ಎಚ್ಡಿಕೆ ಅಲ್ಲ ಸಿಡಿಕೆ ಎಂದವರು ಯಾರೂ ಗೊತ್ತಾ..?
ಬೆಂಗಳೂರು, ಜ. 01: ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಯಾವಾಗಲೂ ಚರ್ಚೆಯಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇವತ್ತು ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ. ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಬೆಂಬಲ ಕೊಡುತ್ತಿರುವ 'ಸಿಡಿಕೆ' ಅವರು 35 ನಕಲಿ 'ಸಿಡಿ'ಗಳನ್ನು ಬಿಡುಗಡೆ ಮಾಡಿದ್ದಾರೆ. ಇಡೀ ರಾಜ್ಯದ ಜನತೆಯೇ ಅವರಿಗೆ ಛೀಮಾರಿ ಹಾಕುತ್ತಾರೆ ಎಂಬ ಈಶ್ವರಪ್ಪ ಅವರ ಲೇವಡಿ ಮಿಶ್ರಿತ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಅಂದ ಹಾಗೆ ಈಶ್ವರಪ್ಪ ಅವರು ಸಿಡಿಕೆ ಎಂದಿದ್ದು ಮಾಜಿ ಮುಖ್ಯಮಂತ್ರಿಗಳಿಗೆ. ಹಾಗೇ ಕರೆದಿರುವುದಕ್ಕೆ ಈಶ್ವರಪ್ಪ ಅವರು ಕಾರಣವನ್ನೂ ಕೊಟ್ಟಿದ್ದಾರೆ.
ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆ ಹಾಗೂ ಗೋಲಿಬಾರ್ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ಡಿಕೆ ಅವರು ನಿನ್ನೆ ಸಿಡಿ ಬಿಡುಗಡೆ ಮಾಡಿದ್ದರು. 'ಎಚ್ಡಿಕೆ' ಅವರ 'ಸಿಡಿ' ಬಿಡುಗಡೆ ಕುರಿತು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ್ದಾರೆ.
'ಸಿಡಿಕೆ' ಯವರು ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಸಿಡಿಯನ್ನು ರಾಜ್ಯದ ಜನರು ನಂಬುವುದಿಲ್ಲ. ಗಲಭೆ ಸಂದರ್ಭ ಸಿಸಿ ಟಿವಿ ಹಾಳು ಮಾಡಿದ ವೀಡಿಯೋ ಅವರಿಗೆ ಸಿಗಲಿಲ್ಲವಾ? ನೀವು ಮುಖ್ಯಮಂತ್ರಿ ಆಗಿದ್ದಾಗ ಇದ್ದ ಪೊಲೀಸರೇ ಈಗಲೂ ಇದ್ದಾರೆ. ಪೊಲೀಸರು ತಮ್ಮ ಜೀವ ಉಳಿಸಿಕೊಳ್ಳಬಾರದಾ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಹಿಂದೆ ಇದೇ ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಮದ್ದೂರು ತಾಲೂಕಿನ ತೋಪಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಕೊಲೆ ಆಗಿತ್ತು. ಕೊಲೆ ಮಾಡಿದವರನ್ನು ಎನ್ಕೌಂಟರ್ ಮಾಡಿ ಬಿಸಾಕಿ ಎಂದಿದ್ದವರು, ಈಗ ಪ್ರಧಾನಿ ನರೇಂದ್ರ ಮೋದಿಯವ್ರನ್ನ ಹಿಟ್ಲರ್ಗೆ ಹೋಲಿಕೆ ಮಾಡ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರುಗಳಿಗೆ ರಾಜ್ಯದಲ್ಲಿ ಶಾಂತಿ ಇರುವುದು ಇಷ್ಟವಿಲ್ಲ ಎಂದಿದ್ದಾರೆ.
ಎಚ್ಡಿಕೆ ಬಿಡುಗಡೆ ಮಾಡಿರುವುದು ಕಟ್ ಅಂಡ್ ಪೇಸ್ಟ್ ವಿಡಿಯೋ. ಸಿಡಿ ಬಿಡುಗಡೆ ಮಾಡೋಕೆ ಇಷ್ಟು ಟೈಂ ಬೇಕಿತ್ತಾ? ತಕ್ಷಣ ಯಾಕೆ ಬಿಡುಗಡೆ ಮಾಡಿಲ್ಲ? ಕಟ್ ಅಂಡ್ ಪೇಸ್ಟ್ ಮಾಡೋಕೆ ಟೈಂ ತಗೊಂಡಿದ್ದಾರೆ. ಇದೆಲ್ಲಾ ಕುಮಾರಸ್ವಾಮಿ ಎಲ್ಲಿಂದ ಕಲಿತು ಬಂದ್ರೋ ಗೊತ್ತಿಲ್ಲ ಎಂದಿದ್ದಾರೆ. ಈಗ ಕುಮಾರಸ್ವಾಮಿಯವ್ರಿಗೆ ಈಗ ಏನೂ ಉದ್ಯೋಗ ಇಲ್ಲ. ಸದನ ಸಮಿತಿ ರಚನೆ ಮಾಡಿದ್ರೆ ನ್ಯಾಯ ಸಿಗುತ್ತಾ? ಸದನ ಸಮಿತಿ ಕೂಡ ಹೆಚ್ ಡಿಕೆಗೇ ಚೀಮಾರಿ ಹಾಕುತ್ತೆ.
ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿದ್ರೆ, ವಿಶ್ವಸಂಸ್ಥೆಯಿಂದ ಒಬ್ಬರನ್ನ ಕರೆದುಕೊಂಡು ಬನ್ನಿ ಅಂತಾರೆ. ಅವರು ಹಾಡಿದ ಹಾಗೇ ನಾವು ಕುಣಿಯೋಕೆ ಆಗುತ್ತಾ? ಕುಮಾರಸ್ವಾಮಿ ವಿಚಾರದಲ್ಲಿ ಪಾಪ ಅನ್ನಬೇಡಿ. ಅವ್ರು ಮಾಡಿರೋ ಪಾಪ ಇನ್ನೂ ಅನುಭವಿಸ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.












Click it and Unblock the Notifications