ಸಾಹಿತಿ ಕೆ.ಎಸ್ ಭಗವಾನ್ ಮುಖಕ್ಕೆ ಮಸಿ: ತೀವ್ರವಾಗಿ ಖಂಡಿಸಿದ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 5: ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ಅವರ ಮುಖಕ್ಕೆ ಗುರುವಾರ ವಕೀಲರೊಬ್ಬರು ಕೋರ್ಟ್ ಆವರಣದಲ್ಲಿ ಮಸಿ ಬಳಿದಿರುವ ಕೃತ್ಯವನ್ನು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ವಕೀಲೆಯೊಬ್ಬರು ಮಸಿ ಬಳಿದ ಘಟನೆಯನ್ನು ದುಷ್ಕೃತ್ಯ ಹಾಗೂ ಖಂಡನೀಯ ಎಂದಿದ್ದಾರೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಚರ್ಚೆ-ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕೇ ವಿನಃ ಈ ರೀತಿಯ ಅಸಭ್ಯ ನಡವಳಿಕೆ ಮೂಲಕ ಅಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಪೊಲೀಸರು ತಕ್ಷಣ ವಕೀಲೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನೆಲೆ ವಿಚಾರಣೆಗಾಗಿ ಸಾಹಿತಿ ಭಗವಾನ್ ಗುರುವಾರ ಬೆಂಗಳೂರಿನ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ಸಂದರ್ಭ ವಕೀಲೆ ಮೀರಾ ರಾಘವೇಂದ್ರ ಎಂಬುವವರು ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಹಿಂದೂ ಧರ್ಮದವರಿಗೆ ಧಕ್ಕೆ ತಂದ ಹಿನ್ನೆಲೆ ಮೀರಾ ರಾಘವೇಂದ್ರ ಅವರೇ ಭಗವಾನ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.
ಕೋರ್ಟ್ ವಿಚಾರಣೆ ಮುಗಿಸಿ ಹೊರ ಬಂದ ಭಗವಾನ್ ಮುಖಕ್ಕೆ ಮೀರಾ ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಈ ಕೃತ್ಯವನ್ನು ಪ್ರಗತಿಪರ ವ್ಯಕ್ತಿಗಳು, ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಾರೆ. ಸಾಹಿತಿ ಭಗವಾನ್ ಅವರಿಗೆ ಆಗಿರುವ ಅನ್ಯಾಯಕ್ಕೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications