10 ಕೋಟಿ ದಂಡ ಪಾವತಿಸಿ, ಬಿಡುಗಡೆಯ ಹೊಸ್ತಿಲಲ್ಲಿ ಶಶಿಕಲಾ
ಬೆಂಗಳೂರು, ನ. 18: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಇಂದು 10 ಕೋಟಿ ರು ಭಾರಿ ದಂಡವನ್ನು ಕೋರ್ಟಿನಲ್ಲಿ ಕಟ್ಟಿದ್ದಾರೆ. ಈ ಮೂಲಕ ಜೈಲಿನಿಂದ ಬಿಡುಗಡೆಗೊಳ್ಳುವ ಹೊಸ್ತಿಲಲ್ಲಿ ನಿಂತಿದ್ದಾರೆ. ಒಂದು ವೇಳೆ ಈ ಭಾರಿ ಮೊತ್ತದ ದಂಡ ಪಾವತಿಸದಿದ್ದರೆ, ಇನ್ನೊಂದು ವರ್ಷ ಜೈಲಿನಲ್ಲಿ ಕಾಲ ಕಳೆಯಬೇಕಾಗಿತ್ತು.
ಈ ಪ್ರಕರಣದಲ್ಲಿ ಶಶಿಕಲಾಗೆ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದ್ದು, 10 ಕೊಟಿ ರೂ ದಂಡವನ್ನು ಆಕೆ ನ್ಯಾಯಾಲಯಕ್ಕೆ ಕಟ್ಟಬೇಕಿತ್ತು. ಒಂದೊಮ್ಮೆ ದಂಡ ಕಟ್ಟಲು ಸಾಧ್ಯವಾಗದಿದ್ದಲ್ಲಿ ಒಂದು ವರ್ಷಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಿತ್ತು.
ಶಶಿಕಲಾಗೆ ಮತ್ತೆ ಆಘಾತ, 2000 ಕೋಟಿ ರು ಮೌಲ್ಯದ ಆಸ್ತಿ ಜಪ್ತಿ
ಶಶಿಕಲಾ ಅವರು 1997 ಹಾಗೂ 2014ರಲ್ಲಿ 35 ದಿನಗಳು, 2017ರಲ್ಲಿ 17 ದಿನಗಳ ಪೆರೋಲ್ ಪಡೆದುಕೊಂಡಿದ್ದರು. ಫೆಬ್ರವರಿ 15, 2017ರಲ್ಲಿ ಬಂದ ಕೋರ್ಟ್ ಆದೇಶದಂತೆ ಶಶಿಕಲಾ ಹಾಗೂ ಇತರರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ಸೇರಿದ್ದರು. ಶಶಿಕಲಾ ಅವರು ತಮ್ಮ ಪತಿ ಎಂ.ನಟರಾಜನ್ ನಿಧನರಾದಾಗ ಪೆರೋಲ್ ಮೇಲೆ 15 ದಿನಗಳ ಕಾಲ ಜೈಲಿನಿಂದ ಹೊರಗಿದ್ದರು. ತಂಜಾವೂರಿನಲ್ಲಿ ಪತಿಯ ಅಂತ್ಯಸಂಸ್ಕಾರ ವಿಧಿ ಮುಗಿಸಿಕೊಂಡು ಜೈಲಿಗೆ ಮರಳಿದ್ದರು.
ಡಿಮ್ಯಾಂಡ್ ಡ್ರಾಫ್ಟ್ ಮೂಲಕ ದಂಡ ಪಾವತಿಸಿದ ಶಶಿಕಲಾ
ಜಯಲಲಿತಾಗೆ 100 ಕೋಟಿ ರೂ., ಶಶಿಕಲಾ, ಇಳವರಸಿ, ಸುಧಾಕರನ್ಗೆ ತಲಾ 10 ಕೋಟಿ ರೂ. ದಂಡ ವಿಧಿಸಿದ್ದರು. ಒಂದೊಮ್ಮೆ ದಂಡ ಕಟ್ಟಲು ಸಾಧ್ಯವಾಗದಿದ್ದಲ್ಲಿ ಇನ್ನೂ ಒಂದು ವರ್ಷಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತ್ತು. ಅದರಂತೆ, ಬುಧವಾರ(ನ.18) 34ನೇ ಸಿಟಿ ಸಿವಿಎಲ್ ನ್ಯಾಯಾಲಯಕ್ಕೆ 10,00,10,000 ರುಗಳನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಲಾಗಿದೆ, ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಸಲ್ಲಿಸಲಾಗಿದೆ ಎಂದು ಶಶಿಕಲಾ ಪರ ವಕೀಲ ಎನ್ ರಾಜ ಸೆಂತೂರ್ ಪಾಂಡಿಯನ್ ತಿಳಿಸಿದ್ದಾರೆ.
ಜನವರಿ 27, 2020ರಂದು ಬಿಡುಗಡೆ ಸಾಧ್ಯತೆ
ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. 2014ರ ಸೆಪ್ಟೆಂಬರ್ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಈಗ ದಂಡ ಪಾವತಿಸಿರುವುದರಿಂದ ನಿಗದಿಯಂತೆ ಜನವರಿ 27, 2021ರಂದು ಬಿಡುಗಡೆಯಾಗಬಹುದು. ದಂಡ ಪಾವತಿಸಿದ ಬಗ್ಗೆ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪತ್ರ ತಲುಪಿದ ಬಳಿಕ ಬಿಡುಗಡೆ ಕುರಿತ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕೃತವಾಗಿ ಮಾಹಿತಿ ಬಂದಿದೆ.
ಕರುಣಾನಿಧಿ ಪುತ್ರರ ಕಾಳಗ, ಅಳಗಿರಿಯಿಂದ ಹೊಸ ಪಕ್ಷ ಉದಯ?
ಶಶಿಕಲಾ ಕುಟುಂಬಸ್ಥರ ಕತೆಯೇನು?
ಶಶಿಕಲಾ ಪರ ವಕೀಲ ಎನ್ ರಾಜ ಸೆಂತೂರ್ ಪಾಂಡಿಯನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಶಶಿಕಲಾ, ವಿಎನ್ ಸುಧಾಕರನ್, ಜೆ ಇಳವರಸಿ ಅವರಿಗೂ 10ಕೋಟಿ ಪ್ಲಸ್ 10 ಸಾವಿರ ರು ದಂಡ ವಿಧಿಸಲಾಗಿದ್ದು, ಅವರು ಕೂಡಾ ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹರಾಗುತ್ತದೆ. ಅವರು ದಂಡ ವಿಧಿಸಲು ಸಿದ್ಧವಾಗಿದ್ದು, ಈಗಾಗಲೆ ನ್ಯಾಯಾಲಯಕ್ಕೆ ತಿಳಿಸಲಾಗಿದ್ದು, ಆದಾಯ ತೆರಿಗೆ ಇಲಾಖೆಯಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಪಡೆದು, ಡಿಮ್ಯಾಂಡ್ ಡ್ರಾಫ್ಟ್ ಮೂಲಕ ದಂಡ ಪಾವತಿಸಲಾಗುತ್ತದೆ ಎಂದರು.
ತಮಿಳುನಾಡಿನ ಮುಖ್ಯಮಂತ್ರಿ ಪ್ರತಿಕ್ರಿಯೆ
ತಮಿಳುನಾಡಿನ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಶಶಿಕಲಾ ನಟರಾಜನ್ ಅವರ ಬಿಡುಗಡೆ ಬಗ್ಗೆ ಬಂದಿರುವ ಸುದ್ದಿಗೆ ಪ್ರತಿಕ್ರಿಯಿಸಿ, ಶಶಿಕಲಾ ಅವರು ಬಿಡುಗಡೆಯಾದ ಮಾತ್ರಕ್ಕೆ ಅವರ ಬಗ್ಗೆ ಎಐಎಡಿಎಂಕೆ ನಿಲುವು ಬದಲಾಗುವುದಿಲ್ಲ. ಶಶಿಕಲಾ ಹಾಗೂ ಅವರ ಕುಟುಂಬಸ್ಥರನ್ನು ಪಕ್ಷ ಹಾಗೂ ಸರ್ಕಾರದಿಂದ ದೂರ ಇರಿಸಲು ಎಂದೋ ನಿರ್ಧರಿಸಿ ಆಗಿದೆ. ಈ ಬಗ್ಗೆ ಮತ್ತೆ ಚರ್ಚೆಗೆ ಆಸ್ಪದವಿಲ್ಲ. ಈ ಬಗ್ಗೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಕೊಯಮತ್ತೂರಿನಲ್ಲಿ ಇಂದು ಪ್ರತಿಕ್ರಿಯಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಅಧಿಕೃತ ಸಿಎಂ ಅಭ್ಯರ್ಥಿಯಾಗಿ ಪಳನಿಸ್ವಾಮಿ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.