ವಿಶ್ವ ತೊನ್ನು ದಿನ: ಭಯಬೇಡ, ತೊನ್ನು ಸಾಂಕ್ರಾಮಿಕ ರೋಗವಲ್ಲ
ಬೆಂಗಳೂರು, ಜೂನ್ 27: ಚರ್ಮದ ಮೇಲೆ ಬಿಳಿ ಪಟ್ಟಿಯನ್ನು ಮೂಡಿಸುವ ತೊನ್ನು(ವಿಟಿಲಿಗೊ) ಸಾಂಕ್ರಾಮಿಕ ರೋಗವಲ್ಲ, ಅಂತವರಿಂದ ದೂರವಿದ್ದು ಅವರ ಮನಸ್ಸಿಗೆ ನೋವುಂಟು ಮಾಡಬೇಡಿ ಎಂದು ಡರ್ಮಟಾಲಜಿಕಲ್ ಸೊಸೈಟಿಯು ಬೆಂಗಳೂರಲ್ಲಿ ಅಭಿಯಾನ ನಡೆಸಿತು.
ಈ ಅಭಿಯಾನದಲ್ಲಿ ತೊನ್ನು ಸೋಂಕು ಮೂಡಿಸುವುದಿಲ್ಲ ಸಾಂಕ್ರಾಮಿಕ ರೋಗವಲ್ಲ ಎಂದು ಮನವರಿಕೆ ಮಾಡಿಕೊಡಲಾಯಿತು, ವ್ಯಕ್ತಿಯ ಸಂಪರ್ಕದಿಂದ ಈ ಸಮಸ್ಯೆ ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆಯಾಗುವುದಿಲ್ಲ, ಸ್ಪರ್ಶ, ಲಾಲಾರಸ್, ರಕ್ತ, ಗಾಳಿ, ಲೈಂಗಿಕ ಸಂಪರ್ಕ ಅಥವಾ ವಯಕ್ತಿಕ ವಸ್ತುಗಳನ್ನು ಬದಲಾಯಿಸಿಕೊಳ್ಳುವುದರಿಂದ ಹರಡುವುದಿಲ್ಲ ಎಂದು ತಿಳಿಸಲಾಯಿತು.
ನಿಪಾಹ್ ವೈರಸ್ ಆಯ್ತು, ಇದೀಗ ಸಾಂಕ್ರಾಮಿಕ ರೋಗಗಳ ಸರದಿ
ತೊನ್ನು ಚರ್ಮದ ರೋಗವಾಗಿದ್ದು ರೋಗಿಗಳ ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ, ಅವರು ಈ ಸ್ಥಿತಿಯಿಂದ ಖಿನ್ನತೆಗೆ ಹಾಗೂ ಕಳಂಕದ ಭಾವನೆ ಹೊಂದುತ್ತಾರೆ. ದುರಾದೃಷ್ಟವಶಾತ್ ಸಮಾಜವು ಭಿನ್ನವಾಗಿರುವ ಇತರರಂತೆ ತೊನ್ನಿನ ಸಮಸ್ಯೆಯುಳ್ಳವರನ್ನೂ ಕಾಣುತ್ತದೆ.
ತೊನ್ನಿನ ಸಮಸ್ಯೆಯುಳ್ಳವರನ್ನು ಪಿಸುಮಾತಿನ ಟೀಕೆ, ವಿರೋಧ, ಅವಮಾನ ಅಥವಾ ಪ್ರತ್ಯೇಕತೆಗೆ ಒಳಪಡಿಸಲಾಗುತ್ತದೆ. ಈ ರೋಗದ ಗಂಭೀರ ಸ್ಥಿತಿ, ದೀರ್ಘಾವಧಿ ಚಿಕಿತ್ಸೆ, ಸಮಾನ ಹಾಗೂ ಪರಿಣಾಮಕಾರಿ ಚಿಕಿತ್ಸೆಯ ಅಲಭ್ಯತೆ ಮತ್ತು ರೋಗದ ಅನಿರೀಕ್ಷಿತತೆ ತೊನ್ನಿನಿಂದ ಬಳಲುತ್ತಿರುವ ರೋಗಿಗಳನ್ನು ಧೃತಿಗೆಡಿಸುತ್ತದೆ.
ಈ ಅಭಿಯಾನವನ್ನು ಬೆಂಗಳೂರು ಡರ್ಮಟಾಲಜಿಕಲ್ ಸೊಸೈಟಿ ವಿಶ್ವ ತೊನ್ನು ದಿನದ ಅಂಗವಾಗಿ ಆಯೋಜಿಸಿದ್ದು ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯಿತು. ನಗರದ ಪ್ರಮುಖ ಸ್ಥಳಗಳಲ್ಲಿ ವಿಟಿಲಿಗೊ ರಥವನ್ನು ನಿಲ್ಲಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಇದರೊಂದಿಗೆ ರಾಜಗುರು ಹೊಸಕೋಟೆ ಅವರ ತಂಡದಿಂದ ತೊನ್ನು ಕುರಿತಾದ ಜಾಗೃತಿಗಾಗಿ ಲಾಲ್ಬಾಗ್, ವಿಕ್ಟೋರಿಯಾ ಆಸ್ಪತ್ರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಗರ ರೈಲು ನಿಲ್ದಾಣ, ಓರಿಯನ್ ಮತ್ತು ಮಂತ್ರಿ ಮಾಲ್ಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.