ಪೊಲೀಸರ ದಾಳಿಯಿಂದ ಬೆಂಗಳೂರು ರೌಡಿ ಚಟುವಟಿಕೆ ನಿಗ್ರಹ ಆಗುತ್ತಾ?
ಬೆಂಗಳೂರು, ಜು. 23: "ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಚಟುವಟಿಕೆ ನಿಗ್ರಹ ಹಾಕದಿದ್ದರೆ ಬೆಂಗಳೂರು ಪಾತಕ ಲೋಕದಲ್ಲಿ ಮುಂದೆ ನಡೆಯುವ ರೌಡಿ ಗ್ಯಾಂಗ್ ವಾರ್ಗಳಿಗೆ ಕಡಿವಾಣ ಹಾಕಲಿಕ್ಕೆ ಸಾಧ್ಯವಿಲ್ಲ. ಬೆಂಗಳೂರು ದಾದಾಗಿರಿ ಅಗ್ರಗಣ್ಯ ಪಟ್ಟಕ್ಕಾಗಿ ನಡೆಯಲಿರುವ ಹತ್ಯೆಗಳನ್ನು ತಡೆಯಲಿಕ್ಕೂ ಸಾಧ್ಯವಾಗಲ್ಲ. ಬೆಂಗಳೂರು ರೌಡಿಗಳ ಮನೆಗಳ ಮೇಲೆ ಪೊಲೀಸರು ನೂರು ಸಲ ದಾಳಿ ಮಾಡಿದರೂ ಏನೂ ಆಗಲ್ಲ. ಸಿಸಿಬಿ ಪೊಲೀಸರ ದಾಳಿಯ ಬಗ್ಗೆ ಬೆಂಗಳೂರು ಪಾತಕ ಲೋಕದಲ್ಲಿ ಕೇಳಿ ಬರುತ್ತಿರುವ ಮಾತುಗಳು. ಕೊರೊನಾ ಲಾಕ್ ಡೌನ್ ಮುಗಿದ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಗ್ಯಾಂಗ್ ವಾರ್ ತಡೆಯಲು ಪೊಲೀಸರು ನಡೆಸುತ್ತಿರುವ ದಾಳಿಗಳು ಎಷ್ಟರ ಮಟ್ಟಿಗೆ ಫಲ ಕೊಡುತ್ತಿವೆ ಎನ್ನುವ ಪ್ರಶ್ನೆ ಎದ್ದಿದೆ.
ಮೂವರ ಹತ್ಯೆಯ ಮಾತುಗಳು
ರಾಜಧಾನಿ ಬೆಂಗಳೂರಿನ ಡಾನ್ ಗಿರಿ ಇತಿಹಾಸ ಕೆಣಕಿದರೆ ಯಾವತ್ತಿಗೂ ಜಾತಿ ಆಧಾರಿತ ರೌಡಿಗಳು ಒಂದಾಗಿದ್ದೇ ಅಪರೂಪ. ಈ ಸಲ ಒಂದು ಸಮುದಾಯದ ರೌಡಿಗಳನ್ನು ಒಗ್ಗೂಡಿಸುವ ಮೂಲಕ ಬೆಂಗಳೂರಿನ ಡಾನ್ ಪಟ್ಟಕ್ಕಾಗಿ ವಿಲ್ಸನ್ ಗಾರ್ಡನ್ ನಾಗ ನಾನಾ ಸಾಹಸ ಮಾಡುತ್ತಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾಂತಿನಗರ ಲಿಂಗನನ್ನು ಮುಗಿಸಿದ್ದು ಕೂಡ ಇದೇ ಕಾರಣಕ್ಕಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ನಾಗನ ಬಲಗೈ ಬಂಟ ಮಹೇಶ್ ಕೂಡ ಇತ್ತೀಚೆಗೆ ನಾಗನ ಸಹಚರರ ಸಂಚಿಗೆ ಜೀವ ಬಿಟ್ಟ. ಲಿಂಗನ ಹತ್ಯೆಯ ನಂತರ ಬೆಂಗಳೂರಿನ ಅಗ್ರಗಣ್ಯ ರೌಡಿ ಎನಿಸಿಕೊಂಡವರಲ್ಲಿ ವಿಲ್ಸನ್ ಗಾರ್ಡನ್ ನಾಗ ಭೀತಿ ಹುಟ್ಟಿಸಿದ್ದಾನೆ. ಬೆಂಗಳೂರು ಪಾತಕ ಲೋಕದಲ್ಲಿ ಅಗ್ರಗಣ್ಯವಾಗಿ ಕೇಳಿ ಬರುತ್ತಿರುವ ಒಂಟೆ ರೋಹಿತ್, ಸೈಲೆಂಟ್ ಸುನೀಲ್ , ಮಾರ್ಕೆಟ್ ವೇಡಿ ವಿರುದ್ಧ ನಾಗ ಜೈಲಿನಲ್ಲಿದ್ದುಕೊಂಡೇ ಸಂಚು ರೂಫಿಸಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದೆ.

