ಖುಷಿಪಡೋರು ಪಡಲಿ, ಅಂಥವರಿರಬೇಕು ಎಂದ ಡಿಕೆ ಶಿವಕುಮಾರ್
ನವದೆಹಲಿ, ಅಕ್ಟೋಬರ್ 24: 'ಬೆಂಗಳೂರಿಗೆ ಬರುವಂತೆ ಬಹಳ ಒತ್ತಡ ಇದೆ. ಬರುತ್ತೇನೆ ಎಂದಿದ್ದೇನೆ. ವಕೀಲರು, ನಾಯಕರನ್ನು ಭೇಟಿ ಮಾಡಿದ ಬಳಿಕ ಬೆಂಗಳೂರು ಕಡೆ ಪ್ರಯಾಣ ಮಾಡುತ್ತೇನೆ. ನನ್ನನ್ನು ನಂಬಿ ನನಗೆ ಶಕ್ತಿ ನೀಡಿದ ಜನರನ್ನೆಲ್ಲ ಭೇಟಿ ಮಾಡುವ ಕರ್ತವ್ಯ ಮಾಡಬೇಕಿದೆ. ಯಾವ ಮುಖಂಡರನ್ನು ಭೇಟಿಯಾಗುತ್ತೇನೆ ಎಂದು ಹೇಳುವುದಿಲ್ಲ' ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆ ನ್ಯಾಯಾಲಯದ ಕಲಾಪ ಇರುವುದರಿಂದ ಮಧ್ಯಾಹ್ನ ವಕೀಲರ ಭೇಟಿಗೆ ಸಮಯ ಪಡೆಯಲಾಗಿದೆ. ಅವರು ನನ್ನ ಪರವಾಗಿ ವಾದ ಮಾಡಿದ್ದಾರೆ. ಅವರ ಮನೆಗೆ ತೆರಳಿ ಭೇಟಿ ಮಾಡುವುದು ನನ್ನ ಕರ್ತವ್ಯ ಎಂದರು.
Recommended Video
ಉಪಕಾರ ಸ್ಮರಣೆಗೆ ಬೇರೆ ಹೋಲಿಕೆ ಇಲ್ಲ. ನಾನು ಕೃತಜ್ಞತೆ ಹೇಳಿ ನಮಸ್ಕಾರ ಸಲ್ಲಿಸದೆ ಇದ್ದರೆ ಮನುಷ್ಯನಾಗಲು ಸಾಧ್ಯವೇ? ನನ್ನ ಬಿಡುಗಡೆಗಾಗಿ ಎಷ್ಟೊಂದು ಜನ ರಸ್ತೆಗಿಳಿದು ಹೋರಾಟ ಮಾಡಿದ್ದಾರೆ. ಬಂದ್ ಮಾಡಿ ಕೇಸ್ ಹಾಕಿಸಿಕೊಂಡಿದ್ದಾರೆ. ಮನೆಯಲ್ಲಿ ಧ್ಯಾನ ಪೂಜೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಎಲ್ಲ ಪಕ್ಷದವರೂ ಬೇಕಾದಷ್ಟು ಹೋರಾಟ ಮಾಡಿದ್ದಾರೆ. ಮನಸ್ಸು ಬಿಚ್ಚಿ ನನ್ನೆಡೆಗೆ ಪ್ರೀತಿ ಹರಿಸಿದ್ದಾರೆ. ಇನ್ನು ಕೆಲವರು ಖುಷಿ ಪಟ್ಟಿದ್ದಾರೆ. ಏನೂ ಮಾಡಲು ಆಗೊಲ್ಲ. ಅವರೆಲ್ಲ ಇರಬೇಕು, ಅಂತಹವರೆಲ್ಲ ಇದ್ದರೆ ನಮಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯ. ಹೀಗಾಗಿ ಅವರ ಬಗ್ಗೆ ಬೇಸರವಿಲ್ಲ ಎಂದು ತಮ್ಮ ವಿರೋಧಿಗಳ ಬಗ್ಗೆ ವ್ಯಂಗ್ಯವಾಡಿದರು.

ಆಫರ್ ನೀಡಿರುವುದು ಗೊತ್ತಿದೆ
ನಾನು ವಿಧಾನಸಭೆಯಲ್ಲಿಯೇ ಇದರ ಬಗ್ಗೆ ಹೇಳಿದ್ದೆ. ಯಾರು ಯಾರಿಗೆ ಏನೆಲ್ಲ ಆಫರ್ಗಳನ್ನು ನೀಡಲಾಗಿದೆ ಎಂಬುದೆಲ್ಲ ಗೊತ್ತಿತ್ತು. ನಾನು ಈ ವಿಚಾರದಲ್ಲಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ನನ್ನ ಸಹೋದರ, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿದ್ದರು. ಇವುಗಳನ್ನು ಗಮನಿಸಿ ನಾನು ತಪ್ಪು ಹೆಜ್ಜೆ ಇರಿಸದಂತೆ ಎಚ್ಚರಿಕೆ ವಹಿಸಿದ್ದೆ ಎಂದರು.

