ಅತೃಪ್ತರು ಸದನದ ಸದಸ್ಯರೋ, ಅಲ್ಲವೋ ಎಂಬುದು ಸ್ಪಷ್ಟವಾಗಲಿ: ಕೃಷ್ಣಬೈರೇಗೌಡ
ಬೆಂಗಳೂರು, ಜುಲೈ 18: ಶಾಸಕರು ಸದನಕ್ಕೆ ಹಾಜರಾಗುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಈಗ ಅತೃಪ್ತರು ಸದನದ ಸದಸ್ಯರೋ ಅಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಪ್ರೀಂಕೋರ್ಟ್ ಏನೋ ತೀರ್ಪು ನೀಡಿದೆ.
ಆದರೆ ಸಂವಿಧಾನದಲ್ಲಿ ಶಾಸಕರು ಸದನದ ಸದಸ್ಯರು ಅಥವಾ ಅಲ್ಲ ಎರಡಕ್ಕೆ ಮಾತ್ರ ಅವಕಾಶವಿದೆ. ಆದರೆ ಅದು ನಿರ್ಧಾರವಾಗದೆಯೇ ಮತವನ್ನು ವಿಶ್ವಾಸಕ್ಕೆ ಹಾಕುವುದು ಅಪೂರ್ಣವಾಗುತ್ತದೆ ಎಂದರು.
ಸುಪ್ರೀಂಕೋರ್ಟ್ ತೀರ್ಪಿನಿಂದ ಅತೃಪ್ತ ಶಾಸಕರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.ಕ್ರಿಯಾ ಲೋಪ ಪುಷ್ಟೀಕರಿಸಲು ಮತ್ತಷ್ಟು ಕಾಲಾವಕಾಶ ಬೇಕಿದೆ. ಸಂವಿಧಾನದಂತೆ ನಡೆಯಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್ಕೆ ಪಾಟೀಲ್ ಮಾತನಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ವ್ಹಿಪ್ ನೀಡುವುದು ನಮ್ಮ ಹಕ್ಕು, ಶೆಡ್ಯೂಲ್ 10 ಸಂವಿಧಾನವು ಪಕ್ಷಗಳಿಗೆ ನೀಡಿದ ಹಕ್ಕಾಗಿದ್ದು, ಪ್ರಜಾಪ್ರಭುತ್ವವು ಕಲುಷಿತಗೊಳ್ಳದೆ ತಡೆಯಲು ಪಕ್ಷಾಂತರ ಕಾಯ್ದೆಯನ್ನು ಸೇರಿಸಲಾಗಿದೆ.
ವ್ಹಿಪ್ ನೀಡುವುದು ಶಾಸಕಾಂಗ ಪಕ್ಷದ ನಾಯಕರಾಗಿರುವ ನನ್ನ ಹಕ್ಕು, ಆದರೆ ಸುಪ್ರೀಂಕೋರ್ಟ್ ತೀರ್ಪು ನನ್ನ ಹಕ್ಕಿಗೆ ಚ್ಯುತಿ ತಂದಿದೆ. ಇಲ್ಲಿ ಕ್ರಿಯಾಲೋಪವಾಗಿದ್ದು, ಸ್ಪೀಕರ್ ಅವರ ಸ್ಪಷ್ಟನೆ ಬೇಕಿದೆ ಎಂದು ಹೇಳಿದರು.
ಪಕ್ಷಾಂತರ ಕಾಯ್ದೆಗೆ ಯಾವುದೇ ತಿದ್ದುಪಡಿಯನ್ನು ತಂದಿಲ್ಲ ಹಾಗೂ ಸುಪ್ರೀಂಕೋರ್ಟ್ ಸಹ ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ ಯಾವುದೇ ವ್ಯತಿರಿಕ್ತ ತೀರ್ಪು ನೀಡಿಲ್ಲ ಹಾಗಾಗಿ ವ್ಹಿಪ್ ನೀಡುವುದು ನನ್ನ ಹಕ್ಕಾಗಿದೆ ಎಂದು ಸಿದ್ದರಾಮಯ್ಯ ಸದನಕ್ಕೆ ಹೇಳಿದರು












Click it and Unblock the Notifications