ದೇವೇಗೌಡರು ಸ್ವಜಾತಿಯವರನ್ನೇ ಬೆಳೆಸುವುದಿಲ್ಲ: ಸಿದ್ದರಾಮಯ್ಯ
Recommended Video
ಬೆಂಗಳೂರು, ಆಗಸ್ಟ್ 23: 'ವಿರೋಧಪಕ್ಷದ ನಾಯಕನಾಗಲು ಸರ್ಕಾರ ಬೀಳಿಸಿದ ಉದಾಹರಣೆಯನ್ನು ನಾನು ಇದುವರೆಗೂ ನೋಡಿಲ್ಲ' ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.
ದೇವೇಗೌಡರು ನನ್ನ ವಿರುದ್ದ ಮಾಧ್ಯಮಗಳಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ನಾನು ಮೌನವಾಗಿದ್ದರೆ ಜನರಿಗೆ ತಪ್ಪು ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದರು. ನನ್ನ ಮೇಲೆ ರಾಜಕೀಯ ದ್ವೇಷ ಇದೆ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನನ್ನನ್ನು ಮುಗಿಸಿದರೆ ಕಾಂಗ್ರೆಸ್ಗೆ ಹೊಡೆತ ಬೀಳುತ್ತದೆ ಎನ್ನುವುದು ದೇವೇಗೌಡ ಉದ್ದೇಶ.
ದೇವೇಗೌಡ್ರ ಮನಸ್ಸಿನಲ್ಲಿದ್ದಿದ್ದು ಈಗ ಹೊರಗೆ ಬಂತು ನೋಡಿ: ಬೊಮ್ಮಾಯಿ
ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳು ದುರ್ಬಳಕೆ ಆಗ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯವಾಗಿ ಎಲ್ಲರೂ ಒಟ್ಟಾಗಿರಬೇಕಾಗುತ್ತೆ. ಆ ಒಂದೇ ಕಾರಣಕ್ಕಾಗಿ ಜೆಡಿಎಸ್ಗೆ ಬೆಂಬಲ ನೀಡಿದ್ದೆವು ಎಂದು ಹೇಳಿದರು.
ರಾಜಕೀಯ ದುರುದ್ದೇಶದ ಆರೋಪ
ದೇವೇಗೌಡ ಅವರು ಮಾಡಿರುವ ಎಲ್ಲ ಆರೋಪಗಳೂ ಆಧಾರರಹಿತ. ಇವೆಲ್ಲವರೂ ರಾಜಕೀಯ ದುರುದ್ದೇಶದಿಂದ ಮಾಡಿರುವ ಸುಳ್ಳು ಆರೋಪಗಳಾಗಿವೆ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಸಿಎಂ ಆಗಿರುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ ಎಂದು ದೇವೇಗೌಡರು ಆರೋಪಿಸಿದ್ದಾರೆ. ನಮಗೂ ಅವರಿಗೂ ರಾಜಕೀಯ ವೈರತ್ವ ಇದೆ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ನಾನು ಎಂದಿಗೂ ಹಾಗೆ ಭಾವಿಸಿರಲಿಲ್ಲ.
ಜೆಡಿಎಸ್ಗೆ ಬೆಂಬಲ ನೀಡುವ ಕುರಿತು ಮರು ಮಾತಾಡದೆಯೇ ಹೈಕಮಾಂಡ್ನ ತೀರ್ಮಾನಕ್ಕೆ ತಲೆಬಾಗಿ ಒಪ್ಪಿಕೊಂಡಿದ್ದೇ. 14 ತಿಂಗಳು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಯಾವತ್ತೂ ಕೂಡ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ.
ಸರ್ಕಾರ ಕೆಡವೋದ್ರಲ್ಲಿ ದೇವೇಗೌಡ್ರು ನಿಪುಣರು
ಬೊಮ್ಮಾಯಿ ಸರ್ಕಾರ ಬೀಳಿಸಿದವರು ಯಾರು? ರಾತ್ರೋ ರಾತ್ರಿ ಅವರ ಕ್ಯಾಂಪ್ಗೆ ಹೋಗಿ ಬೆಂಬಲ ನೀಡಿದವರು ಯಾರು? ಬಿಜೆಪಿ ಜತೆ ಸರ್ಕಾರ ರಚಿಸುವುದಾದರೆ ನನ್ನ ಹೆಣದ ಮೇಲೆ ಮಾಡಲಿ ಎಂದು ದೇವೇಗೌಡರು ಹೇಳಿದ್ದರು. ದೇವೇಗೌಡರ ಅನುಮತಿ ಇಲ್ಲದೆಯೇ ಕುಮಾರಸ್ವಾಮಿ ಹೋಗಿ ಬಿಜೆಪಿ ಅವರ ಜತೆ ಸೇರಿಕೊಂಡು ಸರ್ಕಾರ ರಚಿಸಲು ಸಾಧ್ಯವೇ ಇರುತ್ತಿರಲಿಲ್ಲ. ಅವರು ನಾಟಕ ಆಡಿದ್ದಾರೆ. ಹಾಗೆ ಮಾಡದೆ ಇದ್ದಿದ್ದರೆ ಬಿಜೆಪಿ ಸರ್ಕಾರ ಬರುತ್ತಿರಲಿಲ್ಲ. 20-20 ತಿಂಗಳಿಗೆ ಒಪ್ಪಂದ ಮಾಡಿಕೊಂಡರು. 20 ತಿಂಗಳು ಆದ ಬಳಿಕ ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಬೇಕಿತ್ತಲ್ಲ? ಆದರೆ ಕೊಡದೆ ವಚನ ಭ್ರಷ್ಟರಾದವರು ದೇವೇಗೌಡ ಮತ್ತು ಕುಮಾರಸ್ವಾಮಿ.
