ರೈಲ್ವೇ ಪೊಲೀಸರ ಕಾರ್ಯಾಚರಣೆ: ಹಲ್ಲೆ ಪ್ರಕರಣದಲ್ಲಿ 9 ಮಂದಿ ಸೆರೆ
ಬೆಂಗಳೂರು, ಫೆ. 14: ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಚುಚ್ಚಿ ರೈಲ್ವೇ ಹಳಿ ಮೇಲೆ ಬಿಸಾಡಿ ಅಪಘಾತ ಎಂದು ಬಿಂಬಿಸಲು ಪ್ರಯತ್ನಿದ್ದ ಮೂವರು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ಸೇರಿ ಆರು ಮಂದಿ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಆರು ಮಂದಿ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದರು. ಗಣಪತಿ ನಗರದ ಸಮೀಪದ ರೈಲ್ವೇ ಹಳಿ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಜ. 30 ರಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಅದರಲ್ಲಿ ಮೂವರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರಾಗಿದ್ದು, ಅವರನ್ನು ಬಾಲಾಪರಾಧಿಗಳ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಲಾಗಿದೆ.
ಮೊಬೈಲ್ ರಾಬರಿ ಗ್ಯಾಂಗ್ ಅರೆಸ್ಟ್: ಮತ್ತೊಂದು ಪ್ರಕರಣದಲ್ಲಿ ನಾಯಂಡಹಳ್ಳಿ ಸಮೀಪ ವ್ಯಕ್ತಿಯನ್ನು ಅಡ್ಡ ಗಟ್ಟಿ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಮೂವರನ್ನು ಬೆಂಗಳೂರು ನಗರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರಿಗಾಗಿ ಶೋಧ ನಡೆಸಲಾಗುತ್ತಿದೆ.

ರಾತ್ರಿ ವೇಳೆ ರೈಲ್ವೇ ಹಳಿ ದಾಟುವಾಗ, ಇಲ್ಲವೇ ರೈಲಿನ ಬಾಗಿಲಿನಲ್ಲಿ ಸಂಚರಿಸುವರಿಗೆ ಕಲ್ಲು ಹೊಡೆದು ಮೊಬೈಲ್ ದೋಚುವ ದಂಧೆ ಮೊದಲಿನಿಂದಲೂ ಬೆಂಗಳೂರಿನಲ್ಲಿ ತಳವೂರಿದೆ. ರೈಲು ಸಂಚರಿಸುವಾಗ ಕಲ್ಲು ಹೊಡೆದು ಅನೇಕರಿಗೆ ಗಾಯಗಳಾಗಿವೆ. ಅದೇ ರೀತಿ ನಾಯಂಡಹಳ್ಳಿ ರೈಲ್ವೇ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಜಲ್ಲಿ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಆ ಬಳಿಕ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ನಗರ ರೈಲ್ವೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ಎರಡೂ ಪ್ರಕರಣವನ್ನು ಎಸ್ಪಿ ಸಿರಿಗೌರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ.












Click it and Unblock the Notifications