ವೇಗ ಪಡೆದ ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ರೈಲ್ವೆ ಕಾಮಗಾರಿ
ಬೆಂಗಳೂರು, ಮೇ 14: 48 ಕಿಲೋ ಮೀಟರ್ ಉದ್ದದ ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ರೈಲ್ವೆ ಕಾಮಗಾರಿ ವೇಗ ಪಡೆದುಕೊಂಡಿದೆ. ಮುಂದಿನ ಮೂರು ತಿಂಗಳೊಳಗೆ 12 ಕಿಲೋ ಮೀಟರ್ ಉದ್ದದ ಕಾಮಗಾರಿ ಮುಗಿಸಲು ಕೆ-ರೈಡ್ ನಿರ್ಧಸಿದೆ. ಮಾರ್ಚ್ 2023ರ ವೇಳೆಗೆ ಬೈಯಪ್ಪನಹಳ್ಳಿ-ಬೆಳ್ಳಂದೂರು ಜಂಕ್ಷನ್ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ.
ಕರ್ನಾಟಕ ಸರ್ಕಾರ ಮತ್ತು ಕೇಂದ್ರದ ರೈಲ್ವೆ ಸಚಿವಾಲಯದ ಜಂಟಿ ಮಾಲೀಕತ್ವದ ರೈಲ್ ಇನ್ಫ್ರಾಸ್ಟ್ರೆಕ್ಷರ್ ಅಭಿವೃದ್ಧಿ ಕಂಪನಿ (ಕೆ-ರೈಡ್) ಎರಡು ವರ್ಷಗಳ ಹಿಂದೆ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಈಗ ಕಾಮಗಾರಿ ವೇಗ ದ್ವಿಗುಣಗೊಳಿಸಲು ನಿರ್ಧರಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ರೈಲುಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
"ಮುಂದಿನ ಮೂರು ತಿಂಗಳಲ್ಲಿ ಹೀಲಲಿಗೆ ಮತ್ತು ಕಾರ್ಮೆಲ್ರಾಮ್ ನಡುವಿನ 12 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಬೈಯಪ್ಪನಹಳ್ಳಿ-ಬೆಳ್ಳಂದೂರು ನಡುವಿನ ದ್ವಿಪಥ ರೈಲ್ವೆ ಕಾಮಗಾರಿ 2023ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುತ್ತದೆ, ಇನ್ನುಳಿದ ಕಾಮಗಾರಿಗಳು ಸಹ ನಿಗದಿತ ವೇಳೆಗೆ ಪೂರ್ಣಗೊಳಿಸಲಾಗುತ್ತದೆ" ಎಂದು ಕೆ-ರೈಡ್ ವ್ಯವಸ್ಥಾಪ ನಿರ್ದೇಶಕ ಅಮಿತ್ ಗಾರ್ಗ್ ಹೇಳಿದ್ದಾರೆ.
2024ರ ಅಂತ್ಯದ ವೇಳೆಗೆ ಸಂಪೂರ್ಣ ಕಾಮಗಾರಿ ಮುಗಿಸಿ ರೈಲು ಓಡಾಟಕ್ಕೆ ಅನುವು ಮಾಡಿಕೊಡಲು ಕೆ-ರೈಡ್ ನಿರ್ಧರಿಸಿದೆ. ರೈಲು ನಿಲ್ದಾಣ ಮತ್ತು ಫ್ಲಾಟ್ಫಾರಂ ನಿರ್ಮಾಣಕ್ಕಾಗಿ ಟೆಂಡರ್ ಕೂಡ ಆಹ್ವಾನಿಸಿದೆ. ಹುಸ್ಕೂರು ಬಳಿ ಇರುವ ಹಳೆಯ ರೈಲು ನಿಲ್ದಾಣವನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ.
ಹೊಸ ರೈಲು ನಿಲ್ದಾಣಗಳ ನಿರ್ಮಾಣ
ದೊಡ್ಡನೆಕ್ಕುಂದಿ, ಮುನ್ನೇಕೊಳಲ, ಹುಸ್ಕೂರು ರಸ್ತೆ ಮತ್ತು ಚಂದಾಪುರದಲ್ಲಿ ಐದು ಹೆಚ್ಚುವರಿ ರೈಲು ನಿಲ್ದಾಣ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಹೋರಾಟಗಾರರು ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದರು. ಹುಸ್ಕೂರು ರೈಲು ನಿಲ್ದಾಣ ಭಾರತೀಯ ರೈಲು ಜಾಲದ ಭಾಗವಾಗಿದ್ದು, ಬೆಂಗಳೂರು ಉಪನಗರ ರೈಲು ಯೋಜನೆಯ ಅಡಿಯಲ್ಲಿ ಹೊಸ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 20 ನಿಲ್ದಾಣಗಳನ್ನು ಒಳಗೊಂಡಿರುವ ಕಾರಿಡಾರ್-4ರಲ್ಲಿ ಪ್ರಾಥಮಿಕ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಯಡಿ ಉತ್ತರದಲ್ಲಿ ದೊಡ್ಡಬಳ್ಳಾಪುರ ಅಥವಾ ಗೌರಿಬಿದನೂರು ಮತ್ತು ದಕ್ಷಿಣದಲ್ಲಿ ಹೊಸೂರುವರೆಗೆ ಕಾರಿಡಾರ್ ಅನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ.
