ಮುರುಘಾ ಶ್ರೀ ಪ್ರಕರಣ: ಬಸವಶ್ರೀ ಪ್ರಶಸ್ತಿ ವಾಪಸ್ ಮಾಡಿದ ಪತ್ರಕರ್ತ ಸಾಯಿನಾಥ್
ಬೆಂಗಳೂರು, ಸೆಪ್ಟೆಂಬರ್ 2: ಚಿತ್ರದುರ್ಗದ ಮುರುಘಾಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಪಿ. ಸಾಯಿನಾಥ್, 2017ರಲ್ಲಿ ಮುರುಘಾ ಮಠದಿಂದ ನೀಡಿದ್ದ ಬಸವಶ್ರೀ ಪ್ರಶಸ್ತಿಯನ್ನು ವಾಪಾಸ್ ಮಾಡಿದ್ದಾರೆ.
ಪ್ರತಿವರ್ಷ ಮಠದದಿಂದ ನೀಡುವ ಬಸವಶ್ರೀ ಪ್ರಶಸ್ತಿಗೆ 2017ರಲ್ಲಿ ಸಾಯಿನಾಥ್ ಅವರು ಆಯ್ಕೆಗೊಂಡಿದ್ದರು. 2017ರ ಅಕ್ಟೋಬರ್ 25ರಂದು ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದ್ದರು. ಪ್ರಶಸ್ತಿಯೊಂದಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿತ್ತು.
ಮುರುಘಾ ಶ್ರೀಗಳ ಬಂಧನ: ರಾಜ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, "ಚಿತ್ರದುರ್ಗದ ಮುರುಘಾಮಠದ ಮಠಾಧೀಶರಾದ ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿರುವ ಭೀಕರ ಬೆಳವಣಿಗೆಗಳ ಮಾಧ್ಯಮ ವರದಿಗಳಿಂದ ತಿಳಿದು ನಾನು ಹೆಚ್ಚು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ಯಾವುದೇ ಪದಗಳು ಬಲವಾಗಿಲ್ಲ." ಎಂದು ಹೇಳಿದ್ದಾರೆ.
5 ಲಕ್ಷ ಪ್ರಶಸ್ತಿ ಹಣ ಕೂಡ ವಾಪಸ್
ಪ್ರಕರಣದ ಸಂತ್ರಸ್ತರಿಗೆ ಬೆಂಬಲ ನೀಡುವ ಉದ್ದೇಶದಿಂದ, 2017 ರಲ್ಲಿ ಮುರುಘಾಮಠ ನನಗೆ ನೀಡಿದ್ದ ಬಸವಶ್ರೀ ಪ್ರಶಸ್ತಿಯನ್ನು ಬಹುಮಾನದ ಮೊತ್ತವಾಗಿ ಬಂದಿದ್ದ 5 ಲಕ್ಷ ರುಪಾಯಿಗಳನ್ನು ಕೂಡ ಚೆಕ್ ಮೂಲಕವಾಗಿ ಹಿಂದಿರುಗಿಸುತ್ತೇನೆ" ಎಂದು ಹೇಳಿದರು.
ಇಂತಹ ಘೋರ ಘಟನೆಗಳನ್ನು ಬೆಳಕಿಗೆ ತರುವಲ್ಲಿ ನೆರವಾದ ಮೈಸೂರು ಮೂಲದ ಎನ್ಜಿಒ ಒಡನಾಡಿ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಅನಿಷ್ಠಗಳ ವಿರುದ್ಧ ದಶಕಗಳಿಂದ ಒಡನಾಡಿ ಸಂಸ್ಥೆ ಹೋರಾಟ ಮಾಡಿಕೊಂಡು ಬರುತ್ತಿದೆ.
ಹಗರಣದ ತನಿಖೆಯನ್ನು ವೇಗವಾಗಿ ಮುಂದುವರೆಸುವಂತೆ ಮತ್ತು ಯಾವುದೇ ಒತ್ತಡಕ್ಕೆ ಮಣಿಯದೇ ತನಿಖೆ ಮಾಡಬೇಕು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಆಧಾರದ ಮೇಲೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಲವರಿಗೆ ಸಂದಿದೆ ಬಸವಶ್ರೀ ಪ್ರಶಸ್ತಿ
1997ರಿಂದ ಮುರುಘಾ ಮಠ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಹೆಸರಿನಲ್ಲಿ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ, ಶಬಾನಾ ಆಜ್ಮಿ, ದಲೈಲಾಮಾ, ಬಲ್ಲಾದೀರ್ ಗದ್ದರ್, ವೇಗದ ಓಟಗಾರ್ತಿ ಪಿ.ಟಿ ಉಷಾ, ನಟ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ಬಸವಶ್ರೀ ಪ್ರಶಸ್ತಿ ನೀಡಲಾಗಿದೆ.