ಲೋಕಾಯುಕ್ತ ಬಲವರ್ಧನೆಗೆ ಆಗ್ರಹಿಸಿ ಒಂದು ದಿನದ ಸತ್ಯಾಗ್ರಹ
ಬೆಂಗಳೂರು, ಅಕ್ಟೋಬರ್ 5: ಲಂಚಮುಕ್ತ ಕರ್ನಾಟಕ ವೇದಿಕೆಯು 'ಲೋಕಾಯುಕ್ತ ಬಲಪಡಿಸಿ' ಧರಣಿ ಸತ್ಯಾಗ್ರಹವನ್ನು ಅ.6ರಂದು ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಹಮ್ಮಿಕೊಂಡಿದೆ.
ಚುನಾವಣೆಗೂ ಮುನ್ನ ಪ್ರಮುಖ ರಾಜಕೀಯ ಪಕ್ಷಗಳು ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎನ್ನುವ ಮಾತುಗಳನ್ನು ಆಡುತ್ತಾರೆ, ಆದರೆ ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲವನ್ನೂ ಮರೆಯುತ್ತಾರೆ.
ವಿಧಾನಸಭಾ ಚುನಾವಣೆ ಮುಗಿದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 100 ದಿನಗಳು ಕಳೆದಿವೆ. ಈ ದಿನಗಳಲ್ಲಿ ಲೋಕಾಯುಕ್ತದ ಸ್ಥಿತಿಗತಿಗಳನ್ನು ತಿಳಿಯುವ ಪ್ರಯತ್ನವನ್ನು ಯಾರೂ ಮಾಡಿಲ್ಲ.

ಆಡಳಿತದಲ್ಲಿ ಲಂಚ ಮತ್ತು ಕರ್ತವ್ಯಲೋಪ ಹಿಂದಿಗಿಂತ ಹೆಚ್ಚು ಈಗ ನಡೆಯುತ್ತಿದೆ ಮತ್ತು ಭ್ರಷ್ಟರಿಗೆ ಯಾವುದೇ ಸಂಸ್ಥೆಯ ಅಥವ ಕಾನೂನುಕ್ರಮದ ಭಯ ಇಲ್ಲ ಎನ್ನುವ ವಾತಾವರಣ ಮೂಡಿದೆ ಎಂದು ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಕೆ.ಆರ್.ಪೇಟೆ ಕೃಷ್ಣ, ಎಸ್.ಆರ್.ಹಿರೇಮಠ, ಕೆ.ವಿ.ಧನಂಜಯ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications