Get Updates
Get notified of breaking news, exclusive insights, and must-see stories!

ಅಕ್ರಮವಾಗಿ ಗಿಟ್ಟಿಸಿಕೊಂಡ ಜಿ-ಕೆಟಗರಿ ಸೈಟ್ ವಾಪಸ್

ಬೆಂಗಳೂರು, ಅ. 26 : ಬಿಡಿಎ ಸೈಟು ಯಾರಿಗೆ ಬೇಡ ಹೇಳಿ? ತಮಗೆ ಬರುತ್ತಿರುವ ಸಂಬಳ, ಬ್ಯಾಂಕ್ ಬ್ಯಾಲನ್ಸು ಎಲ್ಲ ನೋಡಿ ಲೆಕ್ಕ ಹಾಕಿ, ಇದು ನಮ್ ಕೈಲಾಗಲ್ಲ ಅಂತ ಪ್ರಾಮಾಣಿಕವಾಗಿ ದುಡಿಯುತ್ತಿರುವವದು ತೆಪ್ಪಗೆ ಕುಳಿತುಕೊಳ್ಳುತ್ತಾರೆ. ಆದರೆ, ಅಧಿಕಾರ ಹೇಗೆ ದುರುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿದವರು ಸುಮ್ಮನೆ ಬಿಡ್ತಾರಾ?

ಬಿಟ್ಟಿಲ್ಲ. ತಮ್ಮ ಬಳಿ ಸೈಟುಗಳಿದ್ದರೂ ಸುಳ್ಳು ಪ್ರಮಾಣಪತ್ರ ನೀಡಿ, ಅಧಿಕಾರ ದುರ್ಬಳಿಸಿಕೊಂಡು ಜಿ-ಕೆಟಗರಿ ಪಡೆದುಕೊಂಡವರು ಈಗ ಗತ್ಯಂತರವಿಲ್ಲದೆ ಕಳೆದುಕೊಳ್ಳಬೇಕಾದ ಅಗತ್ಯ ಬಂದಿದೆ. ಕರ್ನಾಟಕ ಹೈಕೋರ್ಟ್ ನೇಮಿಸಿದ್ದ ನ್ಯಾ. ಬಿ. ಪದ್ಮರಾಜ್ ನೇತೃತ್ವದ ಸಮಿತಿ, ಅಕ್ರಮವಾಗಿ ಪಡೆದುಕೊಂಡಿದ್ದ ಎಲ್ಲ 313 ಜಿ-ಕೆಟಗರಿ ಸೈಟುಗಳನ್ನು ವಾಪಸ್ ಪಡೆಯಬೇಕು ಎಂದು ವರದಿ ಸಲ್ಲಿಸಿದೆ.

ಮಾಜಿ ಮುಖ್ಯಮಂತ್ರಿಗಳಾದ ಕಾಂಗ್ರೆಸ್ ನಾಯಕ ಧರಂಸಿಂಗ್, ಕೆಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಹೆಚ್ಚಿಗೆ ಜಿ-ಕೆಟಗರಿ ಬಿಡಿಎ ನಿವೇಶನಗಳು ಅಕ್ರಮವಾಗಿ ಬಿಕರಿಯಾಗಿವೆ ಎಂದು ನ್ಯಾ. ಬಿ. ಪದ್ಮರಾಜ್ ಸಮಿತಿ ವರದಿ ಸಲ್ಲಿಸಿದೆ. ಈ ಅಕ್ರಮ ಸೈಟುಗಳನ್ನು ವಾಪಸ್ ಪಡೆಯಬೇಕೆಂದು ಎಸ್ ವಾಸುದೇವ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸಿದ್ದರು.

Recommendation for withdrawal of illegal G-category sites

ಈ 313 ಸೈಟುಗಳಲ್ಲಿ 140 ಶಾಸಕರಗೆ, 4 ಸಂಸದರಿಗೆ ಸೇರಿವೆ. ಉಳಿದವುಗಳನ್ನು 12 ಮಹಿಳಾಮಣಿಗಳು ಸೇರಿದಂತೆ ಸ್ಟೆನೋಗ್ರಫರ್, ಟೈಪಿಸ್ಟ್, ಶಿರಸ್ತೇದಾರ್, ಮುಖ್ಯಮಂತ್ರಿಗಳ ಆಪ್ತರು, ಸರಕಾರಿ ವಾಹನ ಚಾಲಕರು, ಪೊಲೀಸ್ ಪೇದೆಗಳು, ಗುಮಾಸ್ತರು, ಡಿ ಗ್ರೂಪ್ ನೌಕರರು ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಸರಕಾರಕ್ಕೆ ವಂಚಿಸಿದ್ದಾರೆ.

ವರದಿಯಲ್ಲಿ ಸ್ವಂತ ಮನೆ, ನಿವೇಶನ ಹೊಂದಿದ್ದರೂ ಹಾಗೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಯಿಂದ ರಿಯಾಯಿತಿ ದರದಲ್ಲಿ ಸೈಟ್ ಪಡೆದಿದ್ದರೂ ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಜಿ-ಕೆಟಗರಿ ನಿವೇಶನ ಪಡೆದಿದ್ದಾರೆ. ನ್ಯಾ. ಪದ್ಮರಾಜ್ ಸಮಿತಿಯಲ್ಲಿ ನ್ಯಾ. ರಂಗವಿಠಲಾಚಾರ್ ಮತ್ತು ನಿವೃತ್ತಿ ಮುಖ್ಯ ಕಾರ್ಯದರ್ಶಿ ಮಹಿಷಿ ಅವರು ಇದ್ದರು.

