ರಾತ್ರೋರಾತ್ರಿ ಮಾಯವಾದ ಶನೀಶ್ವರ, ಭಕ್ತರ ಹುಡುಕಾಟ
ಬೆಂಗಳೂರು, ಅಕ್ಟೋಬರ್ 19: ರಾತ್ರೋರಾತ್ರಿ ಶನೀಶ್ವರ ದೇವಸ್ಥಾನವೇ ಮಾಯವಾಗಿದ್ದು ಭಕ್ತರು ದೇವರ ಹುಡುಕಾಟದಲ್ಲಿದ್ದಾರೆ.
ಹೌದು ಮೆಜೆಸ್ಟಿಕ್ ಓಕಳೀಪುರ ಸಮೀಪದಲ್ಲಿರುವ ಶನೀಶ್ವರ ದೇವಸ್ಥಾನ ರಾತ್ರಿಯಿಂದ ಬೆಳಗಾಗುವುದರೊಳಗೆ ಮಾಯವಾಗಿದ್ದು, ಬೆಳಗ್ಗೆ ಎಂದಿನಂತೆ ಭಕ್ತರು ಬಂದಾಗ ದೇವರೇ ಇಲ್ಲದಿರುವುದು ಆತಂಕ ಮೂಡಿಸಿದೆ. ಹಾಗಾದರೆ ದೇವರ ವಿಗ್ರಹ ಎಲ್ಲಿದೆ, ಘಟನೆ ಏನು ಎಂಬುದನ್ನು ನೋಡೋಣ.
ಮೆಜೆಸ್ಟಿಕ್ ಬಳಿ ಇರುವ ಶನೀಶ್ವರ ದೇವಾಲಯವನ್ನು ರೈಲ್ವೆ ಇಲಾಖೆ ನೆಲಸಮ ಮಾಡಿದೆ. ಇಂದು ಶನಿವಾರವಾದ್ದರಿಂದ ಶನೀಶ್ವರನಿಗೆ ಪೂಜೆ ಸಲ್ಲಿಸಲು ಬೆಳ್ಳಂಬೆಳಗ್ಗೆಯೇ ಭಕ್ತರು ಆಗಮಿಸಿದ್ದರು. ಆದರೆ ಅವರಿಗೆ ನಿರಾಸೆ ಜೊತೆಗೆ ಆತಂಕವೂ ಕಾದಿತ್ತು. ದೇವರೂ ಇರಲಿಲ್ಲ ದೇವಸ್ಥಾನವೂ ಇರಲಿಲ್ಲ.

ರೈಲ್ವೆ ಇಲಾಖೆಯು ಕಾಮಗಾರಿಗಾಗಿ ದೇವಾಲಯವನ್ನು ತೆರವುಗೊಳಿಸಿದೆ. ದೇವರ ವಿಗ್ರಹವನ್ನು ಅಲ್ಲೇ ಸಮೀಪದಲ್ಲಿರುವ ಅಯ್ಯಪ್ಪ ದೇಗುಲದಲ್ಲಿ ಇರಿಸಲಾಗಿದೆ.
ಶನೀಶ್ವರ ಶಕ್ತಿಶಾಲಿ ದೇವರು, ನಾವು ಎಷ್ಟೋ ವರ್ಷಗಳಿಂದ ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಿದ್ದೇವೆ. ಒಂದೊಮ್ಮೆ ಆ ಜಾಗದಲ್ಲಿ ಚರ್ಚ್ ಅಥವಾ ಮಸೀದಿ ಇದ್ದರೆ ಹೀಗೆ ಮಾಡುತ್ತಿದ್ದರೇ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಇಲಾಖೆ ಜಾಗವಾದ್ದರಿಂದ ಹೈಕೋರ್ಟ್ ಆದೇಶದಂತೆ ಶಿಫ್ಟ್ ಮಾಡಿದ್ದಾರೆ. ಆದರೆ ಇದು ಗೊತ್ತಿರದ ಭಕ್ತರು ಇಂದು ಶನೀಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ದೇಗುಲ ಸೇರಿದಂತೆ ದೇವರ ಮೂರ್ತಿ ಇರದಿದ್ದನ್ನು ಕಂಡು ಆಕ್ರೋಶಗೊಂಡಿದ್ದಾರೆ.
ಶನೀಶ್ವರನ ಮೂರ್ತಿಯನ್ನು ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇಗುಲಕ್ಕೆ ನೀಡಿದ್ದರೂ ಪಾದವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಓಕಳಿಪುರಂನಲ್ಲಿ ಸುಮಾರು 40 ವರ್ಷಗಳಿಂದ ಈ ಶನೀಶ್ವರ ದೇವಸ್ಥಾನ ಇತ್ತು. ಅದನ್ನು ರಸ್ತೆ ಅಗಲೀಕರಣ ಉದ್ದೇಶದಿಂದ ರೈಲ್ವೆ ಇಲಾಖೆ ಆರು ತಿಂಗಳ ಹಿಂದೆ ಮೆಜೆಸ್ಟಿಕ್ ನ ಭಾಗಕ್ಕೆ ಶಿಫ್ಟ್ ಮಾಡಿದೆ.












Click it and Unblock the Notifications