ಸರ್ಕಾರ ಕೆಡವೋದ್ರಲ್ಲಿ ದೇವೇಗೌಡ್ರು ನಿಪುಣರು ಇತಿಹಾಸ ಕೆದಕಿದ್ರೆ ಯಾರು ಏನ್ ಮಾಡಿದ್ರು ಎಲ್ಲ ಬಣ್ಣ ಬಯಲಾಗುತ್ತೆ. ಧರಂಸಿಂಗ್ ಸರ್ಕಾರ ಇದ್ದಾಗ ಏನ್ ಮಾಡಿದ್ರು ಗೊತ್ತಿಲ್ವಾ. ಧರಂಸಿಂಗ್ ಸರ್ಕಾರ ತೆಗೆದು ಬಿಜೆಪಿ ಜತೆ ಕುಮಾರಸ್ವಾಮಿ ಕೈಜೋಡಿಸಲು ದೇವೇಗೌಡ ಕಾರಣ.
ಬಿಜೆಪಿ ಇಲ್ಲಿ ಕಾಲೂರಲು ದೇವೇಗೌಡ ಮತ್ತು ಕುಮಾರಸ್ವಾಮಿ ಕಾರಣ. ಅವರು ವಚನಭ್ರಷ್ಟರಾಗಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂತು.
ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಗುಡುಗಿದ ದೇವೇಗೌಡ
ಸಿಎಂ ಆಗುವುದನ್ನು ತಪ್ಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ
ನಾನು ಎಂದಿಗೂ ಅಧಿಕಾರದ ಹಿಂದೆ ಬಿದ್ದವನಲ್ಲ. ಸರ್ಕಾರ ಬೀಳಿಸುವಂತಹ ನೀಚ ರಾಜಕಾರಣ ಮಾಡುವುದಿಲ್ಲ. ಯಾವ ಪಕ್ಷ ಅಧಿಕಾರ ಕೊಡುತ್ತದೆಯೋ ಆ ಪಕ್ಷಕ್ಕೇ ಅವರು ಮೋಸ ಮಾಡುವುದು ದೇವೇಗೌಡರ ಜಾಯಮಾನ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರಿಗೆ 1996ರಲ್ಲಿ ಪ್ರಧಾನಿಯಾದಾಗ, 2004ರಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂಬ ಸಿಟ್ಟಿದೆ ಎಂದು ದೇವೇಗೌಡರು ಹೇಳಿದ್ದಾರೆ. ಅದನ್ನೇನೂ ನಾನು ಪ್ರಚಾರ ಮಾಡಿಕೊಂಡು ಹೋಗುತ್ತಿಲ್ಲ. ಕುಮಾರಸ್ವಾಮಿ ಸ್ವತಃ ಅದನ್ನು ಒಪ್ಪಿಕೊಂಡಿದ್ದಾರೆ. ನೀವು ಮುಖ್ಯಮಂತ್ರಿಯಾಗಲು ನಾವು ಬಿಟ್ಟಿಲ್ಲ ಎಂದು ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ.
ಶರದ್ ಪವಾರ್ ಮನೆಯಲ್ಲಿ 2004ರಲ್ಲಿ ಸಭೆ ನಡೆದಿತ್ತು. ಸರ್ಕಾರ ರಚನೆಯ ಗೊಂದಲ ಇತ್ತು. ಇದೇ ದೇವೇಗೌಡರು ನನ್ನ ಎದುರು ಮಾತನಾಡಿದ್ದರು. ನನ್ನನ್ನು ಸಿಎಂ ಮಾಡುವುದು ಬೇಡ ಎಂದಿದ್ದರು. ನಾನು ಸಿಎಂ ಆಗುವುದನ್ನು ನೀವು ತಪ್ಪಿಸಿದಿರಿ ಎಂದು ನಾನು ವಿಧಾನಸಭೆಯಲ್ಲಿ ಹೇಳಿದಾಗ ಕುಮಾರಸ್ವಾಮಿ ಅದನ್ನು ಒಪ್ಪಿಕೊಂಡಿದ್ದರು.
