ಸಂಶೋಧಕ ಕಲ್ಬುರ್ಗಿ ಹತ್ಯೆ, ರಾಜ್ಯದ ತನಿಖೆಗೆ ಸುಪ್ರೀಂ ಅಸಮಾಧಾನ
ಬೆಂಗಳೂರು, ನವೆಂಬರ್ 26: ಖ್ಯಾತ ಚಿಂತಕ ಡಾ. ಎಂಎಂ ಕಲ್ಬುರ್ಗಿ ಹತ್ಯೆ ಕುರಿತಂತೆ ಕರ್ನಾಟಕ ಸರ್ಕಾರ ಕೈಗೊಂಡಿರುವ ತನಿಖೆಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸೋಮವಾರ ಈ ಕುರಿತು ಡಾ ಕಲ್ಬುರ್ಗಿ ಕುಟುಂಬ ಸದಸ್ಯರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ ಕರ್ನಾಟಕ ಈವರೆಗೆ ಕಲ್ಬುರ್ಗಿಗಿ ಹತ್ಯೆ ಕುರಿತಂತೆ ಕೈಗೊಂಡಿರುವ ತನಿಖೆ ಆ ಕುರಿತ ಪ್ರಗತಿ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸುವಂತೆ ತಾಕೀತು ಮಾಡಿದೆ.
ಅಲ್ಲದೆ ಕರ್ನಾಟಕ ಸರ್ಕಾರ ಕೈಗೊಂಡಿರುವ ತನಿಖೆ ತೃಪ್ತಿಕರವಾಗಿಲ್ಲ, ಈ ಕುರಿತು ವಿಚಾರಣೆಯನ್ನು ಮುಂಬೈ ಹೈಕೋರ್ಟ್ಗೆ ಸ್ಥಳಾಂತರಿಸಬೇಕಾದೀತು ಎಂದು ಎಚ್ಚರಿಕೆ ಕೂಡ ನೀಡಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಎದುರು ಕಲ್ಬುರ್ಗಿ ಹತ್ಯೆ ತನಿಖೆ ವಿಚಾರದಲ್ಲಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಈಗಾಗಲೇ ಕರ್ನಾಟಕದಲ್ಲಿ ನಡೆದಿರುವ ಇಬ್ಬರು ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ಎಸ್ಐಟಿಗೆ ವಹಿಸಲಾಗಿದ್ದು, ಹತ್ಯೆಯ ಪ್ರಮುಖ ಆರೋಪಿಗಳನ್ನು ಬಂಧಿಸಿರುವುದಾಗಿ ಎಸ್ಐಟಿ ಹೇಳಿಕೊಂಡಿತ್ತು.
ಆದರೆ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೂ ಚಿಂತಕ ಕಲ್ಬುರ್ಗಿ ಪ್ರಕರಣಕ್ಕೂ ನೇರ ಸಂಬಂಧ ಇದೆಯೇ ಎಂಬುದನ್ನು ಈವರೆಗೂ ಎಸ್ಐಟಿ ಸ್ಪಷ್ಟಪಡಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚಿಂತಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಹೈಕೋರ್ಟ್ ಎದುರು ಚಾರ್ಜ್ ಶೀಟ್ ಸಲ್ಲಿಸಿದೆ.
ಆದರೆ ಚಾರ್ಜ್ ಶೀಟ್ನ ವಿವರಗಳನ್ನು ಸರ್ಕಾರ ಈ ವರೆಗೆ ಬಹಿರಂಗಪಡಿಸಿಲ್ಲ ಈ ಹಿನ್ನೆಲೆಯಲ್ಲಿ ಸರ್ಕಾರದ ವರದಿ ಕುರಿತು ಸುಪ್ರೀಂಕೋರ್ಟ್ ಅಸಮಾಧಾನಗೊಂಡಿದ್ದು, ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದೆ.












Click it and Unblock the Notifications