ಬೆಂಗಳೂರು ಪಟ್ಟಕ್ಕಾಗಿ ನಾಗನ ಸ್ಕೆಚ್
ಸದ್ಯ ಬೆಂಗಳೂರು ಪಾತಕ ಲೋಕದಲ್ಲಿ ದೊಡ್ಡ ಹೆಸರು ಮಾಡುತ್ತಿರುವುದೇ ವಿಲ್ಸನ್ ಗಾರ್ಡನ್ ನಾಗ. ಆತ ಹೇಳಿದಂತೆ ಜೈಲಿನ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಜೈಲಿನಲ್ಲಿದ್ದುಕೊಂಡೇ ಬಾಂಬೆ ಅಂಡರ್ ವರ್ಲ್ಡ ವರೆಗೂ ಸಂಪರ್ಕ ಸಾಧಿಸಿದ್ದಾನೆ. ಇದೀಗ ಬೆಂಗಳೂರಿನಲ್ಲಿ ಚಿಕ್ಕ ಪುಟ್ಟ ರೌಡಿಗಳನ್ನು ಹಿಂಬಾಲಕರನ್ನಾಗಿ ಮಾಡಿಕೊಂಡು ದೊಡ್ಡ ಪಡೆಯನ್ನೇ ಕಟ್ಟಿದ್ದಾನೆ. ಬೆಂಗಳೂರು ಪಾತಕ ಲೋಕದಲ್ಲಿ ನಂಬರ್ ಒನ್ ಪಟ್ಟದಲ್ಲಿ ಕೂರಲೇ ಬೇಕೆಂದು ಪಣ ತೊಟ್ಟಿದ್ದು, ಬೆಂಗಳೂರು ಜೈಲಿನಿಂದಲೇ ಎಲ್ಲವನ್ನೂ ನಿರ್ವಹಿಸುತ್ತಿದ್ದಾನೆ ಎಂಬ ಮಾತು ಕೇಳಿ ಬರುತ್ತಿದೆ. ಇದೆಲ್ಲವನ್ನೂ ನೋಡಿದ್ರೆ ನಿಜವಾಗಿಯೂ ಬೆಂಗಳೂರು ಪೊಲೀಸರು ರೌಡಿ ಚಟುವಟಿಕೆ ನಿಗ್ರಹಿಸುವಲ್ಲಿ ವಿಫಲರಾಗುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ಎರಡು ಸಾವಿರ ರೌಡಿಗಳ ದಾಳಿ ಸುತ್ತ
ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ರೌಡಿ ಹತ್ಯೆಗಳು ಬೆಂಗಳೂರು ಪೊಲೀಸರನ್ನು ನಿದ್ದೆ ಗೆಡಿಸಿದೆ. ಹೀಗಾಗಿ ರೌಡಿ ಚಟುವಟಿಕೆ ನಿಗ್ರಹ ಮಾಡುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲಪಂತ್ ಅವರು ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚೆ ನಡೆಸಿದ್ದರು. ಮೊದಲ ಹಂತದಲ್ಲಿ ಬೆಂಗಳೂರಿನ ನಾಲ್ಕು ವಿಭಾಗದಲ್ಲಿ ಸುಮಾರು ಎರಡು ಸಾವಿರ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ್ದರು. ಮಾರಕಾಸ್ತ್ರ ವಶಪಡಿಸಿಕೊಂಡರು. ರೌಡಿ ಚಟುವಟಿಕೆಯಲ್ಲಿ ತೊಡಗಿದ್ದವರ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ದಾಳಿ ಮಾಡಿದ್ರೂ ರೌಡಿಗಳ ಚಟುವಟಿಕೆ ನಿಗ್ರಹವಾಗಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಮತ್ತೆ ರೌಡಿಗಳ ಮನೆಗಳ ಮೇಲೆ ದಾಳಿ ಆರಂಭಿಸಿದ್ದಾರೆ. ವಿಶೇಷ ಎಂದ್ರೆ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ್, ಜೆ.ಬಿ. ನಾರಾಯಣ, ಸೈಕಲ್ ರವಿ ಎಂಬ ರೌಡಿಗಳ ಮನೆಗಳ ಮೇಲೆ ದಾಳಿ ಆಗಿದೆ. ಆದರೆ ಈ ದಾಳಿಯಿಂದ ನಿಜವಾಗಿಯೂ ಬೆಂಗಳೂರು ರೌಡಿ ಚಟುವಟಿಕೆ ನಿಗ್ರಹವಾಗುತ್ತಾ ಅನ್ನೋದು ಕಾದು ನೋಡಬೇಕು.

Recommended Video
ಬೆಂಗಳೂರು ಎನ್ ಕೌಂಟರ್ ಗಳು ಇತಿಹಾಸ
ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಶಂಕರ್ ಬಿದರಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಈ ಹಿಂದೆ ಇದೇ ರೀತಿ ರೌಡಿ ಪಾತಕಿಗಳು ಬಾಲ ಬಿಚ್ಚಿದ್ದರು. ಬೆಂಗಳೂರು ಪೊಲೀಸರ ಎನ್ ಕೌಂಟರ್ ಬುಲೆಟ್ಗಳಿಗೆ ರೌಡಿಗಳು ಬೀದಿ ಹೆಣವಾಗುತ್ತಿದ್ದರು. ಶಂಕರ್ ಬಿದರಿಯ ಹವಾಗೆ ರೌಡಿ ಲೋಕವೇ ಮಮ್ಮಲ ಮರಗಿತ್ತು. ಅಂತಹ ದಿಟ್ಟ ನಿರ್ಧಾರ ಪೊಲೀಸರು ಮತ್ತೆ ತೆಗೆದುಕೊಳ್ಳುವ ದೈರ್ಯ ಪೊಲೀಸರೇ ತೋರುತ್ತಿಲ್ಲ. ಪೊಲೀಸ್ ಹುದ್ದೆಗಳು ಬಿಕರಿಯಾಗವ ವರೆಗೂ ಪಾತಕ ಲೋಕದ ನಿಗ್ರಹ ಎಂಬುದು ಹುಸಿಯಾಗಿಯೇ ಉಳಿಯಬಹುದು ಎಂದೆನಿಸುತ್ತದೆ. ಪುಡಿ ರೌಡಿಗಳ ಮೊಣಕಾಲುಗಳಿಗೆ ಪೊಲೀಸರ ಗುಂಡು ಬೀಳುವುದರಿಂದ ಎಷ್ಟರ ಮಟ್ಟಿಗೆ ಪಾತಕಿಗಳು ಸೈಲೆಂಟ್ ಆಗ್ತಾರೆ ಅನ್ನೋದನ್ನು ಪೊಲೀಸರೇ ಹೇಳಬೇಕಷ್ಟೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲನ್ನು ಪೊಲೀಸರು ನಿಯಂತ್ರಣಕ್ಕೆ ತೆಗೆದುಕೊಳ್ಳುವವರೆಗೂ ಪೊಲೀಸರ ಪ್ರಯತ್ನಗಳೆಲ್ಲಾ ವಿಫಲವಾಗಬಹುದು ಎಂದೆನಿಸುತ್ತದೆ.











Click it and Unblock the Notifications