ಬೆಂಗಳೂರಿನ ಭಾರೀ ಪ್ರವಾಹಕ್ಕೆ ಟೆಕ್ ಪಾರ್ಕ್ಗಳು ಕಾರಣವೇ?
ಬೆಂಗಳೂರು, ಸೆ.11: ಕಳೆದ ವಾರದ ಪ್ರವಾಹದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆರೆಗಳು ಮತ್ತು ಮಳೆನೀರು ಚರಂಡಿಗಳ ಅತಿಕ್ರಮಣಗಳನ್ನು ತೆಗೆದುಹಾಕಲು ಬಿಬಿಎಂಪಿ ಚಾಲನೆಯನ್ನೇನೋ ನೀಡಿದೆ. ಆದರೆ ಪ್ರವಾಹದ ನೀರಿನ ಹರಿವನ್ನು ತಡೆಯುತ್ತಿವೆ ಎಂದು ಹೇಳಲಾಗುತ್ತಿರುವ ಹಲವು ಟೆಕ್ ಪಾರ್ಕ್ಗಳ ವಿರುದ್ಧ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಆಗ್ನೇಯ ಬೆಂಗಳೂರಿನ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಉದ್ದಕ್ಕೂ ನಿರ್ಮಾಣವಾಗಿರುವ ಕೆರೆಗಳು ಮತ್ತು ಮಳೆನೀರು ಚರಂಡಿಗಳ ಮೇಲಿನ ಅಕ್ರಮ ಕಟ್ಟಡಗಳು ಪ್ರವಾಹಕ್ಕೆ ಕಾರಣವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
Recommended Video
ಸ್ಥಳೀಯ ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಐಟಿ ಸಂಸ್ಥೆಗಳು ಪ್ರವಾಹಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಿದ್ದರು. "ನಗರದಲ್ಲಿರುವ 79 ಟೆಕ್ ಪಾರ್ಕ್ಗಳಲ್ಲಿ 63 ಔಟರ್ ರಿಂಗ್ ರೋಡ್ನಲ್ಲಿವೆ. ಪ್ರವಾಹಕ್ಕೆ ಒಳಗಾದ ಹೆಚ್ಚಿನ ಪ್ರದೇಶಗಳು ಟೆಕ್ ಪಾರ್ಕ್ಗಳು ಅಥವಾ ಅಪಾರ್ಟ್ಮೆಂಟ್ ಸಂಕೀರ್ಣಗಳಿಂದ ಜನನಿಬಿಡವಾಗಿದ್ದವು. ಅವರೇ ಪ್ರಮುಖ ಅತಿಕ್ರಮಣದಾರರು ಎಂಬುದು ಸ್ಪಷ್ಟವಾಗಿಲ್ಲವೇ" ಎಂದು ಆರೋಪಿಸಿದ್ದಾರೆ.

696 ಅತಿಕ್ರಮಣಗಳನ್ನು ಗುರುತಿಸಿದ ಬಿಬಿಎಂಪಿ
ಟೆಕ್ ಪಾರ್ಕ್ಗಳು ಪ್ರವಾಹಕ್ಕೆ ಪ್ರಮುಖ ಕಾರಣ ಎಂಬುದನ್ನು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಒಪ್ಪಿದ್ದು, ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಅನೇಕ ಸ್ಥಳಗಳಲ್ಲಿ ಚರಂಡಿಗಳು ಅವುಗಳ ಮೂಲ ಅಗಲದ 20% ಕ್ಕಿಂತ ಕಡಿಮೆಯಿವೆ. ಇದು ಅವುಗಳು ನೀರು ಸಾಗಿಸುವ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ರಸ್ತೆಗಳು ಜಲಾವೃತವಾಗಿವೆ ಎಂದಿದ್ದಾರೆ.
ಬಿಬಿಎಂಪಿಯು ಇವರೆಗೆ 696 ಅತಿಕ್ರಮಣಗಳನ್ನು ಗುರುತಿಸಿದ್ದು, ಬಹುಪಾಲು ಸ್ಪಷ್ಟವಾದವುಗಳಾಗಿವೆ. ಈ ತಿಂಗಳ ಮೊದಲ ಒಂಬತ್ತು ದಿನಗಳಲ್ಲಿ 34 ಸ್ಥಳಗಳಲ್ಲಿ 21,963.82 ಚದರ ಅಡಿ ಅತಿಕ್ರಮಣಗಳನ್ನು ತೆಗೆದುಹಾಕಲಾಗಿದೆ. ಅವುಗಳಲ್ಲಿ ಬಹುತೇಕವಾಗಿ ಕಾಂಪೌಂಡ್ ಗೋಡೆಗಳು ಅಥವಾ ಖಾಲಿ ಜಮೀನುಗಳಲ್ಲಿ ನಿರ್ಮಿಸಲಾದ ಶೆಡ್ಗಳು. ಈ ಪೈಕಿ ಹದಿನಾಲ್ಕು ಸ್ಥಳಗಳು ಐಟಿ ಕಾರಿಡಾರ್ ಪ್ರದೇಶಗಳನ್ನು ಒಳಗೊಂಡಿರುವ ಮಹದೇವಪುರ ವಲಯದಲ್ಲಿವೆ.

