ಯುವ ಪೀಳಿಗೆ ಒಳಿತಿಗಾಗಿ ಸಂಶೋಧನೆಗಳು ನಡೆಯಲಿ: ಸಿಎಂ ಬೊಮ್ಮಾಯಿ
ಬೆಂಗಳೂರು, ಸೆಪ್ಟಂಬರ್ 26: ಭಾರತಕ್ಕೆ ಬಾಹ್ಯಾಕಾಶದಲ್ಲಿ ಯಶಸ್ವಿಯಾಗಲು ಸಾಕಷ್ಟು ಅವಕಾಶಗಳಿವೆ. ಅದರ ಜೊತೆಗೆ ಯುವ ಪೀಳಿಗೆಯು ಆರೋಗ್ಯಕರ ಜೀವನ ನಡೆಸುವಂತಹ ಸಂಶೋಧನೆಗಳು ನಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಬೆಂಗಳೂರಿನ ಎಚ್ಎಎಲ್ ಏರೋಸ್ಪೇಸ್ ವಿಭಾಗದಲ್ಲಿ ನಡೆದ 'ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ಐಎಮ್ಎಫ್) ಹಾಗೂ ಏರೋಸ್ಪೇಸ್ ವಿಭಾಗ' ವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.
ರಾಜ್ಯದಲ್ಲಿ ಏರೋಸ್ಪೇಸ್, ಆರ್ ಅಂಡ್ ಡಿ ಮತ್ತು ರಕ್ಷಣಾ ನೀತಿಗಳು ಜಾರಿಯಲ್ಲಿವೆ. ಸರ್ಕಾರದ ವತಿಯಿಂದ ಈ ಎಲ್ಲಾ ಸಂಶೋಧನೆ ಗಳಿಗೆ ಅಗತ್ಯ ಸಹಕಾರವನ್ನು ನೀಡಲಾಗುತ್ತಿದೆ. ಕರ್ನಾಟಕ ಹೊಸ ವಿಜ್ಞಾನ, ಆವಿಷ್ಕಾರ ಹಾಗೂ ಹೊಸ ಪಥದತ್ತ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ಸರ್ಕಾರ 'ನವ ಭಾರತಕ್ಕಾಗಿ ನವ ಕರ್ನಾಟಕ' ಎಂಬ ಘೋಷವಾಕ್ಯ ಹೊಂದಿದೆ ಎಂದು ಅವರು ವಿವರಿಸಿದರು.

ಬಾಹ್ಯಾಕಾಶ ನಮ್ಮ ಕಲ್ಪನೆಗಳಿಗೆ ಸ್ಫೂರ್ತಿ
ವಿಜ್ಞಾನ ನಿರಂತರವಾಗಿ ವಿಸ್ತರಣೆಯಾಗುವ ಗುಣ ಹೊಂದಿದೆ. ಅದಕ್ಕೆ ವಿರಾಮ, ಅಂತ್ಯ ಎಂಬುದಿಲ್ಲ. ಒಂದು ಆವಿಷ್ಕಾರ ಹಲವಾರು ಸಂಶೋಧನೆಗಳಿಗೆ ಎಡೆ ಮಾಡಿಕೊಡುತ್ತದೆ. ಮನುಕುಲದ ಒಳಿತಿಗಾಗಿ ಸಂಶೋಧನೆ ಗಳಾಗಬೇಕು. ಬಾಹ್ಯಾಕಾಶ ನಮ್ಮ ಕಲ್ಪನೆಗಳಿಗೆ ಸ್ಫೂರ್ತಿಯೇ ಆಗಿದೆ. ಹಾಗಾಗಿ ಮನುಷ್ಯನಿಗೆ ಅಂತರಿಕ್ಷದ ಬಗ್ಗೆ ಮೊದಲಿನಿಂದಲೂ ಆಕರ್ಷಣೆ ಹೊಂದಿದ್ದಾನೆ ಎಂದರು.

ವಿಜ್ಞಾನ ಕ್ಷೇತ್ರದಲ್ಲಿ ಭಾರತ ಯಾರಿಗೂ ಕಡಿಮೆ ಇಲ್ಲ
ಭಾರತ ಅನಾದಿ ಕಾಲದಿಂದಲೂ ಬಾಹ್ಯಾಕಾಶದ ಅನ್ವೇಷಣೆಯಲ್ಲಿ ತೊಡಗಿದೆ. ಖಗೋಳಶಾಸ್ತ್ರಜ್ಞ ಮತ್ತು ಗಣಿತಜ್ಞ ಆರ್ಯಭಟ ಈ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದರು. ಇಂದಿನ ಅನ್ವೇಷಣೆಗಳಿಗೆ ಅವರ ಸಂಶೋಧನೆಗಳು ಸ್ಫೂರ್ತಿಯಾಗಿದೆ. ಇಂದು ವಿಜ್ಞಾನ ಕ್ಷೇತ್ರದಲ್ಲಿ ಭಾರತ ಬೇರೆ ಯಾವ ದೇಶಕ್ಕೂ ಕಡಿಮೆ ಇಲ್ಲ ಎಂಬಂತೆ ಬೆಳೆದು ನಿಂತಿದೆ. ಇದಕ್ಕೆ ಕಾರಣವಾದ ಅಂತರಿಕ್ಷ ಸಂಶೋಧನೆಗಳಲ್ಲಿ ತೊಡಗಿರುವ ಎಲ್ಲಾ ವಿಜ್ಞಾನಿಗಳು ಹಾಗೂ ಇಂಜಿನಿಯರ್ಗಳಿಗೆ ಅವರು ಅಭಿನಂದನೆ ತಿಳಿಸಿದರು.

