್ ಇನ್ಸ್ಟಿಟ್ಯೂಟ್ ಅಥವಾ ITBP ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು
ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ (ಗುಂಜಿ ಅಥವಾ ಶೆರಥಾಂಗ್) ಮತ್ತೊಮ್ಮೆ ಪರೀಕ್ಷೆ ನಡೆಯುತ್ತದೆ
ಅಗತ್ಯ ದಾಖಲೆಗಳು: 6 ಫೋಟೋಗಳು, 100 ಸ್ಟಾಂಪ್ ಪೇಪರ್ನಲ್ಲಿ ಇಂದೆಮ್ನಿಟಿ ಬಾಂಡ್, ಹೆಲಿಕಾಪ್ಟರ್ ರಕ್ಷಣೆಗೆ ಒಪ್ಪಿಗೆ ಪತ್ರ, ಅಗತ್ಯವಿದ್ದಲ್ಲಿ ಅಂತಿಮ ವಿಧಿವಿಧಾನಗಳಿಗೆ ಒಪ್ಪಿಗೆ ಪತ್ರ.
ಕೈಲಾಸ ಮಾನಸ ಸರೋವರ ಯಾತ್ರೆ ಕೇವಲ ಪ್ರವಾಸವಲ್ಲ, ಅದು ಆಧ್ಯಾತ್ಮಿಕ ಅನುಭವ. ಸರಿಯಾದ ತಯಾರಿ ಮತ್ತು ಆರೋಗ್ಯದೊಂದಿಗೆ ಈ ಪವಿತ್ರ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು.














Click it and Unblock the Notifications