ಬೆಂಗಳೂರಿನಲ್ಲಿ ಆರ್ಸಿಬಿ-ಕೆಕೆಆರ್ ನಡುವೆ ಹೈವೋಲ್ಟೇಜ್ ಪಂದ್ಯ: ಮೆಟ್ರೋ ಸೇವೆ ವಿಸ್ತರಣೆ: ಸಯಮಗಳ ಮಾಹಿತಿ ತಿಳಿಯಿರಿ
Namma Metro: ಭಾರತ-ಪಾಕಿಸ್ತಾನ ನಡುವೆ ಯುದ್ಧ ಸಂಘರ್ಷ ಹಿನ್ನೆಲೆ ಅರ್ಧಕ್ಕೆ ರದ್ದಾಗಿದ್ದ ಐಪಿಎಲ್ 2025 ಮತ್ತೆ ಇಂದಿನಿಂದ (ಮೇ 17) ಆರಂಭವಾಗುತ್ತಿದೆ. ಮೊದಲ ಪಂದ್ಯ ಆರ್ಸಿಬಿ-ಕೆಕೆಆರ್ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ಸೇವೆಯನ್ನು ವಸ್ತರಿಸಿದೆ. ಹಾಗಾದ್ರೆ ಎಷ್ಟು ಗಂಟೆಯಿಂದ ಎಲ್ಲಿಯವರೆಗೂ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಉಳಿದ ಪಂದ್ಯಗಳು ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೇ 17, 23ರಂದು ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ ನಿಗದಿ ಆಗಿದೆ. ಈ ಪಂದ್ಯಾವಳಿ ವೀಕ್ಷಣೆಗೆ ತೆರಳುವಂತಹ ವೀಕ್ಷಕರ ಅನುಕೂಲಕ್ಕೆ ತಕ್ಕಂತೆ ನಮ್ಮ ಮೆಟ್ರೋ ಮಧ್ಯರಾತ್ರಿಯವರೆಗೆ ಸೇವೆಯನ್ನು ವಿಸ್ತರಣೆ ಮಾಡಿದೆ. ಬಿಎಂಆರ್ಸಿಎಲ್ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಪಂದ್ಯಗಳಿಗೆ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಮೇ 17 ಹಾಗೂ 23, 2025ರಂದು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಆದ್ದರಿಂದ ಈ ದಿನಗಳಂದು ನಮ್ಮ ಮೆಟ್ರೋ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ ವೈಟ್ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ನಿಲ್ದಾಣದವರೆಗೂ ರೈಲು ಸೇವೆಯನ್ನು ಮಧ್ಯರಾತ್ರಿ 1ರ ವರೆಗೆ ವಿಸ್ತರಣೆ ಮಾಡಿದೆ.
ಮೆಜೆಸ್ಟಿಕ್ನಿಂದ ಈ ಎಲ್ಲಾ ನಾಲ್ಕು ಮಾರ್ಗಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 1.35 ಕ್ಕೆ ಹೊರಡಲಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಮೊದಲಲ್ಲ.. ಹಿಂದಿನಿಂದಲೂ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯವಳಿ ವೇಳೆ ಬಿಎಂಆರ್ಸಿಎಲ್ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡುತ್ತಲೇ ಬಂದಿದೆ.
ಭಾರೀ ಬಿಗಿ ಭದ್ರತೆ: ಈ ಹೈ ವೋಲ್ಟೇಜ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ದಂಡೇ ಹರಿದುಬರಲಿದೆ. ಈ ಹಿನ್ನೆಲೆ ಪೊಲೀಸರು ಭಾರೀ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಕಾರಣ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಬಿಸಿಸಿಐಯು ಪ್ರಾಂಚೈಸಿ ಮನವಿ ಮೇರೆಗೆ ಐಪಿಎಲ್ 2025 ಟೂರ್ನಿಯನ್ನು ರದ್ದಪಡಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಿತ್ತು. ಇದೀಗ ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆಯೇ ಮೇ 17ರಂದು ಆರ್ಸಿಬಿ ಹಾಗೂ ಕೆಕೆಆರ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ಈ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆರ್ಸಿಬಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬರುವ ಸಾಧ್ಯತೆಯಿದೆ. ಅದರಲ್ಲೂ ವಿದಾಯ ಪಂದ್ಯವಿಲ್ಲದೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆ ಅವರಿಗೆ ಎಲ್ಲಾರೂ ವೈಟ್ ಜೆರ್ಸಿ ಧರಿಸಿ ಗೌರವ ಸಲ್ಲಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದು ಇಡೀ ಕ್ರೀಡಾಂಗಣವೇ ಶ್ವೇತ ವರ್ಣದಿಂದ ರಾರಾಜಿಸಲಿದೆ.
ವಿರಾಟ್ ಕೊಹ್ಲಿಗಾಗಿಯೇ ಆರ್ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ. ಅಲ್ಲದೆ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಘರ್ಷಣೆ ಬಳಿಕ ಐಪಿಎಲ್ ಪುನರಾರಂಭ ಆಗುತ್ತಿರುವ ಈ ಹಿನ್ನೆಲೆ ಯಾವುದೇ ಅಹಿತಕರ ನಡೆಯದಂತೆ ಚಿನ್ನಸ್ವಾಮಿ ಮೈದಾನದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆರ್ಸಿಬಿ-ಕೆಕೆಆರ್ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7:30ಕ್ಕೆ ಹೈವೋಲ್ಟೇಜ್ ಪಂದ್ಯ ಆರಂಭ ಆಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ 1,600 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ಪೈಕಿ ನಾಲ್ವರು ಡಿಸಿಪಿ, 12 ಎಸಿಪಿ, 28 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್ ಸೇರಿದ್ದಾರೆ. ಜೊತೆಗೆ ಕ್ಯೂಆರ್ಟಿ, ವಾಟರ್ ಜೆಟ್, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನಿಯೋಜನೆ ಮಾಡಲಾಗಿದೆ. 4 ಕೆಎಸ್ಆರ್ಪಿ ತುಕಡಿ, ಹೋಂಗಾರ್ಡ್ಸ್ ಅನ್ನು ಸಹ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಪಂದ್ಯ ಆರಂಭವಾಗುವ ಮೊದಲೇ ಪ್ರತಿ 2 ಗಂಟೆಗಳಿಗೊಮ್ಮೆ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ನಿಂದ ತಪಾಸಣೆ ನಡೆಸಲಾಗುತ್ತದೆ.












Click it and Unblock the Notifications