ಮದ್ಯ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಎಂಬುದು ಸುಳ್ಳು: ರವಿಕೃಷ್ಣಾ ರೆಡ್ಡಿ
ಬೆಂಗಳೂರು, ಜನವರಿ 30: ಮದ್ಯ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ಹಣದ ಹರಿವು ಕಡಿಮೆ ಆಗುತ್ತದೆ ಎಂಬುದು ತಪ್ಪು ಲೆಕ್ಕಾಚಾರ, ಮದ್ಯ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ಪರೋಕ್ಷ ಲಾಭವೇ ಆಗುತ್ತದೆ ಎಂದು ಹೊಸ ಲೆಕ್ಕಾಚಾರವನ್ನು ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮುಂದಿಟ್ಟಿದ್ದಾರೆ.
ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪಾದಯಾತ್ರೆಯಲ್ಲಿ ಬೆಂಗಳೂರಿಗೆ ಬಂದ ಮಹಿಳೆಯರ ಬೆನ್ನೆಲುಬಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅವರು, ಒನ್ಇಂಡಿಯಾ ಕನ್ನಡದ ಜೊತೆ ಸಂಪೂರ್ಣ ಮದ್ಯ ನಿಷೇಧದ ಸಾಧಕ-ಬಾಧಕಗಳ ಬಗ್ಗೆ ಮಾತನಾಡಿದರು.
ನಮ್ಮ ರಾಜ್ಯದ ಬಜೆಟ್ 2.20 ಲಕ್ಷ ಕೋಟಿ ಇದರಲ್ಲಿ ಅಬಕಾರಿಯಿಂದ ಬರುವ ಲಾಭ 16 ರಿಂದ 18 ಸಾವಿರ ಕೋಟಿ. 2.20 ಲಕ್ಷ ಕೋಟಿಗೆ ಹೋಲಿಸಿದರೆ ಇದು ಅಷ್ಟೇನೂ ದೊಡ್ಡ ಪ್ರಮಾಣದ ಮೊತ್ತವಲ್ಲ. ಪೂರ್ಣ ಮದ್ಯ ನಿಷೇಧಿಸಿದ ರಾಜ್ಯಗಳು ಸಹ ಯಾವುದೇ ಹಣಕಾಸಿನ ಕೊರತೆ ಇಲ್ಲದೆ ಬಜೆಟ್ ಮಂಡಿಸಿವೆ ಎಂದು ಅವರು ಹೇಳಿದರು.
ಮದ್ಯ ನಿಷೇಧ ಮಾಡಿದರೆ ಸರ್ಕಾರವು ಆರೋಗ್ಯದ ಮೇಲೆ ಮಾಡುವ ಖರ್ಚು ಉಳಿತಾಯವಾಗುತ್ತದೆ. ಬಡತನ ರೇಖೆ ಕೆಳಗಿರುವ ಕುಟುಂಬಗಳು ಮೇಲೆ ಬರುತ್ತವೆ. ಅವುಗಳ ಮೇಲೆ ಸರ್ಕಾರ ಖರ್ಚು ಮಾಡುವ ಹಣ ಉಳಿತಾಯವಾಗುತ್ತದೆ. ಅಪಘಾತಗಳು ಭಾರಿ ಪ್ರಮಾಣದಲ್ಲಿ ಕಡಿಮೆ ಆಗುತ್ತದೆ. ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಯೂ ಆಗುತ್ತದೆ. ಶಿಕ್ಷಣ ಹೆಚ್ಚಾಗುತ್ತದೆ ಎಂದು ಅವರು ಮದ್ಯ ನಿಷೇದಿಂದಾಗುವ ಧನಾತ್ಮಕ ಅಂಶಗಳ ಪಟ್ಟಿ ತೆರೆದಿಟ್ಟರು.
ಪ್ರಸ್ತುತ ಮಹಿಳೆಯರ ಪಾದಯಾತ್ರೆಯ ಬಗ್ಗೆ ಮಾತನಾಡಿದ ಅವರು, ಬಿಜಾಪುರ, ಹಾವೇರಿ, ಕಲಬುರಗಿ, ಬೀದರ್, ಬೆಳಗಾವಿ, ಚಿತ್ರದುರ್ಗ, ಕೋಲಾರ, ಕೊಪ್ಪಳ, ಗಂಗಾವತಿ ಇನ್ನೂ ಹಲವು ಜಿಲ್ಲೆಗಳಿಂದ ಸುಮಾರು ಮೂರು ಸಾವಿರ ಮಹಿಳೆಯರು ಹಗಲು ಇರುಳೆನ್ನದೆ ಪಾದಯಾತ್ರೆಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಮನವಿ ನೀಡಲು ಬಂದಿದ್ದಾರೆ ಆದರೆ ಸರ್ಕಾರ ಅವರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳಲು ತಯಾರಿಲ್ಲ ಎಂದು ಅವರು ಹೇಳಿದರು.
ರಾಜಕಾರಣಿಗಳು ವಿಧಾನಸೌಧವನ್ನು ಖಾಸಗಿ ರೆಸಾರ್ಟ್ ಮಾಡಿಕೊಂಡಿದ್ದಾರೆ. ಮದ್ಯದ ಬಲದ ಮೇಲೆಯೇ ಚುನಾವಣೆ ಗೆಲ್ಲುವ ಅವರಿಗೆ ಮದ್ಯ ನಿಷೇಧ ಎಂದರೆ ಮೈಮೇಲೆ ಚೇಳು ಬಿಟ್ಟಂತಾಗುತ್ತಿದೆ. ಹಾಗಾಗಿಯೇ ಮಹಿಳೆಯರನ್ನು ತಡೆಯಲು ಇಷ್ಟೋಂದು ಪೊಲೀಸ್ ಬಲವನ್ನು ಸರ್ಕಾರ ಬಳಸುತ್ತಿದೆ.
ಮೊನ್ನೆ ಒಂದು ನಿಯೋಗವು ಕುಮಾರಸ್ವಾಮಿ ಅವರನ್ನು ಭೇಟಿ ಆಯಿತು ಆದರೆ ಮದ್ಯ ನಿಷೇಧದ ಬಗ್ಗೆ ಉಡಾಫೆ ಉತ್ತರವೇ ಬಂತೇ ಹೊರತು ಸಕಾರಾತ್ಮಕ ಉತ್ತರ ಬರಲಿಲ್ಲ. ಹೆಣ್ಣು ಮಕ್ಕಳು ತಮ್ಮ ಕುಟುಂಬಗಳನ್ನು ಉಳಿಸಿಕೊಳ್ಳಲು ಕೇಳುತ್ತಿದ್ದಾರೆ ಕುಮಾರಸ್ವಾಮಿ ಅವರು ಮಹಿಳೆಯರ ಗೌರವ ಉಳಿಸುವ ಕಾರ್ಯ ಮಾಡಬೇಕು ಎಂದು ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದರು.