ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡ್ರಾ ಅನರ್ಹ ಶಾಸಕ ಮುನಿರತ್ನ?
ಬೆಂಗಳೂರು, ಆ. 30: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ತಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕೊಡ್ಡಿದವರಲ್ಲಿ ಅನರ್ಹ ಶಾಸಕ ಮುನಿರತ್ನ ಕೂಡ ಒಬ್ಬರು. 17 ಜನರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದರೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿತ್ತು. ಆದರೆ ಬದಲಾದ ಬೆಳವಣಿಗೆಯಲ್ಲಿ ರಾಜೀನಾಮೆ ಕೊಟ್ಟಿದ್ದ ಎಲ್ಲರ ರಾಜಕೀಯ ಭವಿಷ್ಯ ಅತಂತ್ರವಾಗಿತ್ತು. ನಂತರ ಅವರಲ್ಲಿ 14 ಜನರು ಶಾಸಕರಾಗುವ ಮೂಲಕ ಅನರ್ಹತೆ ಪಟ್ಟದಿಂದ ಮುಕ್ತಿ ಪಡೆದರು. ಅವರಲ್ಲಿ ಕೆಲವರು ಮಂತ್ರಿಯೂ ಆಗಿದ್ದಾರೆ.
Recommended Video
ಆದರೆ ರಾಜರಾಜೇಶ್ವರಿ ನಗರದ ಶಾಸಕರಾಗಿದ್ದ ಮುನಿರತ್ನ ಹಾಗೂ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಮಾತ್ರ ಇನ್ನೂ ಆ ಅದೃಷ್ಟ ಬಂದಿಲ್ಲ. ಇಬ್ಬರೂ ಇನ್ನು ಅನರ್ಹ ಶಾಸಕರಾಗಿಯೆ ಮುಂದುವರೆದಿದ್ದಾರೆ. ಇದಕ್ಕೆ ಕಾರಣ ಬಿಜೆಪಿ ಎಂಬುದೂ ಕೂಡ ಗಮನಿಸಬೇಕಾದ ಅಂಶ.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಗೆ ಕೊರೊನಾ ಸೋಂಕು
ಇದೇ ಸಂದರ್ಭದಲ್ಲಿ ಅನರ್ಹ ಶಾಸಕ ಮುನಿರತ್ನ ಅವರ ಟ್ವೀಟ್ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ತಮಗೆ ಕೊರೊನಾವೈರಸ್ ತಗುಲಿರುವುದನ್ನು ಟ್ವೀಟ್ ಮೂಲಕ ಅವರು ಬಹಿರಂಗಗೊಳಿಸಿದ್ದಾರೆ. ಅದರ ಜೊತೆಗೆ ಅವರ ಆ ಒಂದು ಮಾತು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ ಕೋವಿಡ್ ನೆಪದಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟರಾ? ಎಂಬ ಚರ್ಚೆ ಶುರುವಾಗಿದೆ.
ರಾಜಕಾರಣಿಗಳಿಗೆ ಕೋವಿಡ್
ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಹಾಲಿ ವಿಧಾನಸಭೆಯಲ್ಲಿ ಎಲ್ಲರಿಗಿಂತ ಹಿರಿಯ ಸದಸ್ಯ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರೂ ಕೊರೊನಾ ವೈರಸ್ನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಹೀಗಾಗಿ ಕೋವಿಡ್ ಮಾರಣಾಂತಿಕ ರೋಗವಲ್ಲ ಎಂಬುದು ಸಾಬೀತಾಗಿದೆ.
ಮುಂಜಾಗ್ರತೆ ತೆಗೆದು ಕೊಂಡರೆ ಅದೊಂದು ಸಣ್ಣ ಕಾಯಿಲೆಯಂತೆ ಕಾಡಿ ಸುಮ್ಮನಾಗುತ್ತದೆ. ಆದರೆ ಮುಂಜಾಗ್ರತೆ ಅತ್ಯಗತ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಹೇಳಿಕೆ ಕೊಟ್ಟಿದ್ದಾರೆ. ಆದರೆ ಮುನಿರತ್ನ ಅವರು ಕೋವಿಡ್ ಪಾಸಿಟಿವ್ ಎಂದು ಗೊತ್ತಾಗುತ್ತಿದ್ದಂತೆಯೆ ಮಾಡಿರುವ ಟ್ವೀಟ್ ಬಿಜೆಪಿಯಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ.
ನನ್ನನ್ನ ಕ್ಷಮಿಸಿ ಬಿಡಿ
ಆದ ಅನರ್ಹ ಶಾಸಕ ಮುನಿರತ್ನ ಅವರು ಮಾತ್ರ ಕೋವಿಡ್ ಪಾಸಿಟೀವ್ ಎಂದು ಗೊತ್ತಾಗುತ್ತಿದ್ದಂತೆಯೆ ಆರ್.ಆರ್. ನಗರದ ನಗರದ ಮತದಾರರು ಹಾಗೂ ಬೆಂಬಲಿಗರಿಗೆ ಅತ್ಯಂತ ಭಾರವಾದ ಮನಸ್ಸಿನೊಂದಿಗೆ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಹೀಗಿದೆ. 'ರಾಜರಾಜೇಶ್ವರಿ ನಗರದ ನನ್ನ ಎಲ್ಲಾ ಮತದಾರ ದೇವರುಗಳಿಗೆ ವಂದನೆಗಳು. 57 ವರ್ಷ ವಯಸ್ಸಿನವನಾದ ನಾನು ಇಂದು ಕೋವಿಡ್ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ.