ನನ್ನ ಪರ ಹೋರಾಟ ಮಾಡಿದ್ದಾರೆ
ಬಹಳ ಜನ ಕಾಣದ ಕೈಗಳು ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡದೆ ಇದ್ದರೂ ನನಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಅಲ್ಲದೆ, ಜೆಡಿಎಸ್, ಸಿಪಿಐ, ಸಿಎಇಂಎ, ಬಿಎಸ್ಪಿ, ಕೇರಳದ ಎಲ್ಲ ಪಕ್ಷಗಳು ಪಂಜಿನ ಮೆರವಣಿಗೆ ಮಾಡಿದ್ದಾರೆ. ದೆಹಲಿಯಲ್ಲಿ ರಸ್ತೆಯಲ್ಲಿ 300-400 ಜನ ಹುಡುಗರು ಹೋರಾಟ ಮಾಡಿದ್ದಾರೆ. ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಕೆಲವು ಸ್ವಾಮೀಜಿಗಳು ಕೂಡ ನ್ಯಾಯಾಲಯಕ್ಕೆ ಬಂದಿದ್ದಾರೆ. ಅವರೆಲ್ಲರ ಪ್ರೀತಿ ವಿಶ್ವಾಸ ನಂಬಿಕೆ ನನ್ನ ಮೇಲೆ ಇರುವುದರಿಂದ ನನಗೆ ಶಕ್ತಿ ಸಿಕ್ಕಿದೆ ಎಂದು ಹೇಳಿದರು.

ಬೆಂಗಳೂರಿಗೆ ವರ್ಗಾಯಿಸಲು ಮನವಿ
ಬೆಳಿಗ್ಗೆ ನನ್ನ ತಾಯಿ ಮತ್ತು ಪತ್ನಿಯ ವಿಚಾರಣೆ ಇತ್ತು. ಅದನ್ನು ಅ.31ಕ್ಕೆ ಮುಂದೂಡಿದ್ದಾರೆ. ಬೆಂಗಳೂರಿನಲ್ಲಿಯೇ ನಡೆಸುವಂತೆ ಮನವಿ ಮಾಡಿದ್ದೇವೆ. ಏನು ಮಾಡುತ್ತಾರೋ ನೋಡಬೇಕು. ತಾಯಿಗೆ ಪ್ರಯಾಣ ಮಾಡುವುದು ಕಷ್ಟ. ಅವರಿಗೆ ಭಾಷೆ ಸಮಸ್ಯೆ ಇದೆ. ಅವರ ವಿಚಾರಣೆ ಮಾಡುವ ಸಮನ್ಸ್ ಹಿಂದಕ್ಕೆ ತೆಗೆದುಕೊಂಡು, ಮತ್ತೆ ನೀಡಿದ್ದಾರೆ ಎಂಬ ಸುದ್ದಿ ಇದೆ. ಅವರ ಪ್ರಯತ್ನ ಅವರು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.

ಮಗಳೂ ಉತ್ತರ ನೀಡಿದ್ದಾಳೆ
ನನಗೆ ಸಮನ್ಸ್ ಬಂದ ತಕ್ಷಣ ಒಂದು ನಿಮಿಷ ವ್ಯರ್ಥ ಮಾಡದೆ ಅಂದು ಮಧ್ಯಾಹ್ನ ದೆಹಲಿಗೆ ಬಂದು ಬಹಳ ಸ್ಪಷ್ಟವಾಗಿ ಉತ್ತರ ನೀಡಿದ್ದೇನೆ. ಮುಂದಕ್ಕೂ ಯಾವಾಗ ಬೇಕಾದರೂ ವಿಚಾರಣೆ ನಡೆಸಿದರೂ ಹಾಜರಾಗಲು ಸಿದ್ಧನಿದ್ದೇನೆ. ನಾವು ತಪ್ಪು ಮಾಡಿಲ್ಲ. ಹೆದರುವುದು ಬೇಡ. ಅಲ್ಲಿಗೆ ಹೋಗಿ ನೇರವಾಗಿ ಉತ್ತರ ನೀಡು ಎಂದು ಮಗಳಿಗೆ ಹೇಳಿದ್ದೆ. ಅದೇ ರೀತಿ ಹೇಳಿದ್ದಾಳೆ ಎಂದು ತಿಳಿಸಿದರು.

ಅವರಿಗೆ ಉತ್ತರ ನೀಡುತ್ತೇನೆ
ನಾನು ಕಾನೂನಿಗೆ ಬದ್ಧನಾದ ನಾಗರಿಕ. ಏಳು ಬಾರಿ ಶಾಸಕನಾಗಿದ್ದೇನೆ, ಕಾನೂನು ಮಾಡಿದ್ದೇವೆ. ಕಾನೂನಿಗೆ ಗೌರವ ಸಲ್ಲಿಸಬೇಕು. ಚುನಾವಣಾ ಆಯೋಗ ಕೇಳಿದ ಮಾಹಿತಿ ಘೋಷಣೆ ಮಾಡಿದ್ದೇನೆ. ಇದರ ಬಗ್ಗೆ ಉಳಿದಿದ್ದನ್ನು ಬೆಂಗಳೂರಲ್ಲಿ ಮಾತನಾಡುತ್ತೇನೆ. ನನ್ನ ಸ್ನೇಹಿತರು ಕೆಲವರು ಬಿಜಿನೆಸ್ ಮಾಡು, ಸನ್ಯಾಸತ್ವ ತಗೋ ಎಂದೆಲ್ಲ ಸಲಹೆ ನೀಡಿದ್ದಾರೆ. ಅವರಿಗೆಲ್ಲ ಉತ್ತರ ನೀಡುತ್ತೇನೆ ಎಂದು ಹೇಳಿದರು.












Click it and Unblock the Notifications