ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರೂ.150 ಕೋಟಿ ಹಗರಣ: ಯಡಿಯೂರಪ್ಪ
ಬೆಂಗಳೂರು, ಮಾರ್ಚ್ 22: ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ನೀರಾವರಿ ಇಲಾಖೆಯ ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ 15೦ ಕೋಟಿ ರೂಪಾಯಿ ಬೃಹತ್ ಹಗರಣ ನಡೆದಿದೆ, ಹಗರಣದಲ್ಲಿ ಜಲಸಂಪನ್ಮೂಲ ಸಚಿವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದರು.
ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಹಗರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು 'ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಕರೆಯಲಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ '2.9 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ನಾಲೆ'ಯ ನಿರ್ಮಾಣ ಕಾಮಗಾರಿಗೆ ಕರೆಯಲಾದ ಟೆಂಡರ್ನಲ್ಲಿ ಈ ಅಕ್ರಮ ನಡೆದಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಸಚಿವರು 25 ಕೋಟಿ ರೂಪಾಯಿ 'ಕಿಕ್ ಬ್ಯಾಕ್' ಪಡೆದಿದ್ದಾರೆ ಎಂದು ಆರೋಪಿಸಿದರು.
ಟೆಂಡರ್ ಪಡೆದುಕೊಂಡಿರುವ ಎಂ/ಎಸ್ ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಸಂಸ್ಥೆಯು ಟೆಂಡರ್ ಪ್ರಕ್ರಿಯೆಗೆ ನಕಲಿ 'ವರ್ಕ್ ಡನ್' (ಈ ಹಿಂದೆ ಕಾಮಗಾರಿ ಮಾಡಿರುವುದಕ್ಕೆ ದಾಖಲೆ) ಪ್ರಮಾಣಪತ್ರ ಸಲ್ಲಿಸಿದ್ದರೂ ಸಹ ಸಚಿವ ಎಂ.ಬಿ.ಪಾಟೀಲ್ ಅಣತಿಯಂತೆ ವಿಶ್ವೇಶ್ವರಯ್ಯ ಜಲ ನಿಗಮದ ಹೊಸದುರ್ಗ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಚೆಲುವರಾಜು ಮತ್ತು ಕೃಷ್ಣಮೂರ್ತಿ ಅವರುಗಳು ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ಪತ್ರವನ್ನು ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಟೆಂಡರ್ಗೆ ಅರ್ಜಿ
ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಸಂಸ್ಥೆಯು ತಾನು ಮಣಿಪುರ ರಾಜ್ಯ ಸರ್ಕಾರದ 'ನೀರಾವರಿ ಮತ್ತು ಪ್ರವಾಹ ನಿಯಂತ್ರಣ' ಇಲಾಖೆಯಲ್ಲಿ 124.59 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಾಗಿ ಮಣಿಪುರದ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ನೀಡಿರುವ ಪ್ರಮಾಣ ಪತ್ರವನ್ನು ಟೆಂಡರ್ ಅರ್ಜಿಗೆ ಲಗತ್ತಿಸಿತ್ತು. ಆದರೆ ಈ ಪ್ರಮಾಣಪತ್ರ ನಕಲಿ ಎಂದು ಯಡಿಯೂರಪ್ಪ ಆರೋಪ ಮಾಡಿದರು.

ಮಣಿಪುರ ಸರ್ಕಾರದಿಂದ ಸ್ಪಷ್ಟನೆ
ಸಂಬಂಧಪಟ್ಟ ದಾಖಲೆಗಳನ್ನೂ ಬಿಡುಗಡೆ ಮಾಡಿದ ಅವರು ಈ ಕುರಿತು ಮಣಿಪುರ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಕೋರಿದಾಗ ಆ ರೀತಿಯ ಯಾವುದೇ ಪ್ರಮಾಣಪತ್ರವನ್ನು ಮಣಿಪುರ ಸರ್ಕಾರದ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ನೀಡಿಲ್ಲ, ಅಲ್ಲದೆ ತ್ರಿಪುರ ಸರ್ಕಾರದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಎಂಬ ಹುದ್ದೆಯೇ ಇಲ್ಲವೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು. ಮಣಿಪುರ ಸರ್ಕಾರ ನೀಡಿರುವ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಿದರು.

ಎರಡೂ ಸಂಸ್ಥೆಯ ಪ್ರಮಾಣಪತ್ರಕ್ಕೆ ಒಂದೇ ಸಹಿ!
ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಮತ್ತು ಅಮ್ಮಾ ಕನ್ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಎರಡೇ ಸಂಸ್ಥೆಗಳು ಪಾಲ್ಗೊಂಡಿದ್ದು ವಿಶೇಷವೆಂದರೆ ಎರಡೂ ಕಂಪೆನಿಗಳು ನೀಡಿರುವ ವರ್ಕ್ ಡನ್ ಪ್ರಮಾಣ ಪತ್ರಕ್ಕೆ ಸಹಿ ಹಾಕಿರುವುದು ಒಬ್ಬನೇ ಅಧಿಕಾರಿ!. ಅಮ್ಮಾ ಕನ್ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತಾನು ತ್ರಿಪುರ ರಾಜ್ಯದ ಹಿಂದೂಸ್ಥಾನ್ ಸ್ಟೀಲ್ ವರ್ಕ್ಸ್ ಕನ್ಸ್ಟಕ್ಷನ್ ಸಂಸ್ಥೆಯಲ್ಲಿ 24.58 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಳಿಸಿದ್ದೇನೆ ಎಂದು ವರ್ಕ್ ಡನ್ ಪ್ರಮಾಣ ಪತ್ರ ನೀಡಿತ್ತು. ಆದರೆ ಅದೂ ಕೂಡ ಸುಳ್ಳು ಪ್ರಮಾಣ ಪತ್ರ ಎಂದು ತ್ರಿಪುರಾ ಸರ್ಕಾರ ಪತ್ರ ಬರೆದಿದೆ ಎಂದು ಬಿಎಸ್ವೈ ಹೇಳಿದರು.

ಎಸಿಬಿ ಮತ್ತು ಲೋಕಾಯುಕ್ತಕ್ಕೆ ದೂರು
ತಮಗೆ ಬೇಕಾದ ಅಧಿಕಾರಿಗಳನ್ನು ಬೇಕಾದ ಸ್ಥಾನಕ್ಕೆ ನಿಯೋಜಿಸಿಕೊಂಡಿರುವ ಎಂ.ಬಿ.ಪಾಟೀಲ್ ಅವರ ಅಣತಿಯಂತೆಯೇ ಸುಳ್ಳು ಪ್ರಮಾಣ ಪತ್ರ ನೀಡಿದ್ದರೂ ಸಹಿತ ಟೆಂಡರ್ ಅನ್ನು ನೀಡಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿಗಳಿಗೆ ಕೂಡಾ ಪಾಲು ಹೋಗಿದೆ. ಟೆಂಡರ್ ನೀಡಿದ ಕಾರ್ಯಪಾಲಕ ಅಭಿಯಂತರರಾದ ಚೆಲುವರಾಜು ಮತ್ತು ಕೃಷ್ಣಮೂರ್ತಿ ಹಾಗೂ ಎಂ.ಬಿ.ಪಾಟೀಲ್ ಅವರ ಮೇಲೆ ಎಸಿಬಿ ಮತ್ತು ಲೋಕಾಯುಕ್ತಕ್ಕೆ ಈಗಾಗಲೇ ದೂರು ನೀಡಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications