ಆರು ತಾಸು ಸಿಐಡಿಯಿಂದ ರಾಘವೇಶ್ವರ ಶ್ರೀಗಳ ವಿಚಾರಣೆ
ಬೆಂಗಳೂರು, ಅ.15 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳನ್ನು ಸಿಐಡಿ ಪೊಲೀಸರು ಮಂಗಳವಾರ ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಬುಧವಾರ ಸಹ ವಿಚಾರಣೆಗೆ ಹಾಜರಾಗುವಂತೆ ಶ್ರೀಗಳಿಗೆ ಸೂಚನೆ ನೀಡಿದ್ದು, ಇಂದು ವೈದ್ಯಕೀಯ ಪರೀಕ್ಷೆಗೊಳಪಡಿಸುವ ಸಾಧ್ಯತೆ ಇದೆ.
ಪ್ರೇಮಲತಾ ದಿವಾಕರ್ ಅವರು ಮಾಡಿರುವ ಅತ್ಯಾಚಾರ ಆರೋಪ, ಶ್ಯಾಮ ಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣ ಮತ್ತು ಪ್ರೇಮಲತಾ ದಿವಾಕರ್ ದಂಪತಿಯ ವಿರುದ್ಧ ದಾಖಲಾಗಿರುವ ಬ್ಲಾಕ್ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಶ್ರೀಗಳ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಹೇಳಿಕೆ ಪಡೆದುಕೊಂಡಿದ್ದಾರೆ. [ಶ್ಯಾಮ ಶಾಸ್ತ್ರಿ ಕೇಸ್, ರಾಘವೇಶ್ವರ ಶ್ರೀಗಳಿಗೆ ಜಾಮೀನು]

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಚೇರಿಗೆ ಆಗಮಿಸಿದ ರಾಘವೇಶ್ವರ ಶ್ರೀಗಳನ್ನು ಸಮ್ಮೇಳನ ಸಭಾಂಗಣದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸಿಐಡಿ ಎಸ್ಪಿ ಸಿರಿಗೌರಿ, ಡಿವೈಎಸ್ಪಿ ಪುರುಷೋತ್ತಮ್ ಹಾಗೂ ತನಿಖಾಧಿಕಾರಿ ಅಶೋಕ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದ್ದು ಈ ಸಂದರ್ಭದಲ್ಲಿ ಸ್ವಾಮೀಜಿ ಪರ ವಕೀಲರಾದ ಶಂಭುಶರ್ಮ ಮತ್ತು ಮೋಹನ್ ಹೆಗಡೆ ಅವರು ಸಹ ಸ್ವಾಮೀಜಿಗಳ ಜೊತೆಗಿದ್ದರು. [ಬೀಸೋ ದೊಣ್ಣೆಯಿಂದ ಸದ್ಯಕ್ಕೆ ಪಾರಾದ ಶ್ರೀಗಳು]
ವಕೀಲರ ಪ್ರತಿಕ್ರಿಯೆ : ನ್ಯಾಯಾಲಯದ ಆದೇಶದ ಪ್ರಕಾರ ಒಬ್ಬರು ವಕೀಲರು ಮತ್ತು ತನಿಖಾಧಿಕಾರಿ ಸಮ್ಮುಖದಲ್ಲಿ ಸ್ವಾಮೀಜಿ ವಿಚಾರಣೆ ನಡೆದಿದೆ. ಅದರ ವಿವರಣೆಯನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಸ್ವಾಮೀಜಿ ಪರ ವಕೀಲರಾದ ಶಂಭುಶರ್ಮ ಮತ್ತು ಮೋಹನ್ ಹೆಗಡೆ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಾಮೀಜಿ ಅವರನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಶ್ರೀಗಳೇ ತನಿಖೆ ಆಪೇಕ್ಷಿಸಿದ್ದರು. ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕೆಂಬುದು ಸ್ವಾಮೀಜಿಯವರ ಬಯಕೆಯಾಗಿದೆ. ತನಿಖೆ ಮುಗಿದ ಬಳಿಕ ಸತ್ಯಸಂಗತಿ ಎಲ್ಲರಿಗೂ ತಿಳಿಯಲಿದೆ ಎಂದು ವಕೀಲರು ಹೇಳಿದ್ದಾರೆ.
ಇಂದು ವಿಚಾರಣೆ : ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಸೆಷನ್ಸ್ ನ್ಯಾಯಾಲಯ ನೀಡಿರುವ ಜಾಮೀನು ರದ್ದು ಕೋರಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.












Click it and Unblock the Notifications