ಶರತ್ ಬಚ್ಚೇಗೌಡ ಗೆ ಪ್ರೆಶರ್ ಕುಕ್ಕರ್: ಬುಡಮೇಲಾದ ಕಾಂಗ್ರೆಸ್ ಪ್ಲಾನ್
ಹೊಸಕೋಟೆ, ನವೆಂಬರ್ 22: ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸಿರುವ ಶರತ್ ಬಚ್ಚೇಗೌಡ ಅವರಿಗೆ ಕುಕ್ಕರ್ ಅನ್ನು ಚುನಾವಣಾ ಚಿಹ್ನೆಯಾಗಿ ಆಯೋಗ ನೀಡಿದೆ. ಆದರೆ ಇದರಿಂದ ಕಾಂಗ್ರೆಸ್ಗೆ ಸಂಕಟ ಶುರುವಾಗಿದೆ.
ಹೌದು, ಶರತ್ ಬಚ್ಚೇಗೌಡ ಗೆ ಪ್ರೆಶರ್ ಕುಕ್ಕರ್ ಅನ್ನು ಚುನಾವಣೆ ಚಿಹ್ನೆಯಾಗಿ ನೀಡಿರುವುದರಿಂದ ಕಾಂಗ್ರೆಸ್ ನಷ್ಟ ಅನುಭವಿಸುವಂತಾಗಿದೆ.
ಏಕೆಂದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಮತಕ್ಕಾಗಿ ಪ್ರೆಶರ್ ಕುಕ್ಕರ್ ವಿತರಣೆ ಮಾಡಿದ್ದರು, ಆದರೆ ಈಗ ಅದೇ ಪ್ರೆಶರ್ ಕುಕ್ಕರ್ ಚಿಹ್ನೆ ಎದುರಾಳಿ ಶರತ್ ಬಚ್ಚೇಗೌಡ ಪಾಲಾಗಿದ್ದು, ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಾಂಗ್ರೆಸ್ ನಿಂದ ಪ್ರೆಶರ್ ಕುಕ್ಕರ್ ಪಡೆದುಕೊಂಡ ಜನ ಮತ ಚಲಾಯಿಸುವಾಗ ಪ್ರೆಶರ್ ಕುಕ್ಕರ್ ಗೆ ಮತ ಚಲಾಯಿಸಿದರೆ ಏನು ಮಾಡುವುದು ಎಂಬ ಅನುಮಾನ ಕಾಂಗ್ರೆಸ್ ಗೆ ಮೂಡಿದೆ.

ಕಾಂಗ್ರೆಸ್ ಬೆಂಬಲಿಗರಿಂದ ಪ್ರೆಶರ್ ಕುಕ್ಕರ್ ಹಂಚಿಕೆ
ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಬೆಂಬಲಿಗರು ಮತಗಳನ್ನು ಸೆಳೆಯಲು ಹಲವು ಹಳ್ಳಿಗಳಲ್ಲಿ ಪ್ರೆಶರ್ ಕುಕ್ಕರ್ ವಿತರಣೆ ಮಾಡಿದ್ದಾರೆ. ಮೂಲಗಳ ಪ್ರಕಾರ ಹೊಸಕೋಟೆ ಹೊರವಲಯದ ಗೋಧಾಮುಗಳಲ್ಲಿ ಜನರಿಗೆ ಹಂಚಲೆಂದು ಸಾವಿರಾರು ಕುಕ್ಕರ್ ಗಳನ್ನು ದಾಸ್ತಾನು ಮಾಡಲಾಗಿದೆ. ಆದರೆ ಈಗ ಕುಕ್ಕರ್ ಶರತ್ ಪಾಲಾದ್ದರಿಂದ ಕಾಂಗ್ರೆಸ್ ಪಕ್ಷ 'ಬದಲಿ ವ್ಯವಸ್ಥೆ' ಮಾಡುವ ತುರ್ತಿನಲ್ಲಿದೆ.

ಪ್ರೆಶರ್ ಕುಕ್ಕರ್ ರಾಜಕೀಯ ಮಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಬೆಂಬಲಿಗರು ಪ್ರೆಶರ್ ಕುಕ್ಕರ್ ಹಂಚಿ ಜಯಗಳಿಸಿದ್ದು ಗೊತ್ತಿರುವ ವಿಚಾರ, ಹಾಗಾಗಿ ಹೊಸಕೋಟೆಯಲ್ಲಿ ಸಹ ಕಾಂಗ್ರೆಸ್ ಇದೇ ತಂತ್ರವನ್ನು ಅನುಸರಿಸಲು ಮುಂದಾಗಿತ್ತು.

ಕುಕ್ಕರ್ ಚಿಹ್ನೆ ಸಿಕ್ಕಿದ್ದಕ್ಕೆ ಶರತ್ ಬಚ್ಚೇಗೌಡ ಸಂತಸ
ಇನ್ನು ಶರತ್ ಬಚ್ಚೇಗೌಡ ಅವರಂತೂ ತಮಗೆ ದೊರೆತಿರುವ ಚುನಾವಣಾ ಚಿಹ್ನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಚುನಾವಣೆಯಲ್ಲಿ ಗೆದ್ದೇ-ಗೆಲ್ಲುವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ರಣಾಂಗಣವಾಗಿದೆ ಹೊಸಕೋಟೆ ಕ್ಷೇತ್ರ
ಹೊಸಕೋಟೆ ಕ್ಷೇತ್ರ ರಾಜ್ಯದಾದ್ಯಂತ ಗಮನ ಸೆಳೆದಿದ್ದು, ಎಂಟಿಬಿ ನಾಗರಾಜು ಬಿಜೆಪಿಯಿಂದ ಸ್ಪರ್ಧಿಸಿದ್ದರೆ. ಕಾಂಗ್ರೆಸ್ನಿಂದ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಸ್ಪರ್ಧಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ.

ಕೋಟ್ಯಧಿಪತಿಗಳ ನಡುವೆ ಕದನ
ಕ್ಷೇತ್ರದಲ್ಲಿ ಭಾರಿ ಜಿದ್ದಾ-ಜಿದ್ದಿನ ಹೋರಾಟ ನಡೆಯುತ್ತಿದ್ದು, ಹಣದ ಹೊಳೆಯೇ ಕ್ಷೇತ್ರದಲ್ಲಿ ಹರಿಯುತ್ತಿದೆ. ಮೂರೂ ಜನ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು, ಮತಗಳಿಸಲು ಮತದಾರರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ.












Click it and Unblock the Notifications