ರೇಖಾ ಕದಿರೇಶ್ ಹತ್ಯೆಗೆ ನಾಲ್ಕು ತಿಂಗಳ ಹಿಂದೆಯೇ ಸಂಚು ರೂಪುಗೊಂಡಿತ್ತು !
ಬೆಂಗಳೂರು, ಜೂ. 30: ಛಲವಾದಿಪಾಳ್ಯ ವಾರ್ಡ್ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆಗೆ ನಾಲ್ಕು ತಿಂಗಳ ಮೊದಲೇ ಸಂಚು ರೂಪುಗೊಂಡಿತ್ತು. ರೇಖಾ ಕಥೆ ಮುಗಿಸಿದರೆ, ಛಲವಾದಿಪಾಳ್ಯ ಆಳ್ವಿಕೆ ಪಟ್ಟ ನಮ್ಮ ಕೈಗೆ ಸಿಗುತ್ತದೆ ಎಂದು ಕದಿರೇಶ್ ನ ಅಕ್ಕ ಮಾಲಾ ನಿರ್ಧರಿಸಿದ್ದಳು. ಅದರಂತೆ ಕೊಲೆಗೆ ಸಂಚು ರೂಪಿಸಿ ಹತ್ಯೆ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇನ್ನೂ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಈವರಗೂ ಏಳು ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ ಕದಿರೇಶ್ ಹತ್ಯೆಯಾದ ಮೂರು ವರ್ಷದ ಬಳಿಕ ರೇಖಾ ಅವರನ್ನು ಛಲವಾದಿ ಪಾಳ್ಯದ ಕಚೇರಿಯಲ್ಲಿ ರೇಖಾ ಕದಿರೇಶ್ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯಾದ ಮರು ದಿನವೇ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದರು. ಇಬ್ಬರ ವಿಚಾರಣೆ ಬಳಿಕ ರೇಖಾ ಹತ್ಯೆಗೆ ಸಂಬಂಧಿ ಮಾಲಾ ಮತ್ತು ಪುತ್ರ ಅರುಳ್ ಸಂಚು ರೂಪಿಸಿರುವ ಸಂಗತಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಲಾ ಮತ್ತು ಅರುಳ್ ನನ್ನು ವಿಚಾರಣೆ ನಡೆಸಿದ ಪೊಲೀಸರು ಬಂಧಿಸಿದ್ದರು. ರೇಖಾ ಹತ್ಯೆ ಕುರಿತು ತನಿಖೆ ನಡೆಸಿದಾಗ ನಾಲ್ಕು ತಿಂಗಳ ಹಿಂದೆಯೇ ಸಂಚು ರೂಪಗೊಂಡಿತ್ತು ಎಂಬ ಸಂಗತಿ ಹೊರ ಬಿದ್ದಿದೆ.
ಕದಿರೇಶ್ ಹತ್ಯೆಯ ಬಳಿಕ ಮಾಲಾ ಮತ್ತು ಅವರ ಮಗನನ್ನು ರೇಖಾ ದೂರ ಇಟ್ಟಿದ್ದರು. ಮುಂದಿನ ಬಿಬಿಎಂಪಿ ಚುಣಾವಣೆಗೆ ಟಿಕೆಟ್ ಕೇಳಿಕೊಂಡು ಪ್ರಾಭಾವಿ ನಾಯಕರ ಮನೆ ಬಾಗಿಲು ಎಡತಾಕಿದ್ದ ಮಾಲಾ ನಿರಾಸೆ ಉತ್ತರದಿಂದ ವಾಪಸಾಗಿದ್ದರು. ರೇಖಾ ಇರುವವರೆಗೂ ನಮ್ಮ ಕೈಗೆ ಅಧಿಕಾರ ಸಿಗಲ್ಲ ಎಂಬುದು ಅರಿವಾಗಿತ್ತು. ಹೀಗಾಗಿ ಛಲವಾದಿಪಾಳ್ಯ ಬಿಬಿಎಂಪಿ ಸದಸ್ಯ ಸ್ಥಾನಕ್ಕೇರುವ ದುರುದ್ದೇಶದಿಂದ ರೇಖಾ ಕದಿರೇಶ್ ಹತ್ಯೆಗೆ ಸಂಚು ರೂಪಿಸಿದ್ದಾಳೆ. ಇದಕ್ಕಾಗಿ ಆಕೆಗೆ ಆಪ್ತರಾಗಿದ್ದ ಪೀಟರ್ಮತ್ತು ಸೂರ್ಯನನ್ನು ಬಳಸಿಕೊಂಡಿದ್ದಾಳೆ. ಮಾಲಾ ಮಾತು ಕೇಳಿ ನಾಲ್ಕು ತಿಂಗಳ ಹಿಂದೆಯೇ ಕೊಲೆಗೆ ಸಂಚು ರೂಪಿಸಿದ್ದಾರೆ.

ಮಾಲಾ ಮಾತಿನಿಂದ ಪ್ರೇರೇಪಿತರಾದ ಸೂರ್ಯ ಮತ್ತು ಪೀಟರ್ ರೇಖಾ ಹತ್ಯೆಗೆ ಹಂಚು ಹಾಕಿ ಕಾಯುತ್ತಿದ್ದರು. ಜೂ. 24 ರಂದು ಕಚೇರಿ ಸಮೀಪ ಬಂದ ರೇಖಾ ಮುಂದೆ ಹೋಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ರೇಖಾಳನ್ನು ರಕ್ಷಣೆ ಮಾಡಲು ಹೋದ ಸಾರ್ವಜನಿಕರನ್ನು ಹೆದರಿಸಿ ಕಳುಹಿಸಿದ್ದರು. ಈ ಹಿಂದೆ ಜೋಪಡಿ ರಾಜೇಂದ್ರನನ್ನು ಕದಿರೇಶ್ ಮತ್ತು ಪೀಟರ್ ಹತ್ಯೆ ಮಾಡಿದ್ದರು. ಕದಿರೇಶ್ ಜತೆಗೆ ಪೀಟರ್ ಕೂಡ ಜೈಲಿಗೆ ಹೋಗಿದ್ದ.
ಕದಿರೇಶ್ ಹತ್ಯೆ ಬಳಿಕ ಪೀಟರ್ ನನ್ನು ರೇಖಾ ಅವರು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಪೀಟರ್ ಹತ್ಯೆಗೆ ಪ್ರಯತ್ನಿಸಿದ್ದ. ಮಾಲಾ ಮತ್ತು ಅರುಳ್ ಜತೆ ಕೈ ಜೋಡಿಸಿ ಕೊಲೆ ಮಾಡಲು ತೀರ್ಮಾನಿಸಿದ್ದ. ಇನ್ನು ಪೀಟರ್ ಗೆ ಪರಮಾಪ್ತ ಸೂರ್ಯ. ಸೂರ್ಯ ಕೂಡ ಪೀಟರ್ ಗೆ ಸಾಥ್ ನೀಡಿದ್ದ. ಅದರಂತೆ ಅಜಯ್ , ಪುರುಷೋತ್ತಮ್ ಮತ್ತು ಸ್ಟೀಪನ್ ಇವರ ಜತೆ ಕೈ ಜೋಡಿಸಿದ್ದರು. ಕೃತ್ಯದ ವೇಳೆ ಯಾರೂ ಅಡ್ಡಿ ಪಡಿಸದಂತೆ ಮೂವರು ಆರೋಪಿಗಳು ನೆರವಾಗಿದ್ದರು. ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿ ಪುರುಷೋತ್ತಮ್ ಸಹಕಾರ ನೀಡಿದ್ದ.

Recommended Video
ಪ್ರಮುಖ ಆರೋಪಿಗಳು ರೇಖಾ ಅವರನ್ನು ಕೊಲ್ಲುವ ವೇಳೆ ಸ್ಟೀಪನ್ ಮತ್ತು ಅಜಯ್ ಸಹಕರಿಸಿದ್ದರು. ನಾಲ್ಕು ತಿಂಗಳ ಹಿಂದೆ ರೂಪಗೊಂಡ ಸಂಚಿನಂತೆ ರೇಖಾ ರನ್ನು ಕೊಲೆ ಮಾಡಿದ್ದಾರೆ. ಇನ್ನು ಆರೋಪಿಗಳ ಕುಟುಂಬ ಜವಾಬ್ದಾರಿಯನ್ನು ಮಾಲಾ ಮತ್ತು ಅರುಳ್ ವಹಿಸಿಕೊಂಡಿದ್ದರು. ಹೀಗಾಗಿ ಸಂಚಿನಂತೆ ರೇಖಾ ಅವರನ್ನು ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.












Click it and Unblock the Notifications