ಕ್ಷೇಮವಾಗಿ ಬಂದರೆ ನಿಮ್ಮ ಸೇವೆ, ಇಲ್ಲದಿದ್ದರೆ ನನ್ನನ್ನ ಕ್ಷಮಿಸಿ ಬಿಡಿ. ಇಂತಿ ನಿಮ್ಮ ಸೇವಕ ಮುನಿರತ್ನ' ಎಂದು ಅಸಹಾಯಕರಂತೆ ಅವರು ಟ್ವೀಟ್ ಮಾಡಿದ್ದಾರೆ. ಮುಂಜಾಗ್ರತೆ ತೆಗೆದುಕೊಂಡರೆ ಕೊರೊನಾ ವೈರಸ್ ಗೆಲ್ಲುವುದು ಕಷ್ಟವಲ್ಲ ಎಂದು ಚೇತರಿಸಿಕೊಂಡಿರುವ ಸಿದ್ದರಾಮಯ್ಯ ಅವರೇ ಹೇಳಿಕೆ ಕೊಟ್ಟಿದ್ದಾರೆ. ಆದರೂ ಮುನಿರತ್ನ ಅವರು ಹೀಗೆ ಟ್ವೀಟ್ ಮಾಡಿರುವುದಕ್ಕೆ ಕಾರಣ ಬಿಜೆಪಿ ನಾಯಕರ ನಿರ್ಲಕ್ಷ ಕಾರಣ ಎನ್ನಲಾಗುತ್ತಿದೆ.
ಅನರ್ಹತೆಯ ಪಟ್ಟ
ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ಅವರು ಈವರೆಗೂ ಅನರ್ಹತೆ ಪಟ್ಟದಿಂದ ಮುಕ್ತಿಯಾಗದಿರಲು ಬಿಜೆಪಿಯೇ ಕಾರಣ. 2018 ಆರ್ಆರ್ ನಗರದಲ್ಲಿ ಸಿಕ್ಕಿದ್ದ ನಕಲಿ, ಅಸಲಿ ವೋಟರ್ ಐಡಿಗಳನ್ನು ಮುನಿರತ್ನ ಅವರೇ ತಯಾರಿಸಿ, ಅಕ್ರಮವಾಗಿ ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜುಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಈಗಲೂ ನಡೆಯುತ್ತಿದೆ.
ಹೀಗಾಗಿ ಆ ಪ್ರಕರಣ ಇನ್ನೂ ಮುಗಿಯದೇ ಇರುವುದರಿಂದ ಆರ್ಆರ್ ನಗರ ಚುನಾವಣೆ ಇನ್ನೂ ನಡೆದಿಲ್ಲ. ತುಳಸಿ ಮುನಿರಾಜು ಹಾಗೂ ಮುನಿರತ್ನ ಅವರ ಮಧ್ಯೆ ಸಂಧಾನ ಮಾಡಿಸುವಲ್ಲಿ ರಾಜ್ಯ ಬಿಜೆಪಿಯ ನಾಯಕರಿಂದ ಸಾಧ್ಯವಾಗಿಲ್ಲ. ಹೀಗಾಗಿ ಅನರ್ಹ ಶಾಸಕ ಮುನಿರತ್ನ ಅವರು ಅತಂತ್ರರಾಗಿದ್ದಾರೆ. ಇದರಿಂದಾಗಿಯೇ ಅವರು ಕೋವಿಡ್ ಸೋಂಕು ತಗುಲಿದ ಸಂದರ್ಭದಲ್ಲಿ ಮನನೊಂದು ಹಾಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಶಾಸಕ ಸ್ಥಾನ ಹೋಯ್ತು, ಚುನಾವಣೆಯೂ ಇಲ್ಲ
ಬಿಜೆಪಿ ಪಕ್ಷದವರು ದಾಖಲಿಸಿರುವ ಪ್ರಕರಣಗಳಿಂದಲೇ ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್ ಹಾಗೂ ಬೆಂಗಳೂರಿನ ಆರ್.ಆರ್. ನಗರದ ಶಾಸಕರಾಗಿದ್ದ ಮುನಿರತ್ನ ಅವರು ಅನರ್ಹತೆ ಪಟ್ಟದಿಂದ ಮುಕ್ತರಾಗಲು ಸಾಧ್ಯವಾಗಿಲ್ಲ.
ಮೈತ್ರಿ ಸರ್ಕಾರದ ಪತನಗೊಳಿಸಿದ ಆರೋಪ ಒಂದೆಡೆ ಕಾಡುತ್ತಿದೆ. ಮತ್ತೊಂದೆಡೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಇವರ ರಾಜೀನಾಮೆ ಕಾರಣವಾದರೂ ಬಿಜೆಪಿಯವರಿಂದಲೇ ಅನರ್ಹತೆಯಿಂದ ಮುಕ್ತರಾಗಲು ಆಗುತ್ತಿಲ್ಲ. ಹೀಗಾಗಿ ಮುನಿರತ್ನ ಅವರು ಮನನೊಂದಿದ್ದಾರೆ. ಹೀಗಾಗಿಯೇ ಕ್ಷೇಮವಾಗಿ ಬಂದರೆ ನಿಮ್ಮ ಸೇವೆ, ಇಲ್ಲದಿದ್ದರೆ ನನ್ನನ್ನ ಕ್ಷಮಿಸಿ ಬಿಡಿ ಎಂದು ಟ್ವೀಟ್ ಮಾಡಿದ್ದಾರೆ. ಅದು ರಾಜ್ಯ ಬಿಜೆಪಿ ನಾಯಕರಿಗೆ ಕೊಟ್ಟಿರುವ ಪರೋಕ್ಷ ಎಚ್ಚರಿಕೆಯೂ ಆಗಿರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.