ಸಿಡಿ ಪ್ರಕರಣ: 70 ಸಿಸಿಟಿವಿ ದೃಶ್ಯ ಎಸ್ಐಟಿಗೆ ನೀಡಿದ ಸುಳಿವು ಏನು ?
ಬೆಂಗಳೂರು, ಮಾರ್ಚ್ 15: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎನ್ನಲಾದ ಯುವತಿಯ ಲವರ್ ಬಾಯ್ ಎಸ್ಐಟಿ ವಶದಲ್ಲಿದ್ದಾನೆ. ಸಿಡಿಯಲ್ಲಿ ಅಶ್ಲೀಲವಾಗಿ ಕಾಣಿಸಿಕೊಂಡಿರುವ ಯುವತಿಯ ಪ್ರೇಮಿ ಎಂದು ಹೇಳಲಾಗುತ್ತಿದೆ. ಸಿಡಿ ಸ್ಫೋಟಕ್ಕೂ ಮೊದಲು ಈತನ ಜಾಡು ಹಿಡಿದು ವಿಶೇಷ ತನಿಖಾ ತಂಡ 70 ಸಿಸಿಟಿವಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಮಹತ್ವದ ಸುಳಿವು ಸಂಗ್ರಹಿಸಿದೆ. ಇನ್ನು ಮದುವೆಯಾಗಲು ಹೊರಟಿದ್ದ ಲವರ್ ತನ್ನ ಭಾವಿ ಸಂಗಾತಿಯನ್ನು ಒಪ್ಪಿಸಿಯೇ "ಸಿಡಿ ಅಖಾಡಕ್ಕೆ" ಇಳಿಸಿದನೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಮಾ. 2 ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟಗೊಳ್ಳುತ್ತಿದ್ದಂತೆ ಇಡೀ ರಾಜ್ಯ ರಾಜಕಾರಣದಲ್ಲೇ ಸಂಚನಲ ಮೂಡಿಸಿತ್ತು. ನಂದು ಆಗಿರಬಹುದು, ನಂದು ಸಿಡಿ ಇರಬಹುದು ಎಂದು ಕೆಲವು ಸಚಿವರು ನ್ಯಾಯಾಲಯದ ಕದ ತಟ್ಟಿ ತಡೆಯಾಜ್ಞೆ ಪಡೆದರು. ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಸಂತ್ರಸ್ತೆ ಎನ್ನಲಾದ ಯುವತಿಯ ಸಂಭಾಷಣೆ ಶೈಲಿ ಹಾಗೂ ಮಾತು "ಹನಿ ಟ್ರ್ಯಾಪ್ ಖೆಡ್ಡಾ" ಎಂಬ ಸಂಶಯ ಹುಟ್ಟಿ ಹಾಕಿತ್ತು.
ಸಿಡಿ ಗರ್ಲ್ ಹೇಳಿಕೆ ಎಸ್ಐಟಿಗೆ ಈಗ ಮಹತ್ವವಾಗಿಲ್ಲ ಯಾಕೆ?
ಇದರ ಬೆನ್ನಲ್ಲೇ ಪ್ರಕರಣ ನಾನಾ ಆಯಾಮ ಪಡೆದುಕೊಂಡಿತು. ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಿ ಸರ್ಕಾರ ಆದೇಶಿಸಿತು. ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು ಅದಾಗಲೇ ಪ್ರಕರಣ ಸಂಬಂಧ ಕೆಲವು ಅಚ್ಚರಿ ಮಾಹಿತಿಯನ್ನು ಕಲೆ ಹಾಕಿದ್ದರು. ಎಸ್ಐಟಿ ರಚನೆಯಾದ ದಿನವೇ ಸಿಡಿ ಗರ್ಲ್ ಪ್ರಿಯಕರ ಅಕಾಶ್ ನನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಅಕಾಶ್ ನೀಡಿದ ಹೇಳಿಕೆ ಆಧಾರದ ಮೇಲೆ ಬರೋಬ್ಬರಿ 70 ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಎಸ್ಐಟಿ ತಂಡ ಅನ್ವೇಷಣೆ ಮಾಡುತ್ತಿದೆ. ಅದರಲ್ಲಿ ಪ್ರಮುಖ ಸಾಕ್ಷಾಧಾರಗಳು ದೊರೆತಿವೆ ಎನ್ನಲಾಗಿದೆ. ಸಿಡಿ ಸ್ಪೋಟಕ್ಕೂ ಮೊದಲು ಅಕಾಶ್ ಕೆಲವು ಪತ್ರಕರ್ತರನ್ನು ಸಂಪರ್ಕಿಸಿದ್ದಾನೆ. ಆರ್.ಟಿ.ನಗರ , ಓರಾಯನ್ ಮಾಲ್, ಯಶವಂತಪುರ ಸುತ್ತಮುತ್ತ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸದ್ಯ ಕಿಂಗ್ ಪಿನ್ ಆರೋಪ ಹೊತ್ತಿರುವ ಪತ್ರಕರ್ತರನ್ನು ಭೇಟಿ ಮಾಡಿರುವ ದೃಶ್ಯಗಳು ಸಿಕ್ಕಿವೆ. ಇನ್ನು ಎಲ್ಲಾ ಕರೆಗಳನ್ನು ವಾಟ್ಸಪ್ ಮೂಲಕ ಮಾಡಿದ್ದು, ಆಟೋದಲ್ಲಿ ಸಂಚಾರ ಮಡಿರುವ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸಿಡಿ ಬಿಡುಗಡೆಗೆ ನಡೆಸಿದ ಪ್ಲಾನ್ ಭಾಗವಾಗಿ ಭೇಟಿ ಯಾಗಿದ್ದರೇ ? ಎಂಬುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಎಸ್ಐಟಿ ನಿರತವಾಗಿದೆ.
Recommended Video
ಇನ್ನು ಸಿಡಿ ಹಸ್ತಾಂತರ, ಪೊಲೀಸ್ ಆಯುಕ್ತರಿಗೆ ದೂರು ನೀಡುವುದು ಪ್ಲಾನ್ ನ ಒಂದು ಭಾಗವಾಗಿತ್ತು ಎಂಬ ಸಂಗತಿಯನ್ನು ಈಗಾಗಲೇ ಎಸ್ಐಟಿ ವಿಚಾರಣೆಗೆ ಒಳಗಾದ ಶಂಕಿತ ಆರೋಪಿಗಳು ಹೇಳಿಕೆ ದಾಖಲಿಸಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ನಿಜವಾಗಿಯೂ ಯುವತಿಯನ್ನು ದುರ್ಬಳಕೆ ಮಾಡಿಕೊಂಡು ಮೋಸ ಮಾಡಿದರೇ ? ಇಲ್ಲವೇ ಯುವತಿ ಮೂಲಕ ಜಾರಕಿಹೊಳಿಗೆ ಖೆಡ್ಡಾ ತೋಡಲಾಗಿತ್ತಾ ? ಎಂಬುದರ ಬಗ್ಗೆ ಪ್ರಮುಖ ಸಾಕ್ಷ್ಯಾಧಾರಗಳ ಸಂಗ್ರಹ ಕಾರ್ಯದಲ್ಲಿ ಎಸ್ಐಟಿ ನಿರತವಾಗಿದೆ. ಈಗಾಗಲೇ ಎಸ್ಐಟಿ ವಿಚಾರಣೆಗೆ ಒಳಪಟ್ಟಿರುವ ಐವರ ಪ್ರತ್ಯೇಕ ಹೇಳಿಕೆ ಪಡೆಯುತ್ತಿದ್ದು, ಒಬ್ಬೊಬ್ಬರು ಒಂದೊಂದು ಕಥೆ ಕಟ್ಟಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಎಲ್ಲರ ಹೇಳಿಕೆ ಆಧರಿಸಿ ಎಸ್ಐಟಿ ಸಿಡಿ ಕಾರ್ಯಾಚರಣೆ ಕುರಿತು ಮತ್ತಷ್ಟು ಸಾಕ್ಷಾಧಾರ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.