ಇಲಿಕುಟ್ಟಿ ಎಂಬ ಕಿರಾತಕನ ಕಾಲಿಗೆ ಗುಂಡೇಟು !
ಬೆಂಗಳೂರು, ಫೆಬ್ರವರಿ 09: ಬಿಎಸ್ ಪಿ ಪಕ್ಷದ ಮುಖಂಡನ ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂತೋಷ್ ಕುಮಾರ್ ಅಲಿಯಾಸ್ ಇಲಿಕುಟ್ಟಿ ಬಂಧಿತ ಆರೋಪಿ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎಸ್ಪಿ ಪಕ್ಷದ ಮುಖಂಡ ಶ್ರೀನಿವಾಸ್ ಕೊಲೆಯಾಗಿತ್ತು. ಈ ಪ್ರಕರಣದ ಆರೋಪಿಗಳ ಪತ್ತೆಕಾರ್ಯದಲ್ಲಿ ತೊಡಗಿದ್ದ ರಾಜಗೋಪಾಲನಗರ ಪೊಲೀಸರಿಗೆ ಸಂತೋಷ್ ಬಗ್ಗೆ ಮಾಹಿತಿ ಸಿಕ್ಕಿತ್ತು.
ಖಚಿತ ಮಾಹಿತಿ ಆಧರಿಸಿ ಬೆಳಗಿನ ಜಾವ ಪಿಎಸ್ ಐ ಹನುಮಂತ ಹಾದಿಮನಿ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ತೆರಳಿದ್ದರು. ಜಿ.ಕೆ.ಡಬ್ಲೂ ಲೇಔಟ್ ಬಳಿ ಸಂತೋಷ್ ಅಲಿಯಾಸ್ ಇಲಿಕುಟ್ಟಿ ಇರುವುದನ್ನು ಖಚಿತಪಡಿಸಿಕೊಂಡು, ಬಂಧನಕ್ಕೆ ತೆರಳಿದಾಗ ಲಾಂಗಿನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
Recommended Video
ಮುಖ್ಯ ಪೇದೆ ಸಿದ್ದರಾಮು ಅವರ ಕೈಗೆ ಲಾಂಗ್ ನಿಂದ ಇಲಿಕುಟ್ಟಿ ದಾಳಿ ನಡೆಸಿದ್ದು, ಆತ್ಮ ರಕ್ಷಣೆಗಾಗಿ ಪಿಎಸ್ಐ ಹನುಮಂತು ಗುಂಡು ಹಾರಿಸಿದ್ದಾರೆ. ಆರೋಪಿ ಸಂತೋಷ್ ನ ಕಾಲಿಗೆ ಪೆಟ್ಟಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸಂತೋಷ್ ಅಲಿಯಾಸ್ ಇಲಿಕುಟ್ಟಿ ಮೇಲೆ ನಂದಿನಿ ಬಡಾವಣೆ, ಮಹಾಲಕ್ಷ್ಮೀ ಲೇಔಟ್, ಬ್ಯಾಡರಹಳ್ಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.