ವೈಷ್ಣವಿ ಸಾವಿನಿಂದ ಖಿನ್ನರಾಗಿದ್ದ ತಾತ, ಅಜ್ಜಿ ಆತ್ಮಹತ್ಯೆ
ಬೆಂಗಳೂರು, ಮೇ 30 : ಹೆಬ್ಬಾಳ ಸಮೀಪದ ರೈಲ್ವೆ ಹಳಿಗಳ ಮೇಲೆ ಮೇ 23ರಂದು ಛಿದ್ರವಾದ ಸ್ಥಿತಿಯಲ್ಲಿ ದೊರೆತ ಶವಗಳ ಗುರುತು ಪತ್ತೆಯಾಗಿದೆ. ಲಾಲ್ ಬಾಗ್ನಲ್ಲಿ ಜೇನು ನೊಣಗಳ ದಾಳಿಯಿಂದ ಮೃತಪಟ್ಟ ವೈಷ್ಣವಿಯ ತಾತ ಮತ್ತು ಅಜ್ಜಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ಮೊಮ್ಮಗಳ ಅಗಲಿಕೆಯ ದುಃಖ ಮರೆಯಲಾಗುತ್ತಿಲ್ಲ. ಅವಳ ಬಳಿಗೆ ಹೋಗುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ' ಎಂದು ಡೆತ್ನೋಟ್ ಬರೆದಿಟ್ಟು ವೈಷ್ಣವಿ ತಾತ ಮತ್ತು ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಸಾವುಗಳಿಂದಾಗಿ ಕುಟುಂಬ ದುಃಖದಲ್ಲಿ ಮುಳುಗಿದೆ. [ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]

ಕುಮಾರಸ್ವಾಮಿ ಲೇಔಟ್ ನಿವಾಸಿ ಕೆ.ವಿ.ಮೂರ್ತಿ (70) ಮತ್ತು ಛಾಯಾ (65) ಆತ್ಮಹತ್ಯೆ ಮಾಡಿಕೊಂಡವರು. ಮಗ ಗುರುಪ್ರಸಾದ್ ಹಾಗೂ ಸೊಸೆ ಸುಗುಣಾ ಜತೆ ಕುಮಾರಸ್ವಾಮಿ ಲೇಔಟ್ನಲ್ಲಿ ದಂಪತಿಗಳು ವಾಸವಾಗಿದ್ದರು. ಮೇ 23ರಂದು ಸಂಜೆ ಮನೆಯಿಂದ ಹೊರಹೋಗಿದ್ದ ದಂಪತಿ ವಾಪಸ್ ಆಗಿರಲಿಲ್ಲ. [ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ]

ಘಟನೆ ವಿವರ : 2016ರ ಮೇ 23ರಂದು ಸಂಜೆ ಮನೆಯಿಂದ ಕೆ.ವಿ.ಮೂರ್ತಿ ಮತ್ತು ಛಾಯಾ ಅವರು ಹೊರಹೋಗಿದ್ದರು. ಗುರುಪ್ರಸಾದ್ ಅವರು ದೇವಸ್ಥಾನಕ್ಕೆ ಹೋಗಿರಬಹುದು ಎಂದು ಸುಮ್ಮನಿದ್ದರು. ಎರಡು ದಿನವಾದರೂ ಮನೆಗೆ ವಾಪಸ್ ಆಗದಿದ್ದರಿಂದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಮೇ 23ರಂದು ರಾತ್ರಿ 7.30ರ ಸುಮಾರಿಗೆ ಹೆಬ್ಬಾಳದಲ್ಲಿ ರೈಲಿಗೆ ತಲೆಕೊಟ್ಟು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಶವಗಳನ್ನು ನೋಡಿದ ಸ್ಥಳೀಯರು ಹೆಬ್ಬಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಸ್ಥಳ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತಿತ್ತು. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಶವಗಳನ್ನು ವಶಕ್ಕೆ ಪಡೆದುಕೊಂಡು ಗುರುತು ಕಾರ್ಯ ಆರಂಭಿಸಿದ್ದರು.
ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೂ ಶವದ ಕುರಿತು ಮಾಹಿತಿ ರವಾನಿಸಲಾಗಿತ್ತು. ಆದರೆ, ಶವದ ಗುರುತು ಮಾತ್ರ ಪತ್ತೆಯಾಗಿರಲಿಲ್ಲ. ಶವಗಳನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇಡಲಾಗಿತ್ತು.
ಡೆತ್ ನೋಟ್ ಪತ್ತೆ : ತಂದೆ-ತಾಯಿ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟ ಬಳಿಕ ಮನೆಯಲ್ಲಿ ಮೊಬೈಲ್ ಪರೀಕ್ಷಿಸಿದ ಗುರುಪ್ರಸಾದ್ ಅವರಿಗೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂಬ ಸಂದೇಶ ಟೈಪ್ ಮಾಡಿ ಇಟ್ಟಿರುವುದು ಸಿಕ್ಕಿತು. ಜೊತೆ ಪತ್ರವೊಂದು ಸಿಕ್ಕಿತ್ತು.
'ಮೊಮ್ಮಗಳ ಅಗಲಿಕೆಯ ದುಃಖ ಮರೆಯಲಾಗುತ್ತಿಲ್ಲ. ಅವಳ ಬಳಿಗೆ ಹೋಗುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ' ಎಂದು ಪತ್ರದಲ್ಲಿ ಬರೆದಿತ್ತು. ಗುರುಪ್ರಸಾದ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕುಮಾರಸ್ವಾಮಿ ಲೇಔಟ್ ಪೊಲೀಸರು ರೈಲ್ವೆ ಪೊಲೀಸರೊಂದಿಗೆ ಮಾತುಕತೆ ನಡೆಸಿ, ಆಸ್ಪತ್ರೆಯಲ್ಲಿ ಶವಗಳನ್ನು ಪರೀಕ್ಷಿಸಿದಾಗ ಕೆ.ವಿ.ಮೂರ್ತಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವೈಷ್ಣವಿ ಸಾವು : 2015ರ ಆಗಸ್ಟ್ 15ರಂದು ಲಾಲ್ ಬಾಗ್ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಕೆ.ವಿ.ಮೂರ್ತಿ ಅವರು ಮೊಮ್ಮಗಳು ವೈಷ್ಣವಿ (7) ಜೊತೆ ಬಂದಿದ್ದರು. ಆಗ ಹೆಜ್ಜೇನುಗಳ ದಾಳಿಗೆ ಒಳಗಾಗಿ ವೈಷ್ಣವಿ ಮೃತಪಟ್ಟಿದ್ದಳು. ಮೊಮ್ಮಗಳ ಸಾವಿನ ದುಃಖ ತಾಳಲಾರದೆ ಮೂರ್ತಿ ಹಾಗೂ ಛಾಯಾ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.












Click it and Unblock the Notifications