ಕಾಮಗಾರಿ ವಿಳಂಬಕ್ಕೆ ಕಾರಣ
ಕೇಂದ್ರ ಸರ್ಕಾರವು 2018 ರಲ್ಲಿ ದ್ವಿಪಥ ರೈಲ್ವೆ ಕಾಮಗಾರಿ ಯೋಜನೆಯನ್ನು ಮಂಜೂರು ಮಾಡಿತ್ತು. 2018-19ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಶೇಕಡಾ 50: 50 ಅನುಪಾತದ ವೆಚ್ಚ ಹಂಚಿಕೆ ಆಧಾರದಲ್ಲಿ ಈ ಮಾರ್ಗಗಳ ದ್ವಿಪಥ ಕಾಮಗಾರಿ ಯೋಜನೆಗೆ ಮಂಜೂರಾತಿ ಲಭಿಸಿತ್ತು. ಆದರೆ ಯೋಜನೆಗೆ ಹಣ ನೀಡುವ ಬಗ್ಗೆ ರಾಜ್ಯ ಸರ್ಕಾರದ ನಿಲುವು ಬದಲಿಸಿದ ಕಾರಣ ಕಾಮಗಾರಿ ವಿಳಂಬವಾಯಿತು.
ಉಪ ನಗರ ರೈಲು ಯೋಜನೆಯ ಮಾಹಿತಿ
ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. ಕಾರಿಡಾರ್-2 ಚಿಕ್ಕಬಾಣಾವರ-ಬೈಯಪ್ಪನಹಳ್ಳಿ ಮಾರ್ಗದ ಉದ್ದ 25.01 ಕಿ. ಮೀ. ಇದೆ. ಈ ಮಾರ್ಗದಲ್ಲಿ ಚಿಕ್ಕಬಾಣಾವರ, ಶೆಟ್ಟಿಹಳ್ಳಿ, ಜಾಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ನಾಗವಾರ, ಬಾಣಸವಾಡಿ, ಬೈಯಪ್ಪನಹಳ್ಳಿ ನಿಲ್ದಾಣಗಳಿವೆ.
ಉಳಿದಂತೆ ಕಾರಿಡಾರ್ 1 ಬೆಂಗಳೂರು ನಗರ-ದೇವನಹಳ್ಳಿ (41.40 ಕಿ. ಮೀ.), ಕಾರಿಡಾರ್-3 ಕೆಂಗೇರಿ-ಬೈಯಪ್ಪನಹಳ್ಳಿ ( 36.12 ಕಿ. ಮೀ). ಕಾರಿಡಾರ್-4 ಹೀಗಲಿಗೆ-ರಾಜಾನಕುಂಟೆ (46.24 ಕಿ. ಮೀ.) ಇದೆ. 2018ರಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಉಪ ನಗರ ರೈಲು ಯೋಜನೆ ಪ್ರಸ್ತಾವನೆ ಸಿದ್ಧಪಡಿಸಿತ್ತು. 23,093 ಕೋಟಿ ರೂ. ಯೋಜನೆ ಇದಾಗಿತ್ತು. ಬಳಿಕ ಯೋಜನೆ ವೆಚ್ಚವನ್ನು ಪರಿಷ್ಕರಣೆ ಮಾಡಲಾಯಿತು. ಪರಿಷ್ಕೃತ ಅಂದಾಜು ವೆಚ್ಚ 19,000 ಕೋಟಿ ರೂ.ಗಳು. ಇಡೀ ಉಪ ನಗರ ರೈಲು ಯೋಜನೆಯ ಕಾಮಗಾರಿ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಒಟ್ಟು 57 ನಿಲ್ದಾಣಗಳಿವೆ
ಒಟ್ಟು 103 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಒಟ್ಟು 57 ನಿಲ್ದಾಣಗಳಿವೆ. 2014ರ ರೈಲ್ವೆ ಬಜೆಟ್ನಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಪ್ರಸ್ತಾಪ ಮಾಡಲಾಯಿತು. 2017ರಲ್ಲಿ ರೈಲ್ವೆ ಮಂಡಳಿ ಅಧಿಕೃತ ಡಿಪಿಆರ್ ಸಿದ್ದಪಡಿಸಲು ಒಪ್ಪಿಗೆ ನೀಡಿತು. 2019ರಲ್ಲಿ ರೈಟ್ಸ್ ಸಂಸ್ಥೆ ಸರ್ಕಾರಕ್ಕೆ ವಿಸ್ತೃತ ಯೋಜನೆ ವರದಿ ಸಲ್ಲಿಕೆ ಮಾಡಿತು. ಬಳಿಕ ವೆಚ್ಚ ಕಡಿತಕ್ಕೆ ಸೂಚನೆ ನೀಡಲಾಯಿತು. 2020ರ ಬಜೆಟ್ನಲ್ಲಿ ಘೋಷಣೆಯಾದ ಯೋಜನೆಗೆ ಬಳಿಕ ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯೂ ಸಿಕ್ಕಿತು.