ಪುನಶ್ಚೇತನಗೊಂಡಿರುವ ಕೆಂಪಾಂಬುಧಿ ಕೆರೆ ಇಂದು ಉದ್ಘಾಟನೆ
ಬೆಂಗಳೂರು, ಮಾರ್ಚ್ 14: ಕೆಂಪೇಗೌಡ ನಗರದಲ್ಲಿರುವ ಕೆಂಪಾಂಬುಧಿ ಕೆರೆಗೆ ಮರು ಜೀವ ಬಂದಿದೆ. ಬಿಬಿಎಂಪಿಯು 5.50 ಕೋಟಿ ರೂ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿದೆ.
ಕೆಂಪಾಂಬುಧಿ ಕೆರೆಯ 47.11 ಎಕರೆ ವಿಸ್ತೀರ್ಣ ಹೊಂದಿದೆ. ಸದ್ಯ ಪುನಶ್ಚೇತನಗೊಂಡಿರುವ ಕೆರೆಯನ್ನು ಸಚಿವ ಕೆ.ಜೆ. ಜಾರ್ಜ್ ಅವರು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕೆರೆ ಹಬ್ಬ ಆಚರಿಸಲಾಗುತ್ತದೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು 16ನೇ ಶತಮಾನದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ್ದ ಕೆರೆಯ ಕೊಳಚೆ ನೀರು, ಕಸದಿಂದ ದುರ್ನಾತ ಬೀರುತ್ತಿತ್ತು. ಪಾಲಿಕೆ ಕೆರೆಯನ್ನು ಪುನಶ್ಚೇತನಗೊಳಿಸಿತ್ತು, ನಾನಾ ಪಕ್ಷಿಗಳ ಆವಾಸ ಸ್ಥಾನವಾಗಿದೆ.ಕೆರೆ ಒಡಲಿಗೆ ಕೊಳಚೆ ನೀರು ಸೇರಿದಂತೆ ತಡೆಯಲಾಗಿದೆ.
ಕೆರೆಯ ಪ್ರವೇಶ ದ್ವಾರ ಮತ್ತು ಬಂಡಿ ಮಹಾಕಾಳಮ್ಮ ಸೇವಾಲಯದ ಬಳಿ ತ್ಯಾಜ್ಯ ನೀರು ಪ್ರತ್ಯೇಕವಾಗಿ ಹರಿದು ಹೋಗಲು ಕಾಲುವೆಗಳನ್ನು ನಿರ್ಮಿಸಲಾಗಿದೆ. ಆ ಮೂಲಕ ಮಳೆ ನೀರು ಮಾತ್ರ ಕೆರೆ ಸೇರುವಂತೆ ಮಾಡಲಾಗಿದೆ.
ಮಿನಿ ಜಲಪಾತ ಆಕರ್ಷಣೆ: ಬಂಡಿ ಮಹಾಕಾಳಮ್ಮ ದೇವಾಲಯದ ಬಳಿ ಜಲಪಾತದ ಮಾದರಿಯಲ್ಲಿ ಏರಿಯೇಷನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಹತ್ತು ಲಕ್ಷ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಶೂದ್ಧೀಕರಿಸಿದ ನೀರನ್ನು ಜಲಪಾತಕ್ಕೆ ಹರಿಸಲಾಗುತ್ತಿದೆ. ನೀರು ಕೆಳಗೆ ಧುಮ್ಮಿಕ್ಕುತ್ತದೆ. ಜಲಧಾರೆಗೆ ನಾನಾ ಬಣ್ಣದ ದೀಪಗಳ ವ್ಯವಸ್ಥೆ ಮಾಡಲಾಗಿದೆ.