ಒಟ್ಟಿಗೆ ಚುನಾವಣಾ ಪ್ರಚಾರ ಮಾಡಿದ್ದೇವೆ
ಸಂಸತ್ ಚುನಾವಣೆಯಲ್ಲಿ ಸ್ನೇಹದಿಂದ ಸ್ಪರ್ಧೆಗೆ ಇಳಿಯೋಣ, ಮೈತ್ರಿ ಬೇಡ ಎಂದು ಹೇಳಿದ್ದೆ. ಮೈಸೂರಿನಲ್ಲಿನ ಸ್ಥಳೀಯ ಚುನಾವಣೆಗಳಲ್ಲಿ ಕಿತ್ತಾಡಿಕೊಂಡಿದ್ದೆವು ಮತಗಳು ಬರುವುದಿಲ್ಲ ಎಂದು ಹೇಳಿದ್ದೆ. ಆದರೆ, ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿತ್ತು.
ನಾನು ಮತ್ತು ದೇವೇಗೌಡರು ಬೆಂಗಳೂರು, ಹಾಸನ, ಮಂಡ್ಯ, ತುಮಕೂರು ಮುಂತಾದೆಡೆ ಜಂಟಿಯಾಗಿ ಪ್ರಚಾರ ಮಾಡಿದ್ದೇವೆ. ಐದು ಲೋಕಸಭೆ ಕ್ಷೇತ್ರಗಳಲ್ಲಿ ಒಟ್ಟಿಗೆ ಹೋಗಿ ಪ್ರಚಾರ ಮಾಡಿದ್ದಾರೆ. ಸಂಸತ್ ಚುನಾವಣೆಯಲ್ಲಿ ನನ್ನ ಮತ್ತು ನಿಖಿಲ್ ಸೋಲಲು ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ಹಾಗಾದರೆ ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಬೆಂಗಳೂರು ಉತ್ತರದಲ್ಲಿ ಸೋಲಲು ಯಾರು ಕಾರಣ?
ಸಚಿವರಾಗಿದ್ದ ಜಿಟಿ ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನವರು ಬಿಜೆಪಿಗೆ ಮತ ಹಾಕಿದರು ಎಂದು ನೇರವಾಗಿ ಹೇಳಿದ್ದರು. ಹಾಸನದಲ್ಲಿ ಅವರ ಮೊಮ್ಮಗನೇ ನಿಂತಿದ್ದರು. ಅಲ್ಲಿ ಹೇಗೆ ಗೆದ್ದರು? ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಅಲ್ಲಿ ಕೆಲಸ ಮಾಡಲಿಲ್ಲವೇ? ಮಂಡ್ಯದಲ್ಲಿ ಮತ್ತು ತುಮಕೂರಿನಲ್ಲಿ ಎಂದಷ್ಟೇ ಹೇಳುತ್ತಾರೆ.
ಕುಟುಂಬದವರೇ ನಿಂತಿದ್ದರೆ ಜನ ತಿರುಗಿಬಿದ್ದಿದ್ದಾರೆ
ನನಗೆ ಹಿಂದೆ ಮುಂದೆ ರಾಜಕೀಯ ಮಾಡಿ ಗೊತ್ತಿಲ್ಲ. ನೇರವಾಗಿ ರಾಜಕೀಯ ಮಾಡಿದವನು. ಕುಟುಂಬದವರೇ ಎಲ್ಲರೂ ಚುನಾವಣೆಗೆ ನಿಂತಿದ್ದಕ್ಕೆ ಜನರು ಬೇಸರಗೊಂಡು ಅವರ ವಿರುದ್ಧ ತಿರುಗಿನಿಂತು ವೋಟ್ ಹಾಕಿದರು ಎಂದು ಜನರು ಹೇಳಿದರು. ತಾತ, ಮೊಮ್ಮಕ್ಕಳು ಎಲ್ಲರೂ ನಿಂತಿದ್ದರು. ಅದಕ್ಕೆ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದರೆ ನನ್ನ ಮೇಲೆ ಗೂಬೆ ಕೂರಿಸಿದ್ದಾರೆ.
ಸಿದ್ದರಾಮಯ್ಯ ಹಾಗೆ, ಜಾತಿ ವಿರೋಧಿ ಎನ್ನುತ್ತಾರೆ. ನಾನು ಜಾತ್ಯತೀಯ ತತ್ವದವನು. ಎಲ್ಲ ಜಾತಿ, ಎಲ್ಲ ಧರ್ಮದವರಿಗೆ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಬಡವರ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ.
