ಮೋದಿ ಮ್ಯಾಜಿಕ್ ಕರ್ನಾಟಕದಲ್ಲಿ ನಡೆಯೊಲ್ಲ: ಸಿದ್ದರಾಮಯ್ಯ
ಬೆಂಗಳೂರು, ಮೇ 06: ನರೇಂದ್ರ ಮೋದಿ ಏನೋ ಮ್ಯಾಜಿಕ್ ಮಾಡಿಬಿಡುತ್ತಾರೆ ಎಂಬ ಭ್ರಮೆಯಲ್ಲಿ ಬಿಜೆಪಿ ಅವರಿದ್ದಾರೆ ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಬಿಜೆಪಿಯವರು ಇಂದಿರಾ ಕ್ಯಾಂಟೀನ್ ಯೋಜನೆ ಕಾಪಿ ಮಾಡಿದ್ದಾರೆ, ಅನ್ನಪೂರ್ಣ ಹೆಸರಿನಲ್ಲಿ ಬಿಜೆಪಿ ಯೋಜನೆ ಘೋಷಿಸಿದ್ದಾರೆ ಇದು ನಮ್ಮಯೋಜನೆಯ ಕಾಪಿ ಅಲ್ವಾ?' ಎಂದು ಪ್ರಶ್ನಿಸಿದರು.
ಸಿಎಂ ಕುರ್ಚಿ ಕುರಿತು ಹಾಗೂ ಅದರ ಸುತ್ತ ನಡೆಯುತ್ತಿರುವ ಒಳಜಗಳಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, 'ಸಿಎಂ ಯಾರಾಗಬೇಕೆಂಬುದು ಹೈಕಮಾಂಡ್ ತೀರ್ಮಾನ ಈಗಲೇ ಇಂತಹವರೇ ಸಿಎಂ ಆಗುತ್ತಾರೆಂದು ಹೇಳಲಾಗದು ಎಂದ ಅವರು, ನನ್ನ ಹಾಗೂ ಪರಮೇಶ್ವರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ' ಎಂದರು.

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಉಂಟಾಗಲಿದೆ ಎಂಬ ಸಮೀಕ್ಷೆಗಳ ಫಲಿತಾಂಶವನ್ನು ತಳ್ಳಿಹಾಕಿದ ಸಿದ್ದರಾಮಯ್ಯ ಅವರು, ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಎಂದು ಬಿಂಬಿಸಲಾಗುತ್ತಿರುವುದು ಸುಳ್ಳು, ಕೆಲವೆಡೆ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ಇದ್ದರೆ, ಕೆಲವೆಡೆ ಕಾಂಗ್ರೆಸ್-ಬಿಜೆಪಿ ವಿರುದ್ಧ ಸ್ಪರ್ಧೆ ಇದೆ, ನಾವು ಎಲ್ಲ ಭಾಗದಲ್ಲೂ ಕಠಿಣ ಸ್ಪರ್ಧೆ ಒಡ್ಡುತ್ತಿದ್ದೇವೆ ಮತ್ತು ಸರ್ಕಾರ ರಚಿಸಲು ಬೇಕಾದ ಬಹುಮತ ಪಡೆಯಲಿದ್ದೇವೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರು ಈಗಾಗಲೇ ಪ್ರಮಾಣ ವಚನದ ದಿನಾಂಕ ಸಮಯ ಎಲ್ಲಾ ನಿಗದಿ ಮಾಡಿಬಿಟ್ಟಿದ್ದಾರೆ ಆದರೆ, ಕುಮಾರಸ್ವಾಮಿ ಅವರೂ ಕೂಡಾ ಸಿಎಂ ಹುದ್ದೆಯ ಕನಸು ಕಾಣುತ್ತಿದ್ದಾರೆ ಎಂದು ಕಾಲೆಳೆದರು.
ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ, ನಮ್ಮ ಅನ್ನಭಾಗ್ಯದ ಬಗ್ಗೆ ಆರೋಪ ಮಾಡುತ್ತಿದ್ದ ಬಿಜೆಪಿ ಅನ್ನಭಾಗ್ಯ ತಂದು ಜನರನ್ನ ಸೋಮಾರಿ ಮಾಡಿದರು ಅನ್ನುತ್ತಿದ್ದರು ಆದರೆ ಈಗ ಇವರು ತಮ್ಮ ಪ್ರಣಾಳಿಕೆಯಲ್ಲಿ ಅನ್ನಪೂರ್ಣ ಯೋಜನೆ ತರುತ್ತೇವೆ ಅಂತಿದ್ದಾರೆ ಅದು ಇಂದಿರಾ ಕ್ಯಾಂಟೀನ್ ಯೋಜನೆಯ ಕಾಫಿ ಎಂದು ಮೂದಲಿಸಿದರು.
2012 ರಲ್ಲಿ ಅಭಿವೃದ್ಧಿಯಲ್ಲಿ 13 ನೇ ಸ್ಥಾನದಲ್ಲಿದ್ದ ಕರ್ನಾಟಕ ಇವತ್ತು ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಬಿಜೆಪಿ ರೈತರ ಸಾಲ ಮನ್ನಾ ಮಾಡಲಿಲ್ಲ ರಾಜ್ಯಕ್ಕೆ ಕೊಡಬೇಕಾದ ಅನುದಾನ ಸರಿಯಾಗಿ ಕೊಟ್ಟಿಲ್ಲ ಅಮಿತ್ ಶಾ ಲೆಕ್ಕ ಬೇರೆ ಕೇಳ್ತಾರೆ, ಪ್ರಧಾನಿ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.












Click it and Unblock the Notifications