ಸಂಪರ್ಕ್ ಫಾರ್ ಸಮರ್ಥನ್ : ಕೇಂದ್ರ ಯೋಜನೆ ಶ್ಲಾಘಿಸಿದ ಸುಧಾಮೂರ್ತಿ
ಬೆಂಗಳೂರು, ಜುಲೈ 19 : ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಇನ್ಫೋಸಿಸ್ ಫೌಂಡೇಷನ್ನ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಭೇಟಿಯಾದರು. ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಅಂಗವಾಗಿ ಬಿಜೆಪಿ ನಾಯಕರು ವಿವಿಧ ಗಣ್ಯರನ್ನು ಭೇಟಿ ಮಾಡುತ್ತಿದ್ದಾರೆ.
ಗುರುವಾರ ಬೆಂಗಳೂರಿನ ನಿವಾಸದಲ್ಲಿ ಸುಧಾಮೂರ್ತಿ ಅವರನ್ನು ಶ್ರೀನಿವಾಸ ಪೂಜಾರಿ ಭೇಟಿ ಮಾಡಿದರು. ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಬುಕ್ಲೆಟ್ ನೀಡಿ, ಅಭಿಯಾನದ ಕುರಿತು ಮಾಹಿತಿ ನೀಡಿದರು.

ಬುಕ್ ಲೆಟ್ ಓದಿದ ಬಳಿಕ ಸುಧಾಮೂರ್ತಿ ಅವರು, 'ಕೋಟ್ಯಾಂತರ ಬಡ ಹೆಣ್ಣು ಮಕ್ಕಳ ಕುಟುಂಬಗಳಿಗೆ ಅಡುಗೆ ಅನಿಲ ಕೊಟ್ಟಿರುವ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು' ಎಂದು ಶ್ರೀನಿವಾಸ ಪೂಜಾರಿ ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.

ಯೋಗ ದಿನಾಚರಣೆ, ದೇಶದ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಉಡಾನ್ ಯೋಜನೆಯಿಂದ ಆದ ಸಂಪರ್ಕ ಕ್ರಾಂತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಕೋಟಾ ಶ್ರೀನಿವಾಸಪೂಜಾರಿ ಹೇಳಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ಬುಧವಾರ ನಟ ಡಾ.ಶಿವರಾಜ್ ಕುಮಾರ್ ಅವರನ್ನು 'ರುಸ್ತುಂ' ಚಿತ್ರೀಕರಣದ ಸಮಯದಲ್ಲಿ ಭೇಟಿಯಾಗಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದರು.
2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಸಂಪರ್ಕ್ ಫಾರ್ ಸಮರ್ಥನ್ ಎಂಬ ಅಭಿಯಾನ ಆರಂಭಿಸಿದೆ. 4000 ಬಿಜೆಪಿ ನಾಯಕರು ಸುಮಾರು 1 ಲಕ್ಷ ಗಣ್ಯರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.












Click it and Unblock the Notifications