ಕೆಂಪೇಗೌಡ ಏರ್ಪೋರ್ಟ್ಗೆ ಬರಲಿದೆ ಅತ್ಯಾಧುನಿಕ ಏರೋಸ್ಪೇಸ್ ಪಾರ್ಕ್
ಬೆಂಗಳೂರು, ಫೆಬ್ರವರಿ 28: ಸರ್ಕಾರದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ( ಐಟಿ ಸೆಕ್ಟರ್) ಹಾಗೂ ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಸಿಲಿಟಿ ಕೇಂದ್ರದ ಭೂಮಿ ಪೂಜೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಅವರು ಇಂದು ನೆರವೇರಿಸಿದರು.
ನಂತರ ಈ ಕುರಿತು ಮಾತನಾಡಿದ ಸಚಿವರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳ ಸುಮಾರು 2990 ಎಕರೆ ಭೂಮಿಯನ್ನು ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಪಡಿಸಿದೆ ಎಂದರು.
ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್ಗೆ ಶಂಕುಸ್ಥಾಪನೆ
ಕಳೆದ ದಶಕದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಏರೋಸ್ಪೇಸ್ ವಿಭಾಗವನ್ನು ಗಮನದಲ್ಲಿಟ್ಟುಕೊಂಡು ಈ ಹೆಜ್ಜೆ ಇಡಲಾಗಿದೆ. ಇದರಿಂದ ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಲಸಿಟಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವಿಶೇಷ ವ್ಯವಸ್ಥೆಯಿಂದ ವಿಮಾನಯಾನದ ನಿರ್ಮಾಣಕ್ಕೆ ಬೇಕಾಗಿರುವ ಲೋಹ, ಎಲೆಕ್ಟ್ರಿಕಲ್ ವಸ್ತುಗಳ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಬಹುದು. ಅಲ್ಲದೆ ಉತ್ಪನ್ನಗಳ ಪರೀಕ್ಷೆ ಸಹ ಮಾಡಬಹುದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರವು 5 ಎಕರೆ ಭೂಮಿಯಲ್ಲಿ ಏರೋಸ್ಪೇಸ್ ಕಾಮನ್ ಫಿನಿಷಿಂಗ್ ಫೆಸಿಲಿಟಿಯನ್ನು ಸ್ಥಾಪಿಸಲಿದೆ ಎಂದರು.
ಇದಕ್ಕೆ ಕ್ಯಾಬಿನೆಟ್ನಿಂದ ಅನುಮೋದನೆ ಸಹ ದೊರೆತ್ತಿದ್ದು, ಇಂದು ಗುದ್ದಲಿಪೂಜೆ ನೆರವೇರಿದ್ದು, ಸದ್ಯದಲ್ಲೇ ಕಾಮಗಾರಿ ನಡೆಯಲಿದೆ. ಒಟ್ಟು 90.50 ಕೋಟಿ ಅನುದಾನದಲ್ಲಿ ಕೇಂದ್ರ ಸರ್ಕಾರ 42.69 ಕೋಟಿ ಹಾಗೂ ರಾಜ್ಯ ಸರ್ಕಾರ 47.81 ಕೋಟಿ ರೂ ಅನುದಾನ ನೀಡಿದೆ. ಇದರಿಂದ ಸಣ್ಣ, ಮಧ್ಯಮ ಹಾಗೂ ಭಾರಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಂತಾಗುವುದು. ಈ ಯೋಜನೆ ಜಾರಿಗೆ ತಜ್ಞರ ಸಮಿತಿಯನ್ನು ಸಹ ರಚಿಸಲಾಗಿದ್ದು, ಆಗಿಂದ್ದಾಗ್ಗೆ ಪರಿಶೀಲನೆ ನಡೆಸಲಾಗುತ್ತವೆ. ಬಂಡವಾಳ ಹೂಡಿಕೆದಾರರಿಗೆ ಇಲ್ಲಿ ಒಳ್ಳೆಯ ಅವಕಾಶವಿದ್ದು, ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಕಾನೂನುಬದ್ಧ, ಪಾರದರ್ಶಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ ಇಲ್ಲಿನ 2990 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗುತ್ತಿರುವುದು ಕರ್ನಾಟಕದ ಮೈಲುಗಲ್ಲು. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳಿಗೆ ಒಳ್ಳೆಯ ಬೇಡಿಕೆಯಿದ್ದು, ಇದು ಏಳ್ಗೆಯ ಸಂಕೇತವೂ ಹೌದು. ಈಗಾಗಲೇ 2ನೇ ಹಂತ ಮೆಟ್ರೋ ಗೊಟ್ಟಿಗೆರೆಯಿಂದ ಹೆಗಡೆ ನಗರದವರೆಗೆ ಅನುಮೋದನೆಗೊಂಡಿದೆ. 3ನೇ ಹಂತದ ಮೆಟ್ರೋ ಹೆಗಡೆನಗರದಿಂದ ಏರೋಸ್ಪೇಸ್ ಪಾರ್ಕ್ವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇನ್ನೂ ಅಂತಿಮಗೊಂಡಿಲ್ಲ. ಅದು ಪ್ರಗತಿಯಾದರೆ ಈ ಪ್ರದೇಶಗಳು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಐ.ಎ.ಡಿ.ಬಿ.ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಜಯರಾಮ್, ಮುಖ್ಯ ಇಂಜಿನೀಯರ್ ಟಿ.ಆರ್. ಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.
ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ : ದೇಶಪಾಂಡೆ
ವಿದ್ಯುತ್ಚಾಲಿತ ವಾಹನಗಳಿಗೆ ಸಿಎಂ, ಸಚಿವ ದೇಶಪಾಂಡೆ ಚಾಲನೆ