ಅನರ್ಹ ಶಾಸಕರ ಕಷ್ಟ ಬಿಚ್ಚಿಟ್ಟ ಶಿವರಾಜ್ ತಂಗಡಗಿ
ಬೆಂಗಳೂರು, ಆಗಸ್ಟ್ 23: ಅನರ್ಹರಾದ ಬಳಿಕ ಶಾಸಕರ ಕಷ್ಟ ಏನು ಎಂದು ನನಗೆ ಗೊತ್ತಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿದ ಬಳಿಕ ಅನರ್ಹ ಆದ ಮೇಲೆ ಆಗುವ ಕಷ್ಟ ಏನು ಎಂದು ನನಗೆ ತಿಳಿದಿದೆ. ಈ ಹಿಂದೆ ಆ ಕಷ್ಟವನ್ನು ನಾನೂ ಕೂಡ ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಯಾರೂ ಕೂಡ ಬಿಜೆಪಿಯವರು ಮಾತನ್ನು ನಂಬಬೇಡಿ ಎಂದು ನಾನು ಈ ಹಿಂದೆ ಹೇಳಿದ್ದೆ. ಈಗ ಅನರ್ಹ ಶಾಸಕರ ಕಿವಿಗೆ ಬಿಜೆಪಿ ಸರಿಯಾಗಿಯೇ ಹೂ ಇಟ್ಟಿದೆ. ಅವರಿಗೆ ಏನೇನೋ ಭರವಸೆ ಕೊಟ್ಟು ಕೊನೆಗೆ ಬೀದಿಗೆ ತಂದು ನಿಲ್ಲಿಸಿದ್ದಾರೆ. ದಯಮಾಡಿ ಯಾರು ಬಿಜೆಪಿಯವರ ಆಶ್ವಾಸನೆ ನಂಬಬೇಡಿ. ಯಾಕೆಂದರೆ ಅವರು ಸಿಎಂ ಸ್ಥಾನ ಬಿಟ್ಟು ಉಳಿದೆಲ್ಲಾ ಸ್ಥಾನ ಕೊಡ್ತೀನಿ ಅಂತಾರೆ.
Recommended Video

ಹಣಕಾಸು, ಗೃಹ, ಲೋಕೋಪಯೋಗಿ ಸೇರಿದಂತೆ ಎಲ್ಲವೂ ಕೊಡ್ತೇವಿ ಅಂತಾರೆ ಆದರೆ ಕೊಡಲ್ಲ ಎಂದು ವ್ಯಂಗ್ಯವಾಡಿದರು.
ಅನರ್ಹ ಶಾಸಕರು ಅಂದುಕೊಂಡಂತೆ ಬಿಜೆಪಿ ಹೈಕಮಾಂಡ್ ನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಮೊದಲಿನಂತೆ ಬಿಜೆಪಿಯ ಹೈಕಮಾಂಡ್ ಈಗ ಇಲ್ಲ ಎಂದು ಹೇಳಿದರು. ಈ ಹಿಂದೇ ನನಗೆ ಬಂದ ಕಷ್ಟ, ಈಗ ನಮ್ಮ ಸ್ನೇಹಿತರು ಅನುಭವಿಸುತ್ತಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಅವರು ಅಷ್ಟು ಸುಲಭವಾಗಿ ಕೇಸ್ ಗೆದ್ದು ಬಂದು ಮಂತ್ರಿ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದರು.
ಬಿಜೆಪಿಯವರು ಕೊಟ್ಟ ಭರವಸೆಯನ್ನು ಈಡೇರಿಸುವುದಿಲ್ಲ. ಯಾರು ತಮಗೆ ಬೆಂಬಲಿಸಿದ್ದಾರೋ ಅವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಕ್ರಮೇಣ ಇದು ಅನರ್ಹ ಶಾಸಕರಿಗೂ ಮನವರಿಕೆಯಾಗುತ್ತದೆ ಎಂದರು.












Click it and Unblock the Notifications