ದೇವೇಗೌಡರು ಸ್ವಜಾತಿಯವರನ್ನೇ ಬೆಳೆಸಿಲ್ಲ
ದೇವೇಗೌಡರು ರಾಜಕೀಯ ಜೀವನದಲ್ಲಿ ಯಾರನ್ನೂ ಬೆಳೆಸಿಲ್ಲ. ಕುಟುಂಬದವರು ಮಕ್ಕಳು ಮೊಮ್ಮಕ್ಕಳನ್ನು ಬಿಟ್ಟು. ಸ್ವಜಾತಿಯವರನ್ನೇ ಬೆಳೆಸುವುದಿಲ್ಲ. ನನಗೆ ಎಲ್ಲ ಜಾತಿ ಧರ್ಮದವರು ಸ್ನೇಹಿತರಿದ್ದಾರೆ. ಇವರು ಯಾರನ್ನು ಬೆಳೆಸಿದ್ದಾರೆ? ಬೋಜೇಗೌಡರು, ಬಚ್ಚೇಗೌಡರು, ನಾಗೇಗೌಡರು, ಜೀವರಾಜ್ ಆಳ್ವ ಇವರನ್ನೆಲ್ಲ ನಾನೇ ತುಳಿಯಲು ಹೋಗಿದ್ದೆನಾ? ಇವರೆಲ್ಲ ಅವರ ಜಾತಿಯವರಲ್ಲವಾ?
ತಾನು ಕಳ್ಳ ಪರರ ನಂಬ
ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ರಾಜಕೀಯ ಲಾಭ ಆಗುತ್ತದೆ, ಅನುಕಂಪ ಸಿಗುತ್ತದೆ ಎಂದುಕೊಂಡಿದ್ದರೆ ಅದು ತಪ್ಪು. ದೇವೇಗೌಡರು ಇನ್ನೊಬ್ಬರ ಮೇಲೆ ಆರೋಪ ಮಾಡುವುದು, ನಮ್ಮ ಜಾತಿಯವರ ಮೇಲೆ ವಿರೋಧ ಮಾಡಿದ್ದಾರೆ ಎಂದು ಆರೋಪಿಸುವುದು. ಇಲ್ಲಸಲ್ಲದ್ದನ್ನು ಹೇಳಿ ಬಳಿಕ ಅಳುವುದು. ಇದು ದೇವೇಗೌಡರ ಟ್ರಿಕ್ಸ್. ಜೆಡಿಎಸ್ ವಿರೋಧಿಸಿದರೆ ಜಾತಿ ವಿರೋಧದ ಬಣ್ಣ ಕಟ್ಟುವುದನ್ನು ಮಾಡುತ್ತಾರೆ.
ಇದರಿಂದ ರಾಜಕೀಯ ಲಾಭ ಸಿಗುತ್ತದೆ ಎಂದುಕೊಂಡಿದ್ದಾರೆ. ರಾಜ್ಯದ ಜನತೆ ಬುದ್ಧಿವಂತರಿದ್ದಾರೆ. ನಮ್ಮ ಮತ್ತು ಅವರ ಇತಿಹಾಸ ಜನರಿಗೆ ಚೆನ್ನಾಗಿ ಗೊತ್ತಿದೆ. ನನ್ನ ರಾಜಕೀಯ ನಡವಳಿಕೆಯನ್ನು ನೋಡಿದ್ದಾರೆ. ಅವರು ಉತ್ತರ ನೀಡುತ್ತಾರೆ ಎಂದು ಹೇಳಿದರು.
ರಾಜಕೀಯ ಲಾಭಕ್ಕೆ, ಜನರ ಅನುಕಂಪ ಗಳಿಸಲು, ಅವರಿಗೆ ಹಳೆ ಮೈಸೂರಿನಲ್ಲಿ ಪ್ರಬಲ ಸ್ಪರ್ಧಿಯಾಗಿರುವ ನಮ್ಮನ್ನು ಮಲಗಿಸಲು ಈ ರೀತಿಯ ತಂತ್ರಗಳನ್ನು ನಡೆಸಿದ್ದಾರೆ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ದೆ ಎಂಬುದಕ್ಕೆ ಒಂದೇ ಒಂದು ನಿದರ್ಶನ ಕೊಡಿ. ಸಮನ್ವಯ ಸಮಿತಿಯಲ್ಲಿ ಕೈಗೊಂಡ ಯಾವ ತೀರ್ಮಾನ ವನ್ನು ಸಿಎಂ ಕುಮಾರಸ್ವಾಮಿ ಜಾರಿಮಾಡಲಿಲ್ಲ. ತಾನು ಕಳ್ಳ ಪರರ ನಂಬ ಅನ್ನೋ ಪಾಲಿಸಿ ಗೌಡ್ರುದು ಎಂದು ಸಿದ್ರಾಮಯ್ಯ ತಿರುಗೇಟು ನೀಡಿದರು.