ನೌಕರರು ಎಂಥವ್ರಿದ್ದಾರೆ? : ಸರಕಾರಿ ಚಾಲಕರಾದ ಎನ್ ಶಂಕರಯ್ಯ, ರಾಜಶೇಖರ, ಶ್ರೀನಿವಾರ್, ಗಿಲ್ಬರ್ಟ್, ಎಚ್ಡಿ ಕುಮಾರಸ್ವಾಮಿ ಆಪ್ತ ಸಹಾಯಕ ಸುರೇಶ್, ಟೈಪಿಸ್ಟ್ ಬಿಬಿ ವೀಣಾ, ಸಣ್ಣ ನೀರಾವರಿ ಇಲಾಖೆ ಉದ್ಯೋಗಿ ಶಿವಮ್ಮ, ಗುಮಾಸ್ತ ಮಂಜು, ಪೊಲೀಸ್ ಪೇದೆ ಎ ಕೃಷ್ಣಪ್ಪ, ಹೋಟೆಲ್ ವೇಟರ್ ಚಿತ್ತೋಜಿರಾವ್, ಗೆಸ್ಟ್ ಹೌಸ್ ನೌಕರ ನವಾಜ್, ಗ್ರೂಪ್ ಡಿ ನೌಕರ ಲೋಕೇಶ್, ಸ್ಟೆನೋಗ್ರಫರ್ ಎನ್ ಆರ್ ಭಾರತಿ ನಾಗರಾಜ್, ಮಾಜಿ ಸಚಿವ ಮುರುಗೇಶ್ ನಿರಾಣಿ ಆಪ್ತ ತಿಮ್ಮಯ್ಯ, ಜನರಲ್ ಪ್ರೋಗ್ರಾಮರ್ ಜಯಣ್ಣ, ಶಿರಸ್ತೇದಾರ್ ಬೆಟ್ಟಸ್ವಾಮಿ... ಇವರುಗಳು ಸರಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿ ಜಿ-ಕೆಟಗರಿ ಸೈಟು ಗಿಟ್ಟಿಸಿಕೊಂಡಿದ್ದಾರೆ.

ಇವರಲ್ಲಿ ಎಷ್ಟು ಧುರೀಣರು, ಸರಕಾರಿ ನೌಕರರು ಈಗಾಗಲೆ ಆ ಅಕ್ರಮ ನಿವೇಶನದಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ ಅಥವಾ ಇತರರಿಗೆ ಮಾರಾಟ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಏಕೆಂದರೆ, ಅಂತಹ ನಿವೇಶನಗಳನ್ನು ರದ್ದುಪಡಿಸಲಾಗುವುದಿಲ್ಲ. ಈಗ, ಹೈಕೋರ್ಟ್ ಆದೇಶವನ್ನು ಪಾಲಿಸದೆ ಸರಕಾರಕ್ಕೆ ಬೇರೆ ದಾರಿಯೇ ಉಳಿದಿಲ್ಲ.

ಶಿಕ್ಷೆ ಏನು? : ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಪಡೆದ ನಿವೇಶನ ರದ್ದುಪಡಿಸುವ ಜೊತೆಗೆ, ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 463, 464, 465 ಪ್ರಕಾರ ಕೇಸು ದಾಖಲಿಸಿ, ಗರಿಷ್ಠ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಶಿಕ್ಷೆ ನೀಡುವುದು ಅತ್ಲಾಗಿರಲಿ, ಕನಿಷ್ಠಪಕ್ಷ ಸೈಟ್ ಹಿಂದೆ ಪಡೆದುಕೊಂಡರೆ ಸಾಕು.

ಎಚ್ಡಿಕೆ ಪ್ರತಿಕ್ರಿಯೆ : ಸರಕಾರಿ ನೌಕರರಿಗೆ, ಶಾಸಕರಿಗೆ, ಬಡವರಿಗೆ ಜಿ-ಕೆಟಗರಿ ಸೈಟ್ ನೀಡುತ್ತಿರುವುದು ನಮ್ಮ ಕಾಲದಲ್ಲಿ ಮಾತ್ರವಲ್ಲಿ. ಅದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನನ್ನ ಕಾಲದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಮುಖ್ಯಮಂತ್ರಿಗಳ ಅಧಿಕಾರ ವ್ಯಾಪ್ತಿಯಲ್ಲಿಯೇ ಕಾನೂನುಬದ್ಧವಾಗಿ ಸೈಟ್ ಬಿಡಿಎ ಮುಖಾಂತರ ಅತ್ಯಂತ ಪ್ರಾಮಾಣಿಕವಾಗಿ ವಿತರಿಸಲಾಗಿದೆ. ಇನ್ನು ಯಾರಾದರೂ ಸುಳ್ಳು ಪ್ರಮಾಣಪತ್ರ ವಿತರಿಸಿ ಅಕ್ರಮವಾಗಿ ಪಡೆದುಕೊಂಡಿದ್ದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ, ಯಾರು ಬೇಡಂತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+