ಬೆಂಗಳೂರು ಬಾಹ್ಯಾಕಾಶ ತಂತ್ರಜ್ಞಾನದ ಹಬ್
ಭಾರತ ನೂರಾರು ಉಪಗ್ರಹಗಳನ್ನು ಬ್ಯಾಹ್ಯಾಕಾಶಕ್ಕೆ ಹಾರಿಸಿದೆ. ಈಗ ನಾವು ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ಘಟ್ಟಕ್ಕೆ ಬಂದಿದ್ದೇವೆ. ಕಳೆದ 4-5 ದಶಕಗಳಿಂದ ಕ್ರಯೋಜೆನಿಕ್ ಇಂಜಿನ್ ಪ್ರಪಂಚದಲ್ಲಿ ಚರ್ಚೆಯಾಗುತ್ತಿದ್ದು, ಅದರ ಅಭಿವೃದ್ಧಿ ಕೆಲವೇ ದೇಶಗಳಲ್ಲಿ ಸಾಧ್ವಯವಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಕೆಲವೇ ದೇಶಗಳಲ್ಲಿದ್ದುದರಿಂದ ಅದರ ಅಭಿವೃದ್ಧಿಯೂ 4-5 ದೇಶಗಳಿಗೆ ಸೀಮಿತವಾಗಿಯೇ ಇತ್ತು. ಕ್ರಯೋಜೆನಿಕ್ ಇಂಜಿನ್ಗೆ ಬಳಸುವ ಸಾಮಾಗ್ರಿಗಳ ಬಗ್ಗೆ ಮುಖ್ಯವಾಗಿ ಚರ್ಚೆಯಾಗುತ್ತಿತ್ತು. ನಂತರದಲ್ಲಿ ಇಂಧನವನ್ನು ಹಾಕುವ ಸಾಧನವನ್ನು ಕಂಡುಹಿಡಿಯಲಾಯಿತು. ಈ ವಿಷಯದಲ್ಲಿ ಇಸ್ರೋ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕ್ರಯೋಜೆನಿಕ್ ಇಂಜಿನ್ ಅಭಿವೃದ್ಧಿಯಲ್ಲಿ ಭಾರತ
ನಮ್ಮ ಉಪಗ್ರಹ ಗಳಿಗೆ ಅಗತ್ಯವಿರುವ ಕ್ರಯೋಜೆನಿಕ್ ಇಂಜಿನ್ ಅನ್ನು ಮೂರು ದಶಕಗಳ ಹಿಂದೆ ಆಮದು ಮಾಡಿಕೊಳ್ಳಬೇಕಿತ್ತು. ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ಭಾರತ್ ಘೋಷಣೆ ಯಂತೆ ನಾವು ಈಗ ದೊಡ್ಡ ಮಟ್ಟದಲ್ಲಿ ನಿಂತಿದ್ದೇವೆ. ಕ್ರಯೋಜೆನಿಕ್ ಇಂಜಿನ್ ತಯಾರು ಮಾಡುವ ದೇಶಗಳಲ್ಲಿ ಭಾರತವೂ ಸೇರಿದೆ ಎಂಬುದು ಹೆಮ್ಮೆಯ ವಿಚಾರ. ಇಸ್ರೋ ಮತ್ತು ಎಚ್ಎಎಲ್ಎರಡರ ಸಂಯೋಜನೆಯಿಂದ ಬೆಂಗಳೂರನ್ನು ದೇಶದ ಬಾಹ್ಯಾಕಾಶದ ನಗರ ಎಂದು ಪರಿಗಣಿಸಲಾಗಿದೆ. ಶೇ.65 ರಷ್ಟು ಏರೋಸ್ಪೇಸ್ ಭಾಗಗಳನ್ನು ಬೆಂಗಳೂರಿನಿಂದ ರಪ್ತು ಮಾಡಲಾಗುತ್ತಿದೆ. ಶೇ 60 ರಷ್ಟು ರಕ್ಷಣಾ ಸಾಮಾಗ್ರಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಶೇ 25 ರಷ್ಟಿ ಏರೋಸ್ಪೇಸ್ ಭಾಗಗಳು ಬೆಂಗಳೂರಿನಲ್ಲಿ ಉತ್ಪಾದನೆ ಯಾಗುತ್ತಿದೆ. ಅಲ್ಲದೇ ಹೈಬ್ರಿಡ್ ಕ್ರಯೋಜೆನಿಕ್ ಇಂಜಿನ್ ನ್ನು ಇಸ್ರೋ ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿಸಿದರು.
ಆರೋಗ್ಯ ವಿಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅತಿ ಹೆಚ್ಚಿನ ಸಂಶೋಧನಾ ಕೇಂದ್ರಗಳು, ವೈದ್ಯಕೀಯ ಸಂಸ್ಥೆಗಳು, ನಿಮ್ಹಾನ್ಸ್, ಕಿದ್ವಾಯಿ, ರಾಷ್ಟ್ರಮಟ್ಟದ ಮಕ್ಕಳ ಆಸ್ಪತ್ರೆಗಳು, ಆರ್ ಅಂಡ್ ಡಿ ಕೇಂದ್ರಗಳು, ಅಂಗಾಂಗ ಕಸಿ ಕೇಂದ್ರಗಳು ಇಲ್ಲಿವೆ. ಒಂದು ವರ್ಷ ದೊಳಗೆ 200 ಪ್ರಯೋಗಾಲಯಗಳನ್ನು ಆರ್ಟಿಪಿಸಿ ಆರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್, ಎಚ್ಎಎಲ್ ಅಧ್ಯಕ್ಷ ಅನಂತಕೃಷ್ಣ, ಇಸ್ರೋ ಅಧ್ಯಕ್ಷ ಸೋಮನಾಥ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications