ಸಂತೋಷ್ ಲಾಡ್ ವಿರುದ್ಧ ಸಿಎಂಗೆ ದೊರೆಸ್ವಾಮಿ ಪತ್ರ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವಾಗಲೇ ಸಂಪುಟದಲ್ಲಿ ಕಳಂಕಿತರಿಗೆ ಸಚಿವ ಸ್ಥಾನ ನೀಡಬೇಡಿ ಎಂದು ಎಚ್.ಎಸ್.ದೊರೆಸ್ವಾಮಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದರು. ಸದ್ಯ ಸಂತೋಷ್ ಲಾಡ್ ಮೇಲೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಪತ್ರ ಬರೆದಿದ್ದಾರೆ.
ಮೂಲ ಸೌಕರ್ಯ ಮತ್ತು ವಾರ್ತ ಸಚಿವ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರು ಅಪರಾಧಿ ಸ್ಥಾನದಲ್ಲಿರುವುದರಿಂದ ಸಂಪುಟದಲ್ಲಿ ಅವರನ್ನು ಮುಂದುವರೆಸಬೇಕೆ? ಎಂದು ದೊರೆಸ್ವಾಮಿ ಪ್ರಶ್ನಿಸಿದ್ದಾರೆ.
ಲಾಡ್ ಒಡೆತನದ ವಿ.ಎಸ್. ಲಾಡ್ ಅಂಡ್ ಸನ್ಸ್ ಕಂಪನಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದರಿಂದಲೇ ಅವರ ಕಂಪನಿ ಲೈಸೆನ್ಸ್ ನವೀಕರಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂದು ಭಾವಿಸುತ್ತೇನೆ.
ಅವರ ಮೇಲಿನ ಅಪಾದನೆಗಳಿಂದ ಮುಕ್ತವಾಗುವ ತನಕ ಸಂಪುಟದಿಂದ ದೂರವಿಡುವುದು ಒಳಿತು ಎಂದು ದೊರೆಸ್ವಾಮಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಪ್ರಾರಂಭಾಗಿದೆ.
ಈಗಾಗಲೇ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ಪ್ರತಿಪಕ್ಷ ಬಿಜೆಪಿ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸುತ್ತಿವೆ. ಈ ಕುರಿತು ಬಿಜೆಪಿ ಬೆಂಗಳೂರಿನಲ್ಲಿ ಸೆ.30ರ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಈಗಾಗಲೇ ರಾಜ್ಯಪಾಲರಿಗೆ ದೂರು ನೀಡಿ ಮನವಿ ಮಾಡಿದೆ. ಸಂತೋಷ್ ಲಾಡ್ ರಾಜೀನಾಮೆಗೆ ಎಲ್ಲರೂ ಪಟ್ಟು ಹಿಡಿದಿದ್ದರೂ, ಸಿದ್ದರಾಮಯ್ಯ ಅವರ ವಿರುದ್ಧ ದಾಖಲೆಗಳು ಇಲ್ಲ ಎಂದು ಹೇಳುತ್ತಿದ್ದಾರೆ. (ಸಂತೋಷ್ ಲಾಡ್ ವಿರುದ್ಧ ಅಖಾಡಕ್ಕಿಳಿದ ಬಿಜೆಪಿ)
ಸದ್ಯ ಸಂತೋಷ್ ಲಾಡ್ ವಿರುದ್ಧದ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಧುಮುಕಿರುವುದು ಸಿಎಂಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಲಾಡ್ ರನ್ನು ಸಂಪುಟದಿಂದ ಕೈ ಬಿಡುವುದಿಲ್ಲ ಎಂದಿದ್ದ ಮುಖ್ಯಮಂತ್ರಿಗಳ ಮುಂದಿನ ನಿಲುವು ಇನ್ನೂ ನಿಗೂಢ. (ಸಂತೋಷ್ ಲಾಡ್ ರಾಜೀನಾಮೆಗೆ ಹಿರೇಮಠ್ ಆಗ್ರಹ)












Click it and Unblock the Notifications