ನಾನು ಕುಗ್ಗುವುದಿಲ್ಲ: ಎಫ್ಐಆರ್ಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 15: 'ಎಫ್ಐಆರ್ ಮೂಲಕ ನನ್ನ ಧ್ವನಿಯನ್ನಾಗಲೀ ಅಥವಾ ಕಾಂಗ್ರೆಸ್ ಪಕ್ಷದ ಧ್ವನಿಯನ್ನಾಗಲೀ ಅಡಗಿಸಬಹುದು ಎಂದು ನೀವು ಭಾವಿಸಿದ್ದರೆ ಅದು ಸುಳ್ಳಾಗುತ್ತದೆ' ಎಂದು ತಮ್ಮ ವಿರುದ್ಧ ಹಾಗೂ ಕಾಂಗ್ರೆಸ್ನ ಹಲವು ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಿರುವುದಕ್ಕೆ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅವರು, 'ನಾನು ರಾಜಕೀಯಕ್ಕೆ ಬಂದಿರುವುದು ರಾಜಕಾರಣ ಮಾಡಲಿಕ್ಕೆ, ಸಮಾಜಮುಖಿಯಾಗಿ ಜನರ ಸೇವೆ ಮಾಡಲೆಂದು. ನನ್ನಂತಹ ಅಸಹಾಯಕ ಹೆಣ್ಣುಮಗಳು ಸಮಾಜಮುಖಿ ಕೆಲಸ ಮಾಡಲು ರಾಜಕೀಯ ಪ್ರವೇಶ ಮಾಡಿದ ಕೂಡಲೇ ನನ್ನನ್ನು ಟಾರ್ಗೆಟ್ ಮಾಡಿ ಎಫ್ಐಆರ್ ದಾಖಲು ಮಾಡುತ್ತೀರಿ' ಎಂದು ಕಿಡಿಕಾರಿದ್ದಾರೆ.
'ನನಗಿಂತ ಮೊದಲೇ ಬಂದು ನೀತಿ ಸಂಹಿತೆ ಉಲ್ಲಂಘಿಸಿದರೂ ಅವರಾರೂ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲ. ಅದೆಲ್ಲ ಬಿಟ್ಟು ಹೆಣ್ಣುಮಗಳು ಸಿಕ್ಕಳು, ಆಕೆಯ ಮೇಲೆ ಎಫ್ಐಆರ್ ಹಾಕೋಣ, ಆಕೆ ಮಾನಸಿಕವಾಗಿ ಕುಗ್ಗಿ ಹೋಗಿತ್ತಾಳೆ. ಬಗ್ಗುತ್ತಾಳೆ ಆಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಎಫ್ಐಆರ್ ಹಾಕಿದ್ದೀರಿ' ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರು ಉತ್ತರ ನೀಡುತ್ತಾರೆ
ನಿರ್ಜನ ಪ್ರದೇಶದಲ್ಲಿ ಹೆಣ್ಣುಮಗಳ ಮೇಲೆ ದೌರ್ಜನ್ಯ ನಡೆದಾಗ ಎಲ್ಲರೂ ರೊಚ್ಚಿಗೇಳುತ್ತಾರೆ. ಆದರೆ ಆರ್ಆರ್ ನಗರದ ಬಿಬಿಎಂಪಿ ಆವರಣದಲ್ಲಿ ನಿನ್ನೆ ನಡೆದಿದ್ದು ಅತಿ ದೊಡ್ಡ ಶೋಷಣೆ ಎನಿಸುತ್ತದೆ. ನಾನು ನಂಬುವುದು ನಮ್ಮ ಪಕ್ಷದ ಸಿದ್ಧಾಂತವನ್ನು ನನ್ನ ಜನಗಳನ್ನು. ಅವರು ಖಂಡಿತಾ ಕೈಬಿಡುವುದಿಲ್ಲ, ಇದಕ್ಕೆ ಉತ್ತರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪ್ರಾಯೋಜಿತ ಪೊಲೀಸರು
'ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದೇನೆಂದು ನನ್ನ ಮೇಲೆ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಇನ್ನುಳಿದ ಪಕ್ಷಗಳ ಮುಖಂಡರ ನೀತಿ ಸಂಹಿತೆ ಉಲ್ಲಂಘನೆ ಈ ಸರ್ಕಾರಿ ಪ್ರಾಯೋಜಿತ ಪೊಲೀಸರ ಕಣ್ಣಿಗೆ ಕಾಣಿಸದೇ ಹೋಗಿದ್ದು ವಿಪರ್ಯಾಸ. ಇದು ಆಡಳಿತವನ್ನು ಮೆಚ್ಚಿಸುವ ಕೌಶಲ್ಯ. ಇರಲಿ, ಶೋಷಣೆಗಳು ನನಗೆ ಹೊಸತಲ್ಲ.
ಇದೀಗ ನೀವುಗಳು ಕೂಡ ಹೀಗೆಲ್ಲಾ... ಕೇಸು ಹಾಕುವ ಮೂಲಕ ಶೋಷಣೆ ಮಾಡಿದ್ದೀರಿ, ಥ್ಯಾಂಕ್ಸ್!
ಇದಕ್ಕೆಲ್ಲಾ ಉತ್ತರ ನಾನು ಪ್ರೀತಿಸುವ ನನ್ನ ಕ್ಷೇತ್ರದ ಜನರು ಕೊಡಲಿದ್ದಾರೆ' ಎಂದು ಅವರು ಬರೆದುಕೊಂಡಿದ್ದಾರೆ.

ಎಂಟು ಮಂದಿ ವಿರುದ್ಧ ಎಫ್ಐಆರ್
ಅ. 14ರಂದು ಆರ್ ಆರ್ ನಗರ ವಿಧಾನ ಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ, ಅವರ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರು ಚಾಲಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಆರ್ ಆರ್ ನಗರ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಒಟ್ಟು 8 ಜನರ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ದಾಖಲಿಸಲಾಗಿದೆ.
Recommended Video

ಆಯೋಗಕ್ಕೆ ದೂರು
'ನಿಜವಾಗಿಯೂ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಬಿಜೆಪಿ ನಾಯಕರು. ಆದರೆ ಪ್ರಕರಣ ಹಾಕಿರುವುದು ನಮ್ಮ ಮೇಲೆ. ಈ ಬಗ್ಗೆ ನಾವು ಆಯೋಗಕ್ಕೆ ದೂರು ಕೊಡುತ್ತೇವೆ. ಈ ರೀತಿ ನಮ್ಮ ಮೇಲೆ ದೂರು ದಾಖಲಿಸಿ ನಮ್ಮನ್ನ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications