Ration Card: 22 ಲಕ್ಷ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ದಾರರಿಗೆ ಕಾದಿದೆ ಶಾಕ್!
ರಾಜ್ಯದಲ್ಲಿ ಲಕ್ಷಾಂತರ ಜನ ಬಿಪಿಎಲ್ ಕಾರ್ಡ್ ದಾರರು ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ಬಿಗ್ಶಾಕ್ ಕಾದಿದೆ. ಈ ಕಾರ್ಡ್ ಇರುವ ಎಲ್ಲರಿಗೂ ಅಲ್ಲ. ಸುಳ್ಳು ಅಥವಾ ತಪ್ಪು ದಾಖಲೆಗಳನ್ನು ನೀಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಂಡಿರುವವರನ್ನು ರಾಜ್ಯ ಸರ್ಕಾರ ಪತ್ತೆ ಮಾಡಿದೆ.
ಅದರಲ್ಲಿ ಬ್ಯಾಂಕ್ ಸಾಲ, ವಾರ್ಷಿಕ ವರಮಾನ ಎನ್ನುವುದನ್ನು ಪರಿಶೀಲನೆ ಮಾಡಿ ಲಿಸ್ಟ್ ಮಾಡಿಕೊಳ್ಳಲಾಗಿದೆ. ಹಾಗಾದರೆ ಯಾರ ಬಿಪಿಎಲ್ & ಅಂತ್ಯೋದಯ ಕಾರ್ಡ್ ರದ್ದಾಗಲಿದೆ. ಇದನ್ನು ಪರಿಶೀಲನೆ ಮಾಡುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಕೆಲವರು ತಪ್ಪು ಮಾಹಿತಿಗಳನ್ನು ನೀಡಿ ಹಾಗೂ ಶ್ರೀಮಂತರಾಗಿದ್ದರೂ ಸುಳು ಮತ್ತು ತಪ್ಪು ದಾಖಲೆಗಳನ್ನು ನೀಡಿ ಜನ ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಳ್ಳವುದು ಹೊಸದಲ್ಲ. ಆದರೆ, ಈ ರೀತಿ ಕಳ್ಳಾಟ ಆಡುವವರಿಗೆ ಬ್ರೇಕ್ ಹಾಕುವುದಕ್ಕೆ ಸರ್ಕಾರ ಮುಂದಾಗಿದೆ.
ಕೆಲವೊಮ್ಮೆ ಸರ್ಕಾರದ ನಿಯಮಗಳನ್ನು ತಿಳಿದುಕೊಳ್ಳದೆಯೂ ಕೆಲವು ಮುಗ್ದರು ಈ ರೀತಿ ಕಾರ್ಡ್ ಪಡೆದುಕೊಂಡು ತಪ್ಪು ಮಾಡಿರುವ ಸಾಧ್ಯತೆಗಳು ಸಹ ಇವೆ. ಇದೀಗ ರಾಜ್ಯ ಆಹಾರ ಇಲಾಖೆಯು ಈ ರೀತಿಯ ಎಲ್ಲಾ ಕಾರ್ಡ್ಗಳನ್ನು ಪರಿಶೀಲನೆ ಮಾಡಿ. 22 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ಅನರ್ಹ ಎಂದು (ಅರ್ಹವಲ್ಲದ) ಪರಿಗಣಿಸಿ, ಲಿಸ್ಟ್ ಮಾಡಿದೆ.

ಸರ್ಕಾರ ಅನರ್ಹ ಕಾರ್ಡ್ದಾರರನ್ನು ಕಂಡುಹಿಡಿಯಲು ಬಳಸಿದ ಮಾರ್ಗವೂ ಹೊಸದಾಗಿದೆ. ಈ ರೀತಿ ಕಾರ್ಡ್ದಾರರು ಸಾಲ, ಟ್ಯಾಕ್ಸ್ ಪಾವತಿ ಹಾಗೂ ವಾರ್ಷಿಕ ವರಮಾನ ಸೇರಿದಂತೆ ಹಲವು ದಾಖಲೆಗಳನ್ನು ಸರ್ಕಾರ ಪರಿಶೀಲನೆ ಮಾಡಿ, ಅರ್ಹರಲ್ಲದವರನ್ನು ಗುರುತಿಸಿದೆ.
ಮುಖ್ಯವಾಗಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕುಟುಂಬ ತಂತ್ರಾಂಶದ (ಸಾಫ್ಟ್ವೇರ್) ಸಹಾಯದಿಂದ ಬರೋಬ್ಬರಿ 22 ಲಕ್ಷಕ್ಕೂ ಹೆಚ್ಚು (22,62,412) ಬಿಪಿಎಲ್ ಹಾಗೂ ಅಂತ್ಯೋದಯ ಅನರ್ಹ ಕಾರ್ಡ್ಗಳನ್ನು ಪತ್ತೆ ಮಾಡಿದೆ. ಇದೀಗ ಇಷ್ಟು ಜನರ ಕಾರ್ಡ್ ರದ್ದಾಗುವ ಆತಂಕ ಎದುರಾಗಿದೆ.
ಇ - ಆಡಳಿತ ನೆರವು: ರಾಜ್ಯದಲ್ಲಿ ನಿಯಮ ಉಲ್ಲಂಘನೆ ಮಾಡಿ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಂಡಿರುವವರನ್ನು ಪತ್ತೆ ಮಾಡುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು. ರಾಜ್ಯ ಆಹಾರ ಇಲಾಖೆಯು ಈ ರೀತಿ ನಿಯಮ ಮೀರಿ ಪಡಿತರ ಚೀಟಿ (ರೇಷನ್ ಕಾರ್ಡ್) ಮಾಡಿಸಿರುವವರ ಪತ್ತೆಗಾಗಿ ಇ - ಆಡಳಿತಕ್ಕೆ ಮನವಿ ಮಾಡಿತ್ತು.
ಇ - ಆಡಳಿತವು ದಾಖಲೆಗಳನ್ನು ಪರಿಶೀಲನೆ ಮಾಡಿದೆ. ರಾಜ್ಯದಲ್ಲಿ ವರಮಾನ, ಆದಾಯ ಹಾಗೂ ಬ್ಯಾಂಕ್ ಸಾಲ ಸೇರಿದಂತೆ ಒಬ್ಬ ವ್ಯಕ್ತಿ ಏನೆಲ್ಲ ಸೌಲಭ್ಯ ಪಡೆದಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಏನು ಎನ್ನುವ ಮಾಹಿತಿ ಈಗ ಸುಲಭವಾಗಿ ಲಭ್ಯವಾಗುತ್ತಿದೆ. ಇದಕ್ಕೆ ಡಿಜಿಟಲೀಕರಣವೂ ಕಾರಣ.
ಈ ರೀತಿ ಇ - ಆಡಳಿತದಿಂದ ಪರಿಶೀಲನೆ ಮಾಡಿದಾಗ 10,54,368ಕ್ಕೂ ಹೆಚ್ಚು ಕಾರ್ಡ್ದಾರರು 1.2 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಈ ಎಲ್ಲಾ ಕಾರ್ಡ್ಗಳೂ ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿವೆ ಎನ್ನುವುದು ಸ್ಪಷ್ಟವಾಗಿದೆ.
ಬೆಂಗಳೂರಲ್ಲೇ ಹೆಚ್ಚು: ಈ ರೀತಿ ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿಕೊಂಡು ಕಾರ್ಡ್ಗಳನ್ನು ಮಾಡಿಸಿದವರಲ್ಲಿ ರಾಜ್ಯದಲ್ಲೇ ಬೆಂಗಳೂರಿನಲ್ಲೇ ಹೆಚ್ಚು ಜನ ಇದ್ದಾರೆ. ಅನರ್ಹ ಕಾರ್ಡ್ದಾರರ ಜಿಲ್ಲೆವಾರು ವಿವರ ನೋಡಿದಾಗ ಬೆಂಗಳೂರಿನಲ್ಲೇ ಹೆಚ್ಚಿದ್ದಾರೆ. ಬೆಂಗಳೂರಿನಲ್ಲಿ 2,54,286 ಅನರ್ಹ ಕಾರ್ಡ್ದಾರರು ಇದ್ದಾರೆ.
ರದ್ದಾಗಲ್ಲ, ಸೌಲಭ್ಯವೂ ಸಿಗಲ್ಲ: ಹೌದು ಈ ಎಲ್ಲಾ ಅನರ್ಹ ಕಾರ್ಡ್ಗಳು ಏಕಕಾಲಕ್ಕೆ ರದ್ದಾಗಲ್ಲ ನಿಜ. ಆದರೆ, ಈ ಕಾರ್ಡ್ಗಳಲ್ಲಿ ಸಿಗ್ತಿದ್ದ ಸೌಲಭ್ಯವೂ ಇನ್ಮುಂದೆ ಸಿಗಲ್ಲ!. ಇನ್ಮುಂದೆ ಈ ರೀತಿಯ ಅನರ್ಹ ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ಗಳನ್ನು ಎಪಿಎಲ್ಗೆ ಪರಿವರ್ತನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ರೀತಿ ಮಾಡುವುದರಿಂದ ವಿವಿಧ ಸೌಲಭ್ಯಗಳು ಸಿಗಲಿವೆ. ಆದರೆ, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ನಲ್ಲಿ ಸಿಗುತ್ತಿದ್ದ ಸೌಲಭ್ಯಗಳು ಮುಂದುವರಿಯುವುದಿಲ್ಲ.
ಕುಟುಂಬ ತಂತ್ರಾಂಶ ಹಾಗೂ ಕೆಲವು ನಿಯಮಗಳ ಆಧಾರದ ಮೇಲೆ ವಿವಿಧ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳನ್ನಾಗಿ ಮುಂದುವರಿಸಲು ಆಹಾರ ಇಲಾಖೆ ನಿರ್ಧರಿಸಿದೆ. ಈಗ ಯಾವುದೇ ಕಾರ್ಡ್ ರದ್ದಾಗಲ್ಲ. ಅಲ್ಲದೇ ಇನ್ನೂ ಅನರ್ಹ ಕಾರ್ಡ್ಗಳು ಇರುವ ಸಾಧ್ಯತೆ ಇದೆ. ಹೀಗಾಗಿ, ಎಲ್ಲವನ್ನೂ ಇನ್ನಷ್ಟು ಮಾರ್ಗಗಳಲ್ಲಿ ಪರಿಶೀಲಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications