ಯುವಕನ ಬೆತ್ತಲೆಗೊಳಿಸಿ ಅಟ್ಟಾಡಿಸಿದ ಗ್ಯಾಂಗ್: ರೇಣುಕಾಸ್ವಾಮಿ ಕೇಸ್ ತರ ಎಂದು ವಿಡಿಯೋ ರೆಕಾರ್ಡ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂದು ರೇಣುಕಾಸ್ವಾಮಿಯನ್ನ ನಟ ದರ್ಶನ್ ತೂಗುದೀಪ ಹಾಗೂ ಅವರ ಗ್ಯಾಂಗ್ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿತ್ತು ಎನ್ನುವ ಆರೋಪ ಇದೆ. ಥೇಟ್ ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಗುಂಪೊಂದು ಯುವಕನನ್ನು ಕಿಡ್ನ್ಯಾಪ್ ಮಾಡಿ ಆತನ ಬಟ್ಟೆ ಬಿಚ್ಚಿಸಿ ಮಾರಣಾಂತಿಕ ಹ*ಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಡಿಯೋ ಮಾಡಿಕೊಂಡಿರುವ ಕಿರಾತಕರು ಇದು ರೇಣುಕಾಸ್ವಾಮಿ ಕೇಸ್ ತರ ಎಂದು ಅಟ್ಟಹಾಸ ಮೆರೆದಿದ್ದಾರೆ.
ಪವಿತ್ರಾ ಗೌಡ ಅವರ ವಿಚಾರವಾಗಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹಾನಿ ಮಾಡಿ ಭೀಕರವಾಗಿ ಅಟ್ಯಾಕ್ ಮಾಡಲಾಗಿತ್ತು ಎಂಬ ಆರೋಪ ದರ್ಶನ್ ಮತ್ತವರ ಗ್ಯಾಂಗ್ ಮೇಲೆ ಇದೆ. ಈ ಕೇಸ್ ವಿಚಾರಣೆ ಇನ್ನೂ ನಡೆಯುತ್ತಿರುವಾಗಲೇ ಇಂತದ್ದೇ ಮತ್ತೊಂದು ಘಟನೆ ನಡೆದಿದೆ. ಹುಡುಗಿ ವಿಚಾರಕ್ಕೆ ಕಿರಿಕ್ ಆಗಿದ್ದು, ಗ್ಯಾಂಗ್ವೊಂದು ಯುವಕನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?
ಕುಶಾಲ್ ಎಂಬ ಯುವಕನಿಗೆ ಕಾಲೇಜಿನಲ್ಲಿ ಯುವತಿ ಮೇಲೆ ಲವ್ ಆಗಿತ್ತು. ಎರಡು ವರ್ಷಗಳ ಕಾಲ ಇಬ್ಬರೂ ಪ್ರೀತಿಸಿದ್ದರು. ಕೆಲ ತಿಂಗಳ ಹಿಂದಷ್ಟೇ ಇವರ ಪ್ರೀತಿ ಮುರಿದುಬಿದ್ದಿತ್ತು. ಇದೇ ಸಮಯದಲ್ಲಿ ಆ ಯುವತಿಗೆ ಬೇರೆ ಹುಡುಗನೊಂದಿಗೆ ಪರಿಚಯವಾಗಿತ್ತು. ಇದರಿಂದ ಕೋಪಗೊಂಡಿದ್ದ ಕುಶಾಲ್ ಆ ಯುವತಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎನ್ನಲಾಗಿದೆ. ಈ ವಿಚಾರ ಗೊತ್ತಾಗಿ ಯುವತಿಯ ಹೊಸ ಗೆಳೆಯ ಹಾಗೂ ಆತನ ಸ್ನೇಹಿತರು ಕುಶಾಲ್ಗೆ ಸ್ಕೆಚ್ ಹಾಕಿದ್ದರು. ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಕುಶಾಲ್ನನ್ನ ಬಾಗಲಗುಂಟೆಯ ಲೇಔಟ್ವೊಂದಕ್ಕೆ ಕರೆಸಿಕೊಂಡಿದ್ದರು.
ಕುಶಾಲ್ ಅಲ್ಲಿಗೆ ಬಂದ ನಂತರ ಆತನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಕುಶಾಲ್ನನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯುವಕನ ಬಟ್ಟೆ ಬಿಚ್ಚಿಸಿ ವಿಕೃತಿ ಮೆರೆದಿರುವ ಕಿರಾತಕರು ಆತನ ಖಾಸಗಿ ಭಾಗವನ್ನು ತುಳಿದು ಹಿಂಸೆ ನೀಡಿದ್ದಾರೆ. ಇನ್ನು ಕುಶಾಲ್ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡುತ್ತಿರುವುದನ್ನು ಈ ಕಿರಾತಕರು ಫೋನ್ನಲ್ಲಿ ವಿಡಿಯೋ ಕೂಡ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಕುಶಾಲ್ ಬೇಡ, ಬೇಡ, ನನ್ನ ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಾನೆ. ವಿಡಿಯೋ ಮಾಡುತ್ತಿರುವ ಪುಂಡನೊಬ್ಬ, ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರವನ್ನು ಪ್ರಸ್ತಾಪ ಮಾಡಿದ್ದಾನೆ. ಇದು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್ನಂತೆ ಆಗುತ್ತೆ. ಎ1 ಆರೋಪಿ ಹೇಮಂತ, ಎ2 ನಾನು ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಅಲ್ಲದೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿಯೂ ಕುಶಾಲ್ಗೆ ಬೆದರಿಕೆ ಕೂಡ ಹಾಕಿದ್ದಾರೆ. ಈ ವಿಚಾರ ತಿಳಿದು ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೇಮಂತ್, ಯಶವಂತ್, ಶಿವಶಂಕರ್, ಶಶಾಂಕ್ ಗೌಡ ಬಂಧಿತರು ಎಂದು ತಿಳಿದುಬಂದಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ.












Click it and Unblock the Notifications