ಕ್ರಮ ಕೈಗೊಳ್ಳಲು ರಾಜಕೀಯ ಒತ್ತಡ ಹೆಚ್ಚು!
ಇನ್ನು ಸ್ಪಷ್ಟವಾಗಿ ಟೆಕ್ ಪಾರ್ಕ್ಗಳು ಕಾರಣ ಎಂದು ಹೇಳುತ್ತಿದ್ದರು ಇವುಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದರೆ, ಅಧಿಕಾರಿಗಳು ರಾಜಕೀಯ ಒತ್ತಡದ ಸುಳಿವು ನೀಡಿದರು. "ನಾವು ಸ್ಪಷ್ಟವಾದ ಅತಿಕ್ರಮಣಗಳನ್ನು ಮಾತ್ರ ಗುರುತಿಸಿದ್ದೇವೆ. ಔಟರ್ ರಿಂಗ್ ರೋಡ್ನಲ್ಲಿ ತುಂಬಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಪರಿಗಣಿಸಿದರೆ, ಟೆಕ್ ಪಾರ್ಕ್ಗಳು ಮತ್ತು ಐಟಿ ಸಂಸ್ಥೆಗಳ ಒಳಗೆ ಇನ್ನೂ ಅನೇಕ ಸಣ್ಣ ಚರಂಡಿಗಳು ಅತಿಕ್ರಮಣಗೊಂಡಿವೆ ಎಂದು ನಮಗೆ ಖಚಿತವಾಗಿದೆ. ಆದರೆ ಗ್ರಾಮ ನಕ್ಷೆಗಳು ಮತ್ತು ಕಂದಾಯ ಅಧಿಕಾರಿಗಳ ತಪಾಸಣೆ ಇಲ್ಲದೆ, ಅವುಗಳನ್ನು ಗುರುತಿಸುವುದು ಅಸಾಧ್ಯವಾಗಿದೆ" ಎಂದು ಹೆಸರು ಹೇಳಲು ಇಚ್ಚಿಸದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳ ನಕ್ಷೆಯೊಂದಿಗೆ ಸ್ಥಳ ಪರಿಶೀಲನೆ
'ಸ್ಥಳಗಳನ್ನು ನಕ್ಷೆಗಳೊಂದಿಗೆ ಕ್ರಾಸ್ ವೆರಿಫೈ ಮಾಡಿ ನಿಖರವಾಗಿ ಗುರುತಿಸಬೇಕಾಗಿರುವುದರಿಂದ ಸಮೀಕ್ಷೆ ಮತ್ತು ಅತಿಕ್ರಮಣಗಳನ್ನು ಗುರುತಿಸುವುದು ಬೇಸರದ ಪ್ರಕ್ರಿಯೆಯಾಗಿದೆ. ಜೊತೆಗೆ ರಾಜಕೀಯ ಒತ್ತಡ ಮತ್ತೊಂದು ಅಂಶ. ಹೆಚ್ಚಿನ ಐಟಿ ಕಂಪನಿಗಳು ಪ್ರಭಾವಿ ವ್ಯಕ್ತಿಗಳ ಒಡೆತನದ ಟೆಕ್ ಪಾರ್ಕ್ಗಳಲ್ಲಿ ಕಚೇರಿ ಸ್ಥಳವನ್ನು ಮಾತ್ರ ಬಾಡಿಗೆಗೆ ನೀಡುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇಂತಹ ಸಂದರ್ಭಗಳಲ್ಲಿ ಕ್ರಮವನ್ನು ತೆಗೆದುಕೊಳ್ಳುವುದು ಸುಲಭವಲ್ಲ" ಎಂದು ಅಧಿಕಾರಿ ತಿಳಿಸಿದ್ದಾರೆ.

ಯಾವುದೇ ಅಕ್ರಮ ಕಟ್ಟಡವಿದ್ದರೂ ತೆರುವು
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕಟ್ಟಡವನ್ನು ಲೆಕ್ಕಿಸದೆ ಎಲ್ಲಾ ಅತಿಕ್ರಮಣಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. "ಟೆಕ್ ಕಂಪನಿಗಳು, ತಂತ್ರಜ್ಞಾನೇತರ ಕಂಪನಿಗಳು, ವೈಯಕ್ತಿಕ ಮನೆಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಮಳೆನೀರಿನ ಚರಂಡಿಗಳನ್ನು ಅತಿಕ್ರಮಿಸಿದ ಅನೇಕ ಕಟ್ಟಡಗಳು ಇರಬಹುದು. ಯಾವುದೇ ರೀತಿಯ ಕಟ್ಟಡವಿದ್ದರೂ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸಲಾಗುವುದು' ಎಂದು ಹೇಳಿದ್ದಾರೆ.
ಇತ್ತ, ಮಳೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಸಚಿವ ಅಶ್ವಥ್ ನಾರಾಯಣ್ ಅವರು ಕರೆದ ಸಭೆಯಲ್ಲಿ, ಹಲವಾರು ಐಟಿ ಕಂಪನಿಗಳ ಪ್ರತಿನಿಧಿಗಳು ತಾವು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಆಗಿರುವ ನಷ್ಟವನ್ನು ಹೇಳಿಕೊಂಡಿದ್ದಾರೆ. ಮುಂದಿನ ವರ್ಷದ ವೇಳೆಗೆ ಮಹದೇವಪುರ ವಲಯದಲ್ಲಿನ ಮೂಲಸೌಕರ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ನೆರವಾಗಲಿದೆ ಎಂದು ಸಚಿವ ಭರವಸೆ ನೀಡಿದ್ದಾರೆ.












Click it and Unblock the Notifications