ಬೆಂಗಳೂರು ಕೆರೆಗಳ ಬಗ್ಗೆ ತಾತ್ಸಾರ ಬೇಡ: ರಾಜೀವ್ ಚಂದ್ರಶೇಖರ್
ಬೆಂಗಳೂರಿನ ಕೆರೆಗಳ ಬಗ್ಗೆ ಎಚ್ಚರ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಆಗ್ರಹ. ಬೆಂಗಳೂರಿನಲ್ಲಿ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ರಾಜೀವ್ ಚಂದ್ರಶೇಖರ್ ಹೇಳಿಕೆ.
ಬೆಂಗಳೂರು, ಆಗಸ್ಟ್ 16: ರಾಜಧಾನಿಯಲ್ಲಿ ಕೆರೆಗಳ ಬಗ್ಗೆ, ರಾಜಕಾಲುವೆ ಬಗ್ಗೆ ರಾಜ್ಯ ಸರ್ಕಾರ ವಹಿಸುತ್ತಿರುವ ತಾತ್ಸಾರ ಇನ್ನಾದರೂ ನಿಲ್ಲಬೇಕೆಂದು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಆಗಸ್ಟ್ 14ರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಕೋರಮಂಗಲ ಮತ್ತಿತರ ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆಗಸ್ಟ್ 15ರಂದು ಆ ಪ್ರದೇಶಗಳ ರಸ್ತೆಗಳಲ್ಲಿ ಹಾಗೂ ಮನೆಗಳಲ್ಲಿ 3ರಿಂದ 5 ಅಡಿಗಳವರೆಗಿನ ನೀರನ್ನು ಹೊರಹಾಕಲು ಭಾರೀ ಪ್ರಯಾಸ ಪಡಬೇಕಾಯಿತು.

ಈ ಹಿನ್ನೆಲೆಯಲ್ಲಿ, ಮಳೆ ಬಾಧಿತ ಪ್ರದೇಶಗಳಿಗೆ ರಾಜೀವ್ ಚಂದ್ರಶೇಖರ್ ಅವರು ತಮ್ಮ ಸಮಾಜಸೇವಾ ಸಂಸ್ಥೆಯಾದ ಯುನೈಟೆಡ್ ಬೆಂಗಳೂರು ಸದಸ್ಯರೊಂದಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಕೋರಮಂಗಲ, ಶಾಂತಿ ನಗರ ಮುಂತಾದ ಕಡೆಗಳಲ್ಲಿ ಮಳೆ ನೀರು ನುಗ್ಗಿದ್ದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದಾಗಿ, ಕುಡಿಯುವ ನೀರಿನೊಂದಿಗೆ ಮಳೆ ನೀರೂ ಸೇರಿಕೊಂಡಿರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ಆದಷ್ಟೂ ನಿವಾರಿಸಬೇಕು'' ಎಂದರು.
''ಕೆರೆಗಳನ್ನು ಮುಚ್ಚುತ್ತಿರುವುದರಿಂದ, ರಾಜಾ ಕಾಲುವೆಗಳನ್ನು ಅತಿಕ್ರಮಿಸುತ್ತಿರುವುದರಿಂದ ಮಳೆಗಾಲದಲ್ಲಿ ಜನರು ಕೆಟ್ಟ ಪರಿಸ್ಥಿತಿ ಒಳಗಾಗುವ ಪ್ರಸಂಗಗಳು ಪದೇ ಪದೇ ಘಟಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಇಂಥ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ, ಪರಿಸ್ಥಿತಿಗಳ ಘೋರತೆಯು ರಾಚುತ್ತಿದ್ದರೂ ರಾಜ್ಯ ಸರ್ಕಾರ ಸುಮ್ಮನಿರುವುದು ವಿಪರ್ಯಾಸ. ತೆರಿಗೆದಾರರು ತೆರಿಗೆ ಹಣದಲ್ಲಿ ಅವರಿಗೆ ಉತ್ತಮ ಸೌಲಭ್ಯಗಳನ್ನು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ'' ಎಂದು ತಿಳಿಸಿದರು.












Click it and Unblock the Notifications