ರೌಡಿ ಲಕ್ಷ್ಮಣ ಹತ್ಯೆ ರಹಸ್ಯ ಬಯಲು, ಕೊಲೆ ಹಿಂದೆ ಸುಂದರಿ ಕೈವಾಡ!
ಬೆಂಗಳೂರು, ಮಾರ್ಚ್ 12 : ಬೆಂಗಳೂರು ನಗರದ ಶ್ರೀಮಂತ ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣದ ಹಿಂದಿನ ರಹಸ್ಯವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಲಕ್ಷ್ಮಣ ಕೊಲೆ ಹಿಂದೆ ಹೆಣ್ಣಿನ ಪಾತ್ರ ಇರುವುದು ಖಚಿತವಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪೇಶ್, ಕ್ಯಾಟ್ ರಾಜ, ವರ್ಷಿಣಿ ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 7ರಂದು ಲಕ್ಷ್ಮಣನಿಗೆ ವಾಟ್ಸಪ್ ಕರೆ ಮಾಡಿದ್ದ ವರ್ಷಿಣಿ ಹೋಟೆಲ್ಗೆ ಬರುವಂತೆ ಹೇಳಿದ್ದಳು. ಹೋಟೆಲ್ಗೆ ಹೋಗುವಾಗ ಆತನನ್ನು ಹತ್ಯೆ ಮಾಡಲಾಗಿದೆ.
ಮದ್ದೂರು ಮೂಲದ ಜೆಡಿಎಸ್ ನಾಯಕರ ಮಗಳಾದ ವರ್ಷಿಣಿ ಲಕ್ಷ್ಮಣನ ಮನೆಯ ಪಕ್ಕದಲ್ಲೇ ವಾಸವಾಗಿದ್ದಳು. ಲಕ್ಷ್ಮಣ ಮತ್ತು ಆಕೆಯ ನಡುವೆ ಸಂಬಂಧವಿತ್ತು. ಬಂಧಿತ ರೂಪೇಶ್ ಮತ್ತು ವರ್ಷಿಣಿ ನಡುವಿನ ಪ್ರೀತಿಗಾಗಿ ಲಕ್ಷ್ಮಣ ಹತ್ಯೆ ನಡೆದಿದೆ.

ಘಟನೆಯ ವಿವರ : ವರ್ಷಿಣಿ ಮತ್ತು ರೂಪೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ರೂಪೇಶ್ ರೌಡಿ ಎಂಬ ಕಾರಣಕ್ಕೆ ವರ್ಷಿಣಿ ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ವರ್ಷಿಣಿ ತಂದೆ ರೂಪೇಶ್ಗೆ ವಾರ್ನ್ ಮಾಡುವಂತೆ ಲಕ್ಷ್ಮಣನ ಬಳಿ ಹೇಳಿದ್ದರು.
ಎರಡು ಮೂರು ಬಾರಿ ಲಕ್ಷ್ಮಣ ವರ್ಷಿಣಿ ಸಹವಾಸಕ್ಕೆ ಬರದಂತೆ ರೂಪೇಶ್ಗೆ ಬೆದರಿಕೆ ಹಾಕಿದ್ದ. ಈ ಘಟನೆ ಬಳಿಕ ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ಸಲುಗೆ ಹೆಚ್ಚಾಗಿತ್ತು. ಇಬ್ಬರು ನಡುವೆ ಸಂಬಂಧವಿತ್ತು. ಲಕ್ಷ್ಮಣ ಕೊಟ್ಟ ಹಣವನ್ನು ವರ್ಷಿಣಿ ರೂಪೇಶ್ಗೆ ನೀಡಿದ್ದಳು.
ತಮ್ಮ ಪ್ರೀತಿಗೆ ಅಡ್ಡವಾದ ಲಕ್ಷ್ಮಣನನ್ನು ಹತ್ಯೆ ಮಾಡಲು ಕ್ಯಾಟ್ ರವಿ ಜೊತೆ ಸೇರಿ ರೂಪೇಶ್ ಸಂಚು ರೂಪಿಸಿದ್ದ. ಅದಕ್ಕಾಗಿ ವರ್ಷಿಣಿ ಸಹಾಯ ಪಡೆದಿದ್ದ. ಮಾರ್ಚ್ 7ರಂದು ವರ್ಷಿಣಿ ಲಕ್ಷ್ಮಣನಿಗೆ ಕರೆ ಮಾಡಿ ಹೋಟೆಲ್ಗೆ ಬರುವಂತೆ ತಿಳಿಸಿದ್ದಳು.
ಮನೆಯಿಂದ ಲಕ್ಷ್ಮಣ ಹೋಟೆಲ್ಗೆ ಹೋಗುವಾಗ ಸ್ಕಾರ್ಪಿಯೋ ವಾಹನದಲ್ಲಿ ಅವನ ಇನ್ನೋವಾ ಕಾರನ್ನು ಅಡ್ಡಗಟ್ಟಿದ ರೂಪೇಶ್, ಕ್ಯಾಟ್ ರಾಜ ಮತ್ತು ಇತರ ಆರೋಪಿಗಳು ಆತನ ಮೇಲೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ನನ್ನ ಮಗಳ ಪಾತ್ರವಿಲ್ಲ : ವರ್ಷಿಣಿ ಅವರ ತಾಯಿ ಪದ್ಮಾ ಹರೀಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, 'ಕೊಲೆಯಲ್ಲಿ ನನ್ನ ಮಗಳ ಪಾತ್ರವಿಲ್ಲ. ರಾಜಕೀಯ ದ್ವೇಷದಿಂದ ಅವಳ ಹೆಸರು ಸೇರಿಸಲಾಗಿದೆ. ಬದುಕಿದ್ದಾಗಲೂ ಲಕ್ಷ್ಮಣ ನಮ್ಮ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದ. ಸತ್ತ ಮೇಲೂ ತೊಂದರೆ ಕೊಡುತ್ತಿದ್ದಾನೆ' ಎಂದು ಹೇಳಿದರು.












Click it and